ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನವಿಲ್ಲ ನಿಜ, ಆದರೂ.....!
ಬೆಂಗಳೂರು, ಡಿ. 21: ರಾಷ್ಟ್ರೀಯ ಪಕ್ಷ ಬಿಜೆಪಿಯೊಂದಿಗೆ ರಾಜ್ಯದ ಪ್ರಬಲ ಪ್ರಾದೇಶಿಕ ಪಕ್ಷ ಜೆಡಿಎಸ್ ವಿಲೀನದ ವಿಚಾರ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಜೆಡಿಎಸ್ ನಾಯಕ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಈಗಾಗಲೇ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ. ಆದರೆ ಈ ಚರ್ಚೆ ಎಲ್ಲಿ ಶುರುವಾಯ್ತು ಎಂಬುದನ್ನು ಇದೀಗ ಎರಡೂ ಪಕ್ಷಗಳ ನಾಯಕರು ಹುಡುಕುತ್ತಿದ್ದಾರೆ ಎಂಬ ಕುತೂಹಲಕಾರಿ ವಿಚಾರ ಬೆಳಕಿಗೆ ಬಂದಿದೆ.
ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಿಜೆಪಿ ಕುರಿತು ಮೃದು ಧೋರಣೆಯನ್ನು ಪ್ರಕಟಿಸುತ್ತಿರುವುದು ಜೆಡಿಎಸ್ ಶಾಸಕರಲ್ಲಿಯೂ ಆತಂಕ ಸೃಷ್ಟಿ ಮಾಡಿತ್ತು. ಜೊತೆಗೆ ಇದೀಗ ವಿಲೀನದ ಚರ್ಚೆ ಶುರುವಾದ ಬಳಿಕವಂತೂ ಮತ್ತೊಂದು ಹಂತದ ವಿಪ್ಲವ ಜೆಡಿಎಸ್ನಲ್ಲಿ ಶುರುವಾಗಿದೆ. ಈ ಚರ್ಚೆಯಿಂದಾಗಿ ಜೆಡಿಎಸ್ ಶಾಸಕರು ಬೇರೆ ಪಕ್ಷಗಳತ್ತ ಒಲವು ತೋರಬಹುದು ಎಂಬುದು ಇದೀಗ ಜೆಡಿಎಸ್ ನಾಯಕರ ನಿದ್ದೆಗೆಡಿಸಿದೆ.
ಬಿಜೆಪಿ ಪರ ಮೃದು ಧೋರಣೆ
ಶಿರಾ ಹಾಗೂ ಆರ್.ಆರ್. ನಗರ ಉಪ ಚುನಾವಣೆ ಬಳಿಕ ಕುಮಾರಸ್ವಾಮಿ ಅವರು ಬಿಜೆಪಿ ಕುರಿತು ಮೃದು ಧೋರಣೆ ವ್ಯಕ್ತಪಡಿಸಿದ್ದು ಜೆಡಿಎಸ್ನಲ್ಲಿಯೇ ಚರ್ಚೆ ಹುಟ್ಟುಹಾಕಿತ್ತು. ಅದಾದ ಬಳಿಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಪರಿಷತ್ನಲ್ಲಿ ಬೆಂಬಲ ಸೂಚಿಸುವ ಮೂಲಕ ಕಾಂಗ್ರೆಸ್ ಪಕ್ಷ ಹುಬ್ಬೇರಿಸುವಂಥ ತೀರ್ಮಾನವನ್ನು ಎಚ್ಡಿಕೆ ತೆಗೆದುಕೊಂಡಿದ್ದರು. ಬೆಂಬಲ ಕೊಡುವುದಷ್ಟೇ ಅಲ್ಲ, ಭೂ ಸುಧಾರಣಾ ವಿಧೇಯಕ ಪರವಾಗಿ ಕುಮಾರಸ್ವಾಮಿ ಅವರು ಮಾತನಾಡಿದ್ದರು. ಇದು ಜೆಇಎಸ್ ಶಾಸಕರಲ್ಲಿಯೇ ಗೊಂದಲ ಸೃಷ್ಟಿಸಿತ್ತು.
ರಾಜಕೀಯ ದೃವೀಕಣ
ಅದಾದ ಬಳಿಕ ವಿಧಾನ ಪರಿಷತ್ ಸಭಾಪತಿಗಳ ವಿರುದ್ಧದ ಅವಿಶ್ವಾಸ ಗೊತ್ತುವಳಿಗೂ ಜೆಡಿಎಸ್ ಬೆಂಬಲ ಕೊಟ್ಟಿತ್ತು. ಅದು ಕೂಡ ಜೆಡಿಎಸ್ ಎಂಎಲ್ಎಗಳಲ್ಲಿ ಚರ್ಚೆ ಹುಟ್ಟುಹಾಕಿತ್ತು. ಹೀಗೆ ದಿಢೀರ್ ನಿರ್ಧಾರಗಳಿಂದ ಜೆಡಿಎಸ್ ನಾಯಕರಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಯಾಯಿತು. ಇದೇ ಸಂದರ್ಭದಲ್ಲಿ ಬಿಜೆಪಿ ಪ್ರಮುಖ ನಾಯಕ ಅರವಿಂದ್ ಲಿಂಬಾವಳಿ ಅವರು ಕೊಟ್ಟಿದ್ದ ಹೇಳಿಕೆಯಿಂದ ಮತ್ತೊಂದು ಹಂತದ ಚರ್ಚೆ ಶುರುವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ರಾಜಕೀಯ ದೃವೀಕರಣವಾಗಲಿದೆ ಎಂದು ಅವರು ಹೇಳಿದ್ದರು.
ಡ್ಯಾಮೇಜ್ ಕಂಟ್ರೋಲ್ ಪ್ರಯತ್ನ
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಿಂಬಾವಳಿ ಅವರು ಹೇಳಿಕೆ ಕೊಟ್ಟ ಬಳಿಕ ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನದ ಕುರಿತು ಚರ್ಚೆ ಶುರುವಾಗಿತ್ತು. ಹೀಗಾಗಿ ಸ್ವತಃ ಸಿಎಂ ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರು ಅಂತಹ ಯಾವುದೇ ವಿಚಾರಗಳು ಸತ್ಯವಲ್ಲ ಎಂದು ಹೇಳಿಕೆ ನೀಡಿದ್ದರು. ಆ ಮೂಲಕ ವಿಲೀನದ ಕುರಿತು ಚರ್ಚೆ ಮತ್ತಷ್ಟು ಗೊಂದಲ ಏರ್ಪಡಿಸುವುದನ್ನು ತಪ್ಪಿಸುವ ಪ್ರಯತ್ನವನ್ನು ಮಾಡಿದ್ದರು.
Recommended Video
ವಿಲೀನವಿಲ್ಲ, ಆದರೂ....!
ಆದರೂ ಬಿಜೆಪಿ ಕುರಿತು ಕುಮಾರಸ್ವಾಮಿ ಅವರು ಒಲವು ವ್ಯಕ್ತಪಡಿಸಿದ್ದು ಅವರ ಮಾತಿನಲ್ಲಿಯೇ ಕಂಡು ಬಂದಿದೆ. ಬಿಜೆಪಿಯೊಂದಿಗೆ ಜೆಡಿಎಸ್ ಪಕ್ಷವನ್ನು ವಿಲೀನಗೊಳಿಸುವುದಿಲ್ಲ. ಆದರೆ ವಿಷಯಾಧಾರಿತ ಹೊಂದಾಣಿಕೆ ಸಾಧ್ಯ ಎಂದು ಕುಮಾರಸ್ವಾಮಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದರು. ಹೀಗಾಗಿ ಇದು ಮುಂದಿನ ಹಂತದಲ್ಲಿ ಯಾವ ಮಟ್ಟಕ್ಕೆ ತಲುಪಬಹುದು ಎಂಬ ಚರ್ಚೆ ಇನ್ನೂ ಮುಂದುವರೆದಿದೆ.
ವಿಲೀನ ವಿಚಾರಕ್ಕೆ ಸ್ಪಷ್ಟನೆ ಕೊಟ್ಟಿದ್ದ ಸಿಎಂ ಯಡಿಯೂರಪ್ಪ ಅವರು, ವಿಲೀನದಂತಹ ಯಾವುದೇ ರಾಜಕೀಯ ಬೆಳವಣಿಗೆ ಆಗಿಲ್ಲ. ಆದರೆ ಜೆಡಿಎಸ್ ನಮಗೆ ವಿಷಯಾಧರಿತ ಬೆಂಬಲ ಕೊಟ್ಟಿದೆ ಎಂದು ಹೇಳಿದ್ದಾರೆ. ಹೀಗಾಗಿ ವಿಲೀನ ವಿಚಾರವನ್ನು ಎರಡೂ ಪಕ್ಷಗಳ ನಾಯಕರು ಅಲ್ಲಗಳೆದ ಬಳಿಕವೂ ಗೊಂದಲ ಮುಂದುವರೆದಿದೆ. ರಾಜಕೀಯದಲ್ಲಿ ಹೇಳವುದು ಒಂದಾದರೆ, ಮಾಡುವುದು ಮತ್ತೊಂದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅವರ ಸ್ಪಷ್ಟನೆ ಬಳಿಕವೂ ಜೆಡಿಎಸ್ ಶಾಸಕರಲ್ಲಿ ಗೊಂದಲ ಶುರುವಾಗಿದೆ. ಇದು ಎಲ್ಲಿಗೆ ತಲುಪಲಿದೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.