ಗ್ರಾ.ಪಂ. ನಾಮ ನಿರ್ದೇಶನ: ಯಡಿಯೂರಪ್ಪ, ಈಶ್ವರಪ್ಪ ಮಧ್ಯೆ ಮೂಡದ ಒಮ್ಮತ?
ಬೆಂಗಳೂರು, ಮೇ 25: ಕೊರೊನಾ ವೈರಸ್, ಲಾಕ್ಡೌನ್ ಸಂಕಷ್ಟಗಳ ಬೆನ್ನಲ್ಲೆ ಇದೀಗ ಮತ್ತೊಂದು ಹಂತದ ರಾಜಕೀಯ ಮೇಲಾಟ ಆರಂಭವಾಗಿದೆ. ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳ ಅಧಿಕಾರಾವಧಿ ಜೂನ್-ಜುಲೈ ತಿಂಗಳಿನಲ್ಲಿ ಮುಗಿಯಲಿದ್ದು, ಚುನಾವಣೆ ನಡೆಸದಿರಲು ರಾಜ್ಯ ಬಿಜೆಪಿ ಸರ್ಕಾರ ನಿರ್ಧಾರ ಮಾಡಿದೆ. ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡಿ, ಆಡಳಿತಾಧಿಕಾರಿ ಹಾಗೂ ನಾಮ ನಿರ್ದೇಶಿತ ಸದಸ್ಯರ ನೇಮಕ ಮಾಡುವ ಮೂಲಕ ಗ್ರಾಮೀಣ ಭಾಗದಲ್ಲಿ ತಳಮಟ್ಟದಲ್ಲಿ ಪಕ್ಷ ಕಟ್ಟಲು ಬಿಜೆಪಿ ಮುಂದಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
Recommended Video
ಆದರೆ ಗ್ರಾಮ ಪಂಚಾಯಿತಿಗಳಿಗೆ ಸದಸ್ಯರ ನಾಮ ನಿರ್ದೇಶನ ಮಾಡುವುದಕ್ಕೆ ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿಯೂ ಬಂದಿದೆ. ಅದಕ್ಕೆ ಕಾರಣವೂ ಇದೆ!

ನಾಮನಿರ್ದೇಶಿತ ಸದಸ್ಯರು
ನಿಗದಿಯಂತೆ ಗ್ರಾಮ ಪಂಚಾಯತಿಗಳ ಕಾಲಾವಧಿ ಇದೇ ಜೂನ್-ಜುಲೈ ತಿಂಗಳಿಗೆ ಮುಗಿಯಲಿದೆ. ಹೀಗಾಗಿ ಈಗಾಗಲೇ ಚುನಾವಣೆ ಪ್ರಕ್ರಿಯೆ ಶುರುವಾಗಬೇಕಿತ್ತು.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಿ ಆಡಳಿತಾಧಿಕಾರಿ ಹಾಗೂ ನಾಮನಿರ್ದೇಶಿತ ಸದಸ್ಯರನ್ನು ನೇಮಕ ಮಾಡಲು ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ. ಮುಂದಿನ ವರ್ಷ ಜಿಲ್ಲಾ ಪಂಚಾಯಿತಿ ಹಾಗು ತಾಲೂಕು ಪಂಚಾಯಿತಿ ಚುನಾವಣೆ ಜೊತೆಗೆ ಗ್ರಾಮ ಪಂಚಾಯಿತಿ ಚುನಾವಣೆ ಎದುರಿಸುವುದು ರಾಜ್ಯ ಬಿಜೆಪಿಯ ಲೆಕ್ಕಾಚಾರ. ಕೇವಲ ಅದೊಂದೆ ಲೆಕ್ಕಾಚಾರ ಬಿಜೆಪಿಗೆ ಇಲ್ಲ ಎನ್ನುವ ಮಾಹಿತಿಯೂ ಇದೆ.

ಪಕ್ಷ ಸಂಘಟನೆ ಉದ್ದೇಶ
ಗ್ರಾಮ ಪಂಚಾಯತಿಗಳಿಗೆ ನಾಮನಿರ್ದೇಶಿತ ಸದಸ್ಯರ ನೇಮಕ ಮಾಡುವುದರಿಂದ ಬಿಜೆಪಿಗೆ ಲಾಭವಾಗಲಿದೆ. ತನ್ನ ಕಾರ್ಯಕರ್ತರನ್ನೇ ನಾಮನಿರ್ದೇಶನ ಮಾಡಲು ಬಿಜೆಪಿ ತಯಾರಿ ಮಾಡಿಕೊಂಡಿದೆ. ತಳ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರಿಗೆ ಅಧಿಕಾರ ಕೊಡುವುದು, ಆ ಮೂಲಕ ಪಕ್ಷವನ್ನು ಗ್ರಾಮೀಣ ಭಾಗದಲ್ಲಿ ಬೂತ್ ಮಟ್ಟದಲ್ಲಿ ಮಜಬೂತ್ ಮಾಡುವುದು ಬಿಜೆಪಿ ಹಾಗೂ ಆರ್ಎಸ್ಎಸ್ ಉದ್ದೇಶ ಎನ್ನಲಾಗಿದೆ.
ಮೊದಲ ಹಂತದಲ್ಲಿ 6 ತಿಂಗಳಿಗೆ ಹಾಗೂ ನಂತರ ಮತ್ತೆ ಅವರನ್ನೇ 6 ತಿಂಗಳಿಗೆ ಮುಂದುವರೆಸುವುದು ಬಿಜೆಪಿಯ ತೀರ್ಮಾನ. ಆದರೆ ಇದನ್ನು ಸಿಎಂ ಯಡಿಯೂರಪ್ಪ ಒಪ್ಪುತ್ತಿಲ್ಲ.

ವಿರೋಧ ಪಕ್ಷಗಳ ವಿರೋಧ!
ರಾಜ್ಯದಲ್ಲಿ ಒಟ್ಟು 6,041 ಗ್ರಾಮ ಪಂಚಾಯಿತಿಗಳಿದ್ದು 90 ಸಾವಿರ ಚುನಾಯಿತ ಸದಸ್ಯರಿದ್ದಾರೆ. ಕೊರೊನಾ ವೈರಸ್, ಲಾಕ್ಡೌನ್ ನೆಪದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಚುನಾವಣೆ ನಡೆಸದೇ ತನ್ನ 90 ಸಾವಿರ ಬಿಜೆಪಿ ಕಾರ್ಯಕರ್ತರಿಗೆ ಪುನರ್ವಸತಿ ಕಲ್ಪಿಸಲು ಮುಂದಾಗಿದೆ ಎಂಬುದು ವಿರೋಧ ಪಕ್ಷಗಳ ಆರೋಪ. ಸಧ್ಯ ಗ್ರಾಮ ಪಂಚಾಯತಿಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತ ಸದಸ್ಯರೆ ಹೆಚ್ಚಾಗಿ ಇದ್ದಾರೆ.
ನಾಮನಿರ್ದೇಶನ ಮಾಡುವುದರಿಂದ ತಳಮಟ್ಟದಲ್ಲಿ ಅಧಿಕಾರ ವಿರೋಧ ಪಕ್ಷಗಳಿಂದ ಆಡಳಿತ ಪಕ್ಷದ ಪಾಲಾಗುತ್ತದೆ. ಅದರ ಪರಿಣಾಮ ಮುಂದೆ ನಡೆಯುವ ಪಂಚಾಯಿತಿ ಚುನಾವಣೆಗಳ ಮೇಲಾಗುತ್ತದೆ. ಹೀಗಾಗಿ ಈಗ ಇರುವ ಸದಸ್ಯರನ್ನೇ ಮುಂದುವರೆಸಿ ಅಥವಾ ಚುನಾವಣೆ ನಡೆಸಿ ಎಂಬುದು ಕಾಂಗ್ರೆಸ್ ಹಾಗು ಜೆಡಿಎಸ್ ನಾಯಕರ ಒತ್ತಾಯ.

ಯಡಿಯೂರಪ್ಪ ಕೂಡ ವಿರೋಧ
6,041 ಗ್ರಾ.ಪಂ.ಗಳಿಗೆ 90 ಸಾವಿರ ನಾಮನಿರ್ದೇಶಿತ ಸದಸ್ಯರ ನೇಮಕಾತಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಮಧ್ಯೆ ಸಹಮತ ವ್ಯಕ್ತವಾಗುತ್ತಿಲ್ಲ.
ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಆರ್ಎಸ್ಎಸ್ ಹಾಗೂ ರಾಜ್ಯ ಬಿಜೆಪಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಒತ್ತಡ ಹಾಕಿವೆ ಎನ್ನಲಾಗಿದೆ. ಆದರೆ ಇದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪುತ್ತಿಲ್ಲ. ನಾಮ ನಿರ್ದೇಶನ ಮಾಡುವುದು ಸರಿಯಲ್ಲ. ಪ್ರತಿದಿನ ವಿರೋಧ ಪಕ್ಷಗಳಿಗೆ ನಾನು ಉತ್ತರ ಕೊಡಬೇಕಾಗುತ್ತದೆ ಎಂಬುದು ಸಿಎಂ ವಾದ.
ಗ್ರಾ.ಪಂ.ಚುನಾವಣೆ ಮುಂದೂಡಿಕೆಗೆ ಶಿವಮೊಗ್ಗ ಗ್ರಾ.ಪಂ.ಸದಸ್ಯರ ವಿರೋಧ

ಮನ್ರೆಗಾ ಹಣದ ಲೆಕ್ಕಾಚಾರ
ಕೊರೊನಾ ವೈರಸ್ ಹಾಗೂ ಲಾಕ್ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಭರಪೂರ್ ಅನುದಾನ ಕೊಡಲಿದೆ. ಕೇಂದ್ರ ಸರ್ಕಾರದ ಹಣ ನೇರವಾಗಿ ಗ್ರಾಮೀಣ ಭಾಗಕ್ಕೆ ಅದರಲ್ಲೂ ಗ್ರಾಮ ಪಂಚಾಯಿತಿಗಳಿಗೆ ತಲುಪಲಿದೆ. ಪಂಚಾಯಿತಿಗಳ ಮೂಲಕ ಗ್ರಾಮೀಣ ಭಾಗದಲ್ಲಿ ಯದ್ಯೋಗ ಖಾತ್ರಿ ಯೋಜನೆಯಡಿ ಸಾವಿರಾರು ಕೋಟಿ ರೂಪಾಯಿಗಳ ಹರಿದು ಬರಲಿದೆ.
ರಾಜ್ಯ ಬಿಜೆಪಿ ಆ ಹಣದ ಮೇಲೆ ಕಣ್ಣಿಟ್ಟಿದೆ ಎಂಬುದು ಮಾಜಿ ಗ್ರಾಮೀಣಾಭಿವೃದ್ಧಿ ಸಚಿವರೊಬ್ಬರ ಅಭಿಪ್ರಾಯ. ಹೀಗಾಗಿ ಯಡಿಯೂರಪ್ಪ ಅವರ ಮೇಲೆ ಒತ್ತಡ ಹಾಕಿ ಬಿಜೆಪಿ ಹಾಗೂ ಆರ್ಎಸ್ಎಸ್ ನಾಮನಿರ್ದೇಶನ ಮಾಡಲೇಬೇಕು ಎಂದು ಒತ್ತಡ ಹಾಕುತ್ತಿವೆ. ಗ್ರಾ.ಪಂ.ಗಳಿಗೆ ನಾಮನಿರ್ದೇಶನ ಕಾನೂನು ಬಾಹೀರ ಎಂದೂ ಅವರು ಮಾಹಿತಿ ಕೊಟ್ಟಿದ್ದಾರೆ.

ಆಯೋಗಕ್ಕೆ ಕಾಂಗ್ರೆಸ್ ದೂರು
ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡದಂತೆ ಈಗಾಗಲೇ ರಾಜ್ಯ ಕಾಂಗ್ರೆಸ್ ಘಟಕ ರಾಜ್ಯ ಚುನಾವಣಾ ಆಯೋಗಕ್ಕೆ ಆಗ್ರಹಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಎಚ್.ಕೆ. ಪಾಟೀಲ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ರಾಜ್ಯ ಚುನಾವಣಾ ಆಯುಕ್ತರಿಗೆ ಚುನಾವಣೆ ನಡೆಸುವಂತೆ ಮನವಿ ಮಾಡಿದ್ದಾರೆ.
ಸಂವಿಧಾನದ ಅನುಚ್ಛೇದ 243ಇ(3)ರ ಅನ್ವಯ ಹಾಗೂ ರಾಜ್ಯ ಕಾಯ್ದೆಯ 308(ಎಎ)ನಲ್ಲಿ ಸ್ಪಷ್ಟವಾಗಿ ನಿರ್ದೇಶಿಸಿರುವಂತೆ ಪಂಚಾಯತಿಯ ಅವಧಿ ಮುಗಿಯುವ ಮೊದಲು ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸುವುದು ಖಡ್ಡಾಯವಾಗಿದೆ. ಚುನಾವಣಾ ಆಯೋಗ ಸಂವಿಧಾನವನ್ನು ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ ರಾಜ್ ಕಾಯ್ದೆ 1993ನ್ನು ದಿಕ್ಕರಿಸುವಂತಿಲ್ಲ ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.

ಎಜಿ ಪ್ರಭುಲಿಂಗ ನಾವಡಗಿ ವರದಿ
ಸಂಕಷ್ಟದ ಸಮಯದಲ್ಲಿ ಗ್ರಾಮ ಪಂಚಾಯಿತಿಗಳಿಗೆ ನಾಮನಿರ್ದೇಶನ ಮಾಡಬಹುದು ಎಂದು ರಾಜ್ಯ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಅವರಿಂದ ರಾಜ್ಯ ಕಾನೂನು ಇಲಾಖೆ ಸಲಹೆ ಪಡೆದುಕೊಂಡಿದೆ ಎಂಬ ಮಾಹಿತಿಯಿದೆ. ಹೀಗಾಗಿ ರಾಜ್ಯ ಬಿಜೆಪಿ ಸರ್ಕಾರ ಬಹುತೇಕವಾಗಿ 6,041 ಪಂಚಾಯಿತಿಗಳಿಗೆ ನಾಮ ನಿರ್ದೇಶನ ಮಾಡುವುದು ಖಚಿತ. ಆದರೆ ಇದನ್ನು ವಿರೋಧಿಸಿ ಕಾನೂನು ಹೋರಾಟ ಮಾಡಲು ವಿರೋಧ ಪಕ್ಷಗಳು ಸಿದ್ಧತೆ ನಡೆಸಿವೆ.
ಯಾವುದೇ ಕಾರಣಕ್ಕೂ ತಳಮಟ್ಟದಲ್ಲಿ ತಮ್ಮ ಪಕ್ಷ ದುರ್ಬಲವಾಗದಂತೆ ನೋಡಿಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಿರ್ಧಾರ ಮಾಡಿವೆ. ಹೀಗಾಗಿ ಗ್ರಾಮ ಪಂಚಾಯಿತಿಗಳ ಚುನಾವಣೆ ವಿಷಯದಲ್ಲಿ ಜಂಟಿ ಹೋರಾಟಕ್ಕೆ ಪ್ರಮುಖ ವಿರೋಧ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮಾತುಕತೆ ನಡೆಸುವೆ ಎಂಬ ಮಾಹಿತಿಯಿದೆ.












Click it and Unblock the Notifications