ಟಿಪ್ಪು ಪಾಠ ಕೈಬಿಡುವಂತೆ ಸುರೇಶ್ ಕುಮಾರ್ ಮೇಲೆ ಒತ್ತಡವಿದೆ
ಬೆಂಗಳೂರು, ಆ. 27: ಮೈಸೂರು ಹುಲಿ ಟಿಪ್ಪು ಸುಲ್ತಾನ್ ವಿಚಾರ ಮತ್ತೆ ರಾಜ್ಯ ರಾಜಕಾರಣದಲ್ಲಿ ಪ್ರತಿಧ್ವನಿಸಿದೆ. ಪಠ್ಯದಲ್ಲಿ ಟಿಪ್ಪು ಸುಲ್ತಾನ್ ಪಾಠಗಳನ್ನು ಕೈಬಿಡಲಾಗಿದೆ ಎಂಬ ಆರೋಪದೊಂದಿಗೆ ಶುರುವಾದ ಚರ್ಚೆ, ಇದೀಗ ಬಿಜೆಪಿ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ಟಿಪ್ಪು ಹೊಗಳುವುದರೊಂದಿಗೆ, ಮತ್ತೊಂದು ಹಂತಕ್ಕೆ ಬಂದು ನಿಂತಿದೆ. ಈ ಮಧ್ಯೆ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಸಿ.ಎಂ. ಇಬ್ರಾಹಿಂ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. ಟಿಪ್ಪು ಸುಲ್ತಾನ್ ಪಾಠವನ್ನು ಪಠ್ಯದಿಂದ ಕೈಬಿಡುವಂತೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರ ಮೇಲೆ ಒತ್ತಡವಿದೆ ಎಂಬ ಹೇಳಿಕೆಯನ್ನು ಬೆಂಗಳೂರಿನಲ್ಲಿ ಅವರು ಕೊಟ್ಟಿದ್ದಾರೆ.
ಎಚ್. ವಿಶ್ವನಾಥ್ ಅವರು ಟಿಪ್ಪು ಹೊಗಳಿಗೆ ವಿಚಾರವಾಗಿ ಪ್ರತಿಕ್ರಿಯೆ ಕೊಡುವಾಗ, ಸುಮ್ಮನೆ ವಿರೋಧ ಮಾಡಬೇಕು ಅಂತಾ ವಿರೋಧ ಮಾಡೋದಲ್ಲ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ನನ್ನ ಜೈಲ್ ಮೇಟ್. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲ್ ಮೇಟ್ ಆಗಿದ್ದೆವು. ಅವರ ಬಗ್ಗೆ ನನಗೆ ಅಪಾರವಾದ ಪ್ರೀತಿಯಿದೆ. ನಾನು ಪಕ್ಷಾತೀತ ರಾಜಕಾರಣ ಮಾಡುವವನು. ಆದರೂ ಒಂದು ವಿಚಾರ ಹೇಳಬೇಕಿದೆ. ಪಠ್ಯದಿಂದ ಟಿಪ್ಪು ಪಾಠಗಳನ್ನು ಕೈಬಿಡುವುದಕ್ಕೆ ಸಚಿವ ಸುರೇಶ್ ಕುಮಾರ್ ಅವರ ಮೇಲೆ ಒತ್ತಡವಿದೆ ಎಂದು ಸಿ.ಎಂ. ಇಬ್ರಾಹಿಂ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.

ಜೊತೆಗೆ ಬಿಜೆಪಿಯವರಿಗೆ ಶೃಂಗೇರಿ ಸ್ವಾಮೀಜಿಗಳ ಮೇಲೆ ನಂಬಿಕೆ ಇದೆಯೋ ಇಲ್ಲವೋ? ಅವರ ಮೇಲೆ ನಂಬಿಕೆ ಇದ್ದರೆ ಕೇಳಿ ತಿಳಿದುಕೊಳ್ಳಲಿ. ಶೃಂಗೇರಿಯಲ್ಲಿ ಒಂದು ಸಾವಿರ ಜನ ಬ್ರಾಹ್ಮಣರಿಗೆ ಉಟದ ವ್ಯವಸ್ಥೆ ಟಿಪ್ಪು ಸುಲ್ತಾನ್ ಅವರ ಆಸ್ಥಾನದಿಂದ ಮಾಡಲಾಗುತ್ತಿತ್ತು. ಅದರೊಂದಿಗೆ ನಂಜುಂಡೇಶ್ವರ ದೇವಸ್ಥಾನಕ್ಕೆ ಟಿಪ್ಪು ಕೊಡುಗೆ ಬಗ್ಗೆ ಬಿಜೆಪಿಯವರು ಸುತ್ತೂರು ಶ್ರೀಗಳ ಬಳಿಯೂ ಕೇಳಿ ತಿಳಿದುಕೊಳ್ಳಲಿ ಎಂದು ಸಿ.ಎಂ. ಇಬ್ರಾಹಿಂ ಹೇಳಿಕೆ ಕೊಟ್ಟಿದ್ದಾರೆ.












Click it and Unblock the Notifications