ಕರ್ನಾಟಕದಲ್ಲಿ ಭಾನುವಾರಗಳಂದು ಪೆಟ್ರೋಲ್ ಬಂಕ್ ಬಂದ್ ಆಗಲ್ಲ
ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕರೇ ಇಂಧನ ಉಳಿಸಿ ಎಂದು ಮನವಿ ಮಾಡಿದ್ದನ್ನು ತಪ್ಪಾಗಿ ಅರ್ಥೈಸಲಾಗಿದೆ. ಕರ್ನಾಟಕದಲ್ಲಿ ಭಾನುವಾರಗಳಂದು ಪೆಟ್ರೋಲ್ ಬಂಕ್ ಬಂದ್ ಮಾಡಲ್ಲ ಎಂದು ಸಂಬಂಧಪಟ್ಟ ಒಕ್ಕೂಟದ ಅಧ್ಯಕ್ಷರೇ ತಿಳಿಸಿದ್ದಾರೆ
ಬೆಂಗಳೂರು, ಏಪ್ರಿಲ್ 20: ಎಲ್ಲ ಭಾನುವಾರಗಳಂದು ಪೆಟ್ರೋಲ್ ಬಂಕ್ ಗಳನ್ನು ಬಂದ್ ಮಾಡುವುದಕ್ಕೆ ನಮ್ಮ ಒಪ್ಪಿಗೆ ಇಲ್ಲ ಎಂದು ಕರ್ನಾಟಕ ಸ್ಟೇಟ್ ಫೆಡರೇಷನ್ ಆಫ್ ಪೆಟ್ರೋಲಿಯಂ ಡೀಲರ್ಸ್ ಅಧ್ಯಕ್ಷ ಎಚ್.ಎಸ್.ಮಂಜಪ್ಪ ತಿಳಿಸಿರುವುದಾಗಿ ಪ್ರಜಾವಾಣಿ ವರದಿ ಮಾಡಿದೆ. "ತಮಿಳುನಾಡಿನ ಪೆಟ್ರೋಲಿಯಂ ವರ್ತಕರ ಸಂಘದ ಪದಾಧಿಕಾರಿ ಸುರೇಶ್ ಕುಮಾರ್ ಪ್ರತಿ ಭಾನುವಾರ ಪೆಟ್ರೋಲ್ ಬಂಕ್ ಮುಚ್ಚುವುದಾಗಿ ಹೇಳಿದ್ದರು.
ಆ ನಿರ್ಧಾರಕ್ಕೆ ನಮ್ಮ ಬೆಂಬಲ ಇಲ್ಲ ಎಂದು ಮಂಜಪ್ಪ ತಿಳಿಸಿದ್ದಾರೆ. ಸಾರ್ವಜನಿಕರು ಭಾನುವಾರದ ದಿನ ಇಂಧನ ಕಡಿಮೆ ಬಳಸಿ ಎಂದು ಪ್ರಧಾನಿ ಮನವಿ ಮಾಡಿದ್ದರು. ಅದನ್ನು ತಪ್ಪಾಗಿ ತಿಳಿದುಕೊಂಡ ಸುರೇಶ್ ಈ ರೀತಿ ಹೇಳಿಕೆ ನೀಡಿದ್ದಾರೆ. ತುರ್ತು ಸಂದರ್ಭದಲ್ಲಿ ಮಾತ್ರ ಇಂಧನ ಪೂರೈಸಲು ಸಿಬ್ಬಂದಿ ನೇಮಿಸುವುದಾಗಿ ಹೇಳಿದ್ದಾರೆ. ಯಾರಿಗೆ ತುರ್ತಿದೆ ಎಂದು ನಿರ್ಧರಿಸುವುದು ಹೇಗೆ? ಅವರ ಹೇಳಿಕೆಯೇ ಹಾಸ್ಯಾಸ್ಪದ ಎಂದು ಮಂಜಪ್ಪ ಹೇಳಿದ್ದಾರೆ.[ಕರ್ನಾಟಕ ಸೇರಿದಂತೆ 8 ರಾಜ್ಯಗಳಲ್ಲಿ ಭಾನುವಾರ ಪೆಟ್ರೋಲ್ ರಜಾ]

ಕರ್ನಾಟಕ ವರ್ತಕರ ನಿರ್ಧಾರವನ್ನು ಸುರೇಶ್ ಕುಮಾರೋ ಅಥವಾ ಇನ್ಯಾವುದೋ ಸಂಘಟನೆ ಹೇಗೆ ತೆಗೆದುಕೊಳ್ಳುತ್ತದೆ? ಆದ್ದರಿಂದ ಈ ವಿಚಾರದಲ್ಲಿ ಯಾವುದೇ ಆತಂಕ ಬೇಡ. ಮೇ ಆರನೇ ತಾರೀಕು ದೆಹಲಿಯಲ್ಲಿ ಅಖಿಲ ಭಾರತ ಪೆಟ್ರೋಲಿಯಂ ವರ್ತಕರ ಸಂಘದ ಸಭೆ ನಡೆಯುತ್ತದೆ. ಅಲ್ಲಿ ಈ ಬಗ್ಗೆ ಚರ್ಚಿಸುತ್ತೇವೆ. ಸಾರ್ವಜನಿಕರಿಗೆ ತೊಂದೆಯಾಗುವ ಯಾವ ನಿರ್ಧಾರವನ್ನೂ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.












Click it and Unblock the Notifications