ಜಿಮ್ನಿಂದ ಹೃದಯಕ್ಕೆ ಹಾನಿಯಾಗುತ್ತದೆ ಎಂಬ ಭಯ ಬೇಡ!
ಚಿಕ್ಕಬಳ್ಳಾಪುರ, ನ.1: ಜಿಮ್ ಮಾಡುವುದರಿಂದ ಹೃದಯ ಸಮಸ್ಯೆಯಾಗುತ್ತದೆ ಎಂಬ ಭಯದಲ್ಲಿ ಇರುವವರಿಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಕೆಲವೊಂದು ಸ್ಪಷ್ಟನೆಗಳನ್ನು ನೀಡಿದ್ದಾರೆ.
ನಟ ಪುನೀತ್ರಾಜ್ಕುಮಾರ್ ಅವರು ತೀವ್ರ ಹೃದಯಾಘಾತದಿಂದ ಕಳೆದ ಶುಕ್ರವಾರ ನಿಧನರಾದರು. ಅತಿಯಾಗಿ ಜಿಮ್ ಮಾಡುವುದರಿಂದ ಹೃದಯ ಸಮಸ್ಯೆ ಉಂಟಾಗುತ್ತದೆ ಎಂಬ ಅಭಿಪ್ರಾಯ ಹರಡಿಕೊಂಡಿದೆ. ಕೆಲವರು ಜಿಮ್ ಮಾಡಬಾರದು ಎಂಬುದನ್ನೂ ಪ್ರಚಾರ ಮಾಡುತ್ತಿದ್ದಾರೆ. ಈ ಎಲ್ಲರದರ ಮಧ್ಯೆ ಸ್ವತಃ 20 ವರ್ಷಗಳಿಂದ ಜಿಮ್ ಮಾಡುತ್ತಿರುವ ಡಾ.ಸುಧಾಕರ್ ಜಿಮ್ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಜಿಮ್ಗಳಲ್ಲಿ ಮುಂದಿನ ದಿನಗಳಲ್ಲಿ ಆಗುವ ಬದಲಾವಣೆಗಳ ಬಗ್ಗೆಯೂ ತಿಳಿಸಿದ್ದಾರೆ.
"ಜಿಮ್ನಿಂದ ಸಮಸ್ಯೆಯಾಗುತ್ತದೆ ಎಂಬ ತಪ್ಪು ಎಂಬ ಭಾವನೆ ಬೇಡ. ಜಿಮ್, ಯೋಗ, ಕ್ರೀಡೆಯಿಂದ ಯಾವುದೇ ಅಪಾಯ ಇಲ್ಲ. ಕೆಲವರಲ್ಲಿ ಮಾತ್ರ ಏಕೆ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ ಎಂದು ಅಧ್ಯಯನ ಮಾಡಲಾಗುತ್ತಿದೆ. ಕೆಲವರು ಮೊದಲು ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡು ನಂತರ ಜಿಮ್ ಮಾಡಬೇಕಾಗುತ್ತದೆ. ಜಿಮ್ ನಿಂದಲೇ ಹೃದಯ ತೊಂದರೆ ಬರುತ್ತದೆ ಎಂಬುದು ಸುಳ್ಳು" ಎಂದು ಸಚಿವ ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
"ನಾನು ಕೂಡ 20 ವರ್ಷದಿಂದ ಜಿಮ್ಗೆ ಹೋಗುತ್ತಿದ್ದೇನೆ. ಆದರೆ ವಯಸ್ಸು, ಆರೋಗ್ಯದ ಆಧಾರವಾಗಿ ವ್ಯಾಯಾಮ ಮಾಡಬೇಕಾಗುತ್ತದೆ. ನಟ ಪುನೀತ್ ಅವರಿಗೆ ಹೀಗೆ ಆಗಿರುವುದರಿಂದ ಜನರು ಭಯ ಪಟ್ಟುಕೊಳ್ಳುತ್ತಿದ್ದಾರೆ. ಜಿಮ್ಗಳ ಬಗ್ಗೆ ತಪ್ಪು ಕಲ್ಪನೆ ಇಟ್ಟುಕೊಂಡು ವ್ಯಾಯಾಮಗಳಿಂದ ವಿಮುಕ್ತರಾಗುವ ನಿರ್ಧಾರ ಮಾಡುವುದು ಸರಿಯಲ್ಲ" ಎಂದು ಸಚಿವರು ಹೇಳಿದರು.
ಕೆಲವರು ಮೊದಲು ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡು ನಂತರ ಜಿಮ್ ಮಾಡಬೇಕಾಗುತ್ತದೆ. ಜಿಮ್ನಿಂದಲೇ ಹೃದಯ ತೊಂದರೆ ಬರುತ್ತದೆ ಎಂಬುದು ಸುಳ್ಳು. ಕೆಲವರಿಗೆ ಅನುವಂಶೀಯವಾಗಿ ಹೃದಯ ಸಮಸ್ಯೆ ಇರುತ್ತದೆ. ಅಂತಹವರು ಎಚ್ಚರದಿಂದ ಇರಬೇಕು ಎಂದು ಸಚಿವರು ತಿಳಿಸಿದ್ದಾರೆ.
ಜಿಮ್ಗಳಿಗೆ ಹೊಸ ಮಾರ್ಗಸೂಚಿ:
ಜಿಮ್ಗಳಲ್ಲಿ ಕೆಲವು ಭಾರವಾದ ಉಪಕರಣಗಳನ್ನು ಬಳಸುವುದರಿಂದ ಅವುಗಳನ್ನು ಎತ್ತುವಂತವರಿಗೆ ಹೃದಯಸಮಸ್ಯೆ ಆಗಬಹುದು ಎಂಬ ಕಾರಣಕ್ಕೆ ಜಿಮ್ಗಳಿಗಾಗಿಯೇ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುತ್ತಿದೆ.
"ಜಿಮ್, ಯೋಗ ಕೇಂದ್ರದಲ್ಲಿ ಸಮಸ್ಯೆಯಾದರೆ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳ ಜೊತೆಗೆ ಸಿಪಿಆರ್ (ಕಾರ್ಡಿಯಾ ಪಲುಮನರಿ ರಿಸಸೈಟೇಷನ್) ಸೇರಿ ಮೊದಲಾದ ತುರ್ತು ಚಿಕಿತ್ಸೆ ವ್ಯವಸ್ಥೆ ಲಭ್ಯವಿರಬೇಕು ಎಂಬ ನಿಯಮಗಳನ್ನು ತರಲಾಗುತ್ತದೆ. ಇದಕ್ಕಾಗಿ ತಜ್ಞರೊಂದಿಗೆ ಚರ್ಚಿಸಿ ನಿರ್ದಿಷ್ಟ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು" ಎಂದು ಸಚಿವರು ಹೇಳಿದರು.
ಗಡಿಭಾಗದಲ್ಲಿ ಕನ್ನಡ ಬೆಳೆಸಲು ಒತ್ತು:
ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾಡಳಿತ ವತಿಯಿಂದ ಏರ್ಪಡಿಸಲಾಗಿದ್ದ 66ನೇ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಸಚಿವ ಡಾ.ಕೆ. ಸುಧಾಕರ್, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಗಡಿಭಾಗದ ಜಿಲ್ಲೆಗಳಲ್ಲಿ ಕನ್ನಡವನ್ನು ಹೆಚ್ಚಾಗಿ ಬೆಳೆಸುವ ಕಡೆ ಒತ್ತು ನೀಡಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಕನ್ನಡವನ್ನು ಪ್ರೀತಿಸುವುದರೊಂದಿಗೆ ಅನ್ಯಭಾಷೆಗಳನ್ನೂ ಕಲಿಯಬೇಕು. ಆದರೆ ಕನ್ನಡವನ್ನು ಉಸಿರಾಗಿಸಿಕೊಳ್ಳಬೇಕು. ಯುವಜನರಲ್ಲಿ ಹೆಚ್ಚಾಗಿ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು. ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಗಡಿಭಾಗದ ಜಿಲ್ಲೆಗಳಲ್ಲಿ ಕನ್ನಡವನ್ನು ಬೆಳೆಸುವ ಕೆಲಸವನ್ನು ಮಾಡಬೇಕು. ಅದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು 'ಕನ್ನಡಕ್ಕಾಗಿ ನಾವು' ಅಭಿಯಾನ ಆರಂಭಿಸಿದ್ದಾರೆ. ಕನ್ನಡದ ಗೀತೆ ಗಾಯನ, ಕನ್ನಡ ಬಳಕೆ ಮೊದಲಾದ ಕಾರ್ಯಕ್ರಮ ನಡೆದಿದೆ ಎಂದರು.
ಜಿಲ್ಲೆಯಲ್ಲಿ ಎಚ್.ಎನ್.ವ್ಯಾಲಿಯಿಂದ 43 ಕೆರೆಗಳನ್ನು ತುಂಬಿಸಲಾಗಿದೆ. ಕಿಸಾನ್ ಸಮ್ಮಾನ್ ನಡಿ ರೈತರಿಗೆ 147 ಕೋಟಿ ರೂ. ನೀಡಲಾಗಿದೆ. 4 ಸಾವಿರ ಎಕರೆಯನ್ನು ಕೈಗಾರಿಕೆ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಮೂಲಕ ಪ್ರತಿ ಯುವಜನರಿಗೆ ಕೆಲಸ ದೊರೆಯಲಿದೆ. ಚಿಂತಾಮಣಿ, ಗೌರಿಬಿದನೂರಿನಲ್ಲೂ ಕೈಗಾರಿಕೆ ಅಭಿವೃದ್ಧಿಪಡಿಸಲಾಗುತ್ತಿದೆ. ಚಿಕ್ಕಬಳ್ಳಾಪುರವನ್ನು ಕೈಗಾರಿಕೆಗೆ ಸೂಕ್ತವಾಗಿ ಬೆಳೆಸಲಾಗುತ್ತಿದೆ. ಆರೋಗ್ಯ ಅಭಿವೃದ್ಧಿಗೆ ವೈದ್ಯಕೀಯ ಕಾಲೇಜು ನಿರ್ಮಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಬಾವಿಗಳು ತುಂಬಿದೆ. ರೈತರಿಗೆ ಇದರಿಂದ ಬಹಳ ಅನುಕೂಲವಾಗಿದೆ. ಆದರೆ ಕೆಲವೆಡೆ ಬೆಳೆಹಾನಿಯಾಗಿದ್ದು, ನಷ್ಟ ಪರಿಹಾಕ್ಕೆ ವರದಿ ನೀಡಲು ಸೂಚಿಸಲಾಗಿದೆ. ಶೀಘ್ರದಲ್ಲಿ ಪರಿಹಾರ ನೀಡಲಾಗುವುದು ಎಂದರು.