'ಡಿಕೆ ಶಿವಕುಮಾರ್ರಿಂದ ಅಧಿಕಾರ ಒದ್ದು ಕಿತ್ತುಕೊಳ್ಳುವ ಕಾರ್ಯ'
ಬೆಂಗಳೂರು, ಜನವರಿ 11: ಡಿ.ಕೆ.ಶಿವಕುಮಾರ್ ಅವರು ತಮ್ಮ ಗುರುಗಳ ಮಾತಿನಂತೆ ಅಧಿಕಾರವನ್ನು ಒದ್ದು ಕಿತ್ತುಕೊಳ್ಳುವ ಕಾರ್ಯದಲ್ಲಿ ಪ್ರವೃತ್ತರಾಗುತ್ತಾರೆ ಎಂಬ ವಿಷಯ ನಮ್ಮ ಕಿವಿಗೂ ಬೀಳುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಹೇಳಿದರು.
ಕಾಂಗ್ರೆಸ್ ಪಕ್ಷದೊಳಗಿನ ಬೆಳವಣಿಗೆಗಳ ಕುರಿತ ಮಾಧ್ಯಮಗಳ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರು ಮಾತನಾಡಿ, ಆಡಳಿತ ಪಕ್ಷದ ಜಗಳ ಈಗಾಗಲೇ ಬೀದಿಗೆ ಬಂದಿದೆ. ಇನ್ನೂ ಕೂಡ ರಾಜ್ಯದ ಜನರು ಅದನ್ನು ನೋಡಲಿದ್ದಾರೆ. ಆಡಳಿತ ಹಂಚಿಕೆ ಫಾರ್ಮುಲಾ ಏನಿದೆ ಎಂದು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯನವರು ಹೇಳಬೇಕು. ನಮಗಿರುವ ಮಾಹಿತಿಯಂತೆ ಸಿದ್ದರಾಮಯ್ಯನವರ ಅವಧಿ ಪೂರ್ಣಗೊಳ್ಳುತ್ತಿದೆ ಎಂದ ಅವರು, ಹಾಗಾಗಿಯೇ ಸಿದ್ದರಾಮಯ್ಯನವರೂ ದಾಳವನ್ನು ಉರುಳಿಸುತ್ತಿದ್ದಾರೆ. ಬೇರೆ ಬೇರೆ ಸಚಿವರ ಮೂಲಕ ಕಾಂಗ್ರೆಸ್ಸಿನಲ್ಲಿ ಡಿನ್ನರ್ ಪಾಲಿಟಿಕ್ಸ್ ಪ್ರಾರಂಭವಾಗಿದೆ ಎಂದು ತಿಳಿಸಿದರು.

ಸಚಿವರ ಮನೆಯಲ್ಲಿ ಕೆಲವು ಮಂತ್ರಿಗಳು, ಶಾಸಕರನ್ನು ಯಾವಾಗ ಸೇರಿಸಿದ್ದರೋ ಆಗಲೇ ಸಿದ್ದರಾಮಯ್ಯನವರ ಆಟ ಪ್ರಾರಂಭವಾದುದು ಜಗಜ್ಜಾಹೀರಾಗಿದೆ ಎಂದ ಅವರು, ಡಿ.ಕೆ.ಶಿವಕುಮಾರ್ ಅವರು ಈಚೆಗೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಸದನದಲ್ಲಿ ಒಂದು ಮಾತನ್ನು ಹೇಳಿದ್ದರು. ಹಿಂದೆ ಎಸ್.ಎಂ.ಕೃಷ್ಣ ಅವರು ಅಂದಿನ ಮುಖ್ಯಮಂತ್ರಿಗಳು ಇವರನ್ನು ಮಂತ್ರಿಮಂಡಲದಲ್ಲಿ ತೆಗೆದುಕೊಳ್ಳದೆ ಇದ್ದಾಗ, ಸಿಗಲಿಲ್ಲ ಅಂದ್ರೆ ಅಧಿಕಾರವನ್ನು ಒದ್ದು ಕಿತ್ಕೋಬೇಕು ಎಂದು ಗುರುಗಳು ಹೇಳಿದ್ರಂತೆ. ಅದನ್ನು 15 ವರ್ಷಗಳ ಬಳಿಕ ಡಿ.ಕೆ.ಶಿವಕುಮಾರ್ ಅವರು ನೆನಪು ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು. ಆ ಮಾತಿನ ಮರ್ಮ, ಉದ್ದೇಶ ನಿಮಗೂ ಅರ್ಥವಾಗಿರಬಹುದೆಂದು ಭಾವಿಸುವುದಾಗಿ ತಿಳಿಸಿದರು.
ಬಿಜೆಪಿ ನಾಯಕರು ಸಭೆ ನಡೆಸಿದ್ದೇವೆ. ಈ ಸಭೆ ಯಾವುದೇ ರೀತಿಯ ಬಲ ಪ್ರದರ್ಶನಕ್ಕೆ ಅಥವಾ ಯಾರನ್ನೋ ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂಬ ವಿಚಾರದೊಂದಿಗೆ ನಡೆದಿಲ್ಲ. ಪಕ್ಷವನ್ನು ಹೇಗೆ ಸರಿಪಡಿಸಬೇಕೆಂಬ ಕರ್ತವ್ಯ ನನ್ನದು ಕೂಡ ಇದೆ. ಪಕ್ಷದ ಹಿರಿಯರು, ವರಿಷ್ಠರು ಕೂಡ ಇದರ ಕುರಿತು ಮಾರ್ಗದರ್ಶನ ನೀಡಿದ್ದಾರೆ ಎಂದು ಹೇಳಿದರು.
ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆಯೂ ಇಂದಿನ ಸಭೆಯಲ್ಲಿ ಚರ್ಚಿಸಿದ್ದೇವೆ. ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವು ರಾಜ್ಯವನ್ನು ಅಧೋಗತಿಗೆ ತೆಗೆದುಕೊಂಡು ಹೋಗುತ್ತಿದೆ. ರಾಜ್ಯವು ಅಭಿವೃದ್ಧಿಶೂನ್ಯವಾಗಿದೆ. ಬಾಣಂತಿಯರು, ನವಜಾತ ಶಿಶುಗಳ ಸರಣಿ ಸಾವು ಸಂಭವಿಸುತ್ತಿದೆ. ಭ್ರಷ್ಟಾಚಾರ, ಆತ್ಮಹತ್ಯೆ ಪ್ರಕರಣಗಳು ಜಾಸ್ತಿಯಾಗಿದೆ; ಈ ಸರಕಾರದ ಬಗ್ಗೆ ರಾಜ್ಯದ ಜನರು ಬೇಸತ್ತಿದ್ದಾರೆ. ಆಡಳಿತ ಪಕ್ಷದ ಶಾಸಕರು ಕೂಡ ಮುಖ್ಯಮಂತ್ರಿಗಳ ಬಗ್ಗೆ, ಆಡಳಿತ ಪಕ್ಷದ ಬಗ್ಗೆ ಬೇಸತ್ತಿದ್ದಾರೆ ಎಂದು ತಿಳಿಸಿದರು.
ನಕ್ಸಲೀಯರ ಶರಣಾಗತಿ ಎಂಬುದು ಒಂದು ಪ್ರಹಸನದಂತಿದೆ. ಶಸ್ತ್ರಾಸ್ತ್ರಗಳು ಎಲ್ಲಿವೆ? ಪೊಲೀಸರು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲು ಸಾಧ್ಯವಾಗಿಲ್ಲ. ಏನಾಗುತ್ತಿದೆ ಎಂದು ಅರ್ಥವಾಗುತ್ತಿಲ್ಲ. ನಾನು ರಾಜ್ಯದ ಅಧ್ಯಕ್ಷನಾದ ಮೇಲೆ ಈ ಹಿಂದೆಯೇ ಸಭೆ ಆಯೋಜಿಸಬೇಕಿತ್ತು. ಕೆಲಸದ ಒತ್ತಡ, ಬೇರೆ ಬೇರೆ ಕಾರಣಕ್ಕೆ ಸಭೆ ಮಾಡಲು ಆಗಿರಲಿಲ್ಲ. ಪಕ್ಷವನ್ನು ಇನ್ನೂ ಬಲಪಡಿಸುವುದು, ಮುಂದಿನ ದಿನಗಳಲ್ಲಿ ಎಲ್ಲ ಸಮಾಜ, ಎಲ್ಲ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯನ್ನು ಹೇಗೆ ಎದುರಿಸಬೇಕೆಂಬ ವಿಷಯ ಚರ್ಚೆಯಾಗಿದೆ. ರಾಜಕೀಯ ಪಕ್ಷವೆಂದರೆ ಸಣ್ಣಪುಟ್ಟ ವ್ಯತ್ಯಾಸಗಳು, ಗೊಂದಲಗಳಿರುತ್ತವೆ. ಅವೆಲ್ಲವುಗಳನ್ನು ಕೇಂದ್ರದ ವರಿಷ್ಠರು ಗಮನಿಸುತ್ತಿದ್ದಾರೆ. ನಾವೆಲ್ಲರೂ ಒಗ್ಗೂಡಿ, ಪಕ್ಷವನ್ನು ಬಲಪಡಿಸಬೇಕೆಂಬ ಸಂದೇಶವನ್ನು ಯಡಿಯೂರಪ್ಪನವರು ಮತ್ತು ಹಿರಿಯರು ನೀಡಿದ್ದಾರೆ ಎಂದು ಮಾಹಿತಿ ನೀಡಿದರು.












Click it and Unblock the Notifications