ಗುಡ್ನ್ಯೂಸ್: ತುಮಕೂರು-ಯಶವಂತಪುರ ಮೆಮು ರೈಲು ಓಡಾಟಕ್ಕೆ ರೈಲ್ವೆ ಇಲಾಖೆ ಅಸ್ತು
ಬೆಂಗಳೂರು, ಸೆಪ್ಟೆಂಬರ್ 03: ತುಮಕೂರು ಜನತೆಯ ಬಹುದಿನಗಳ ಬೇಡಿಕೆಯಾದ ರೆಗ್ಯುಲರ್ ಪ್ಯಾಸೆಂಜರ್ ಫ್ರೆಂಡ್ಲಿ ಮೆಮು ಟ್ರೈನ್ ಸರ್ವಿಸ್ ಓಡಾಟಕ್ಕೆ ಕೇಂದ್ರ ರೈಲ್ವೆ ಇಲಾಖೆ ಅನುಮೋದನೆ ನೀಡಿರುವುದಾಗಿ ಕೇಂದ್ರ ಸಚಿವರಾದ ವಿ. ಸೋಮಣ್ಣ ತಿಳಿಸಿದ್ದಾರೆ. ಈ ಮೂಲಕ ಗೌರಿ-ಗಣೇಶ ಹಬ್ಬಕ್ಕೆ ತುಮಕೂರಿನ ಜನತೆಗೆ ವಿ. ಸೋಮಣ್ಣ ಸಿಹಿ ಸುದ್ದಿ ನೀಡಿದ್ದಾರೆ.
ತುಮಕೂರುನಿಂದ ಬೆಂಗಳೂರು ಹಾಗೂ ಬೆಂಗಳೂರಿಂದ ತುಮಕೂರಿಗೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪ್ಯಾಸೆಂಜರ್ ಟ್ರೈನ್ ಓಡಾಡಿಸಲು ತುಮಕೂರು ಜನತೆಯ ಬಹಳ ದಿನಗಳ ಬೇಡಿಕೆ ಇತ್ತು. ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವರು ಹಾಗೂ ತುಮಕೂರಿನ ಸಂಸದರಾದ ವಿ.ಸೋಮಣ್ಣ ಅವರ ಬಳಿ ತುಮಕೂರಿನ ಜನತೆ ತಮ್ಮ ಬೇಡಿಕೆಯನ್ನು ಇಟ್ಟಿದ್ದರು. ಇದಕ್ಕೆ ಸ್ಪಂದಿಸಿದ ಸಚಿವರು ಈ ಬಗ್ಗೆ ಕ್ರಮ ಜರುಗಿಸುವುದಾಗಿ ತುಮಕೂರಿನ ಜನತೆಗೆ ಅವರ ಮೊದಲ ಭೇಟಿಯಲ್ಲೇ ಭರವಸೆ ನೀಡಿದ್ದರು.

ಇದರ ಪ್ರತಿಫಲವಾಗಿ ದಿನಾಂಕ 02.09.2024 ರಂದು ರೈಲ್ವೆ ಇಲಾಖೆ ತುಮಕೂರು-ಯಶವಂತಪುರ ಮಾರ್ಗವಾಗಿ ಮೆಮು (MEMU) ಟೈನ್ ಓಡಾಟಕ್ಕೆ ಅನುಮೋದನೆ ಹೊರಡಿಸಿದೆ. ಈ ಖುಷಿಯ ವಿಚಾರವನ್ನು ವಿ. ಸೋಮಣ್ಣ ತುಮಕೂರು ಜನತೆಯೊಂದಿಗೆ ಹಂಚಿಕೊಂಡಿದ್ದಾರೆ.
ಮೆಮು ರೈಲು ಸೇವೆ ವಿವರ ಇಲ್ಲಿದೆ
ತುಮಕೂರು-ಯಶವಂತಪುರ ಮೆಮು ಟ್ರೈನ್ 06201(66561) ಬೆಳಗ್ಗೆ 8.55ಕ್ಕೆ ತುಮಕೂರಿಂದ ಹೊರಟು 10.25ಕ್ಕೆ ಯಶವಂತಪುರ ತಲುಪಲಿದೆ. ರೈಲು ಸಂಖ್ಯೆ 06202(66562) ಯಶವಂತಪುರದಿಂದ 5.40ಕ್ಕೆ ಹೊರಟು ಸಾಯಂಕಾಲ 7.05ಕ್ಕೆ ತುಮಕೂರು ತಲುಪಲಿದೆ. ಪ್ರತಿ ಸೋಮವಾರ ವಿಶೇಷ ಮೆಮು ಟ್ರೈನ್ ನಂಬರ್ 06205(6565) ಬಾಣಸವಾಡಿ ರೈಲ್ವೆ ನಿಲ್ದಾಣದಿಂದ 6.15ಕ್ಕೆ ಹೊರಟು ತುಮಕೂರಿಗೆ 8.35ಕ್ಕೆ ತಲುಪಲಿದೆ. ಅದೇ ರೀತಿ ಪ್ರತಿ ಶನಿವಾರ ವಿಶೇಷ ಮೆಮು ಟ್ರೈನ್ ನಂಬರ್ 06206(66566)ತುಮಕೂರಿನಿಂದ ಸಾಯಂಕಾಲ 7.40ಕ್ಕೆ ಹೊರಟು ರಾತ್ರಿ 10.05ಕ್ಕೆ ಬಾಣಸವಾಡಿ ತಲುಪಲಿದೆ.
ಈ ಮೆಮು ರೈಲು ಮಾರ್ಗಮಧ್ಯದಲ್ಲಿ ಕ್ಯಾತಸಂದ್ರ, ಹೀರೇಹಳ್ಳಿ, ದಾಬಸ್ ಪೇಟೆ, ನಿಡವಂದ, ಮುದ್ದಲಿಂಗನಹಳ್ಳಿ, ದೊಡ್ಡಬೆಲೆ, ಭೈರನಾಯಕನಹಳ್ಳಿ, ಗೊಲ್ಲಹಳ್ಳಿ, ಸೋಲದೇವನಹಳ್ಳಿ, ಚಿಕ್ಕಬಾಣಾವರ, ರೈಲ್ವೆ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ. ಭಾನುವಾರ ಹೊರತುಪಡಿಸಿ ವಾರದ 6 ದಿನಗಳಲ್ಲಿ ತುಮಕೂರು-ಯಶವಂತಪುರ ಮಾರ್ಗದಲ್ಲಿ ಈ ಮೆಮು ರೈಲು ಚಲಿಸಲಿದೆ ಎಂದು ತಿಳಿದು ಬಂದಿದೆ.

ಯಶವಂತಪುರ - ಹೊಸೂರು ಮೆಮು ರೈಲು ಓಡಾಟಕ್ಕೂ ಅನುಮೋದನೆ
ಇನ್ನು ಯಶವಂತಪುರ - ಹೊಸೂರು ಮೆಮು ರೈಲು ಓಡಾಟಕ್ಕೂ ಸಹ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ. ಟ್ರೈನ್ ಸಂಖ್ಯೆ 06203(66563) ಯಶವಂತಪುರ- ಹೊಸೂರು ಮಾರ್ಗವಾಗಿ ಮೆಮು ರೈಲು ಚಲಿಸಲಿದ್ದು ಬೆಳಗ್ಗೆ 10.45ಕ್ಕೆ ಯಶವಂತಪುರದಿಂದ ಹೊರಟು ಮಧ್ಯಾಹ್ನ 12.30ಕ್ಕೆ ಹೊಸೂರು ತಲುಪಲಿದೆ. ಅದೇ ರೀತಿ 06204(66564) ಹೊಸೂರು - ಯಶವಂತಪುರ ಮೆಮು ಸಾಯಂಕಾಲ 3.20ಕ್ಕೆ ಹೊಸೂರಿನಿಂದ ಹೊರಟು ಸಾಯಂಕಾಲ 5.15ಕ್ಕೆ ಯಶವಶವಂತಪುರ ತಲುಪಲಿದೆ.
ಈ ರೈಲು ಮಾರ್ಗ ಮದ್ಯದಲ್ಲಿ ಹೆಬ್ಬಾಳ, ಬಾಣಸವಾಡಿ, ಬೆಳ್ಳಂದೂರು ರಸ್ತೆ, ಕಾರ್ಮೆಲರಾಂ, ಹೀಲಲಿ, ಆನೆಕಲ್ ರಸ್ತೆ ರೈಲ್ವೆ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.
ಇನ್ನು ಕೆಲವೇ ದಿನಗಳಲ್ಲಿ ಈ ಎರಡು ಮಾರ್ಗಮಧ್ಯದಲ್ಲಿ ಮೆಮು (MEMU) ರೈಲುಗಳ ಓಡಾಟಕ್ಕೆ ಚಾಲನೆ ನೀಡುವುದಾಗಿ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣರವರು ತಿಳಿಸಿದ್ದಾರೆ. ಅಲ್ಲದೇ ಕರ್ನಾಟಕ ರಾಜ್ಯದ ಮತ್ತು ತುಮಕೂರಿನ ಜನತೆಯ ಆಶೋತ್ತರಗಳಿಗೆ ಸ್ಪಂದಿಸಿ ಮೆಮು ರೈಲುಗಳ ಸೇವೆಯನ್ನು ಒದಗಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮತ್ತು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ವಿ.ಸೋಮಣ್ಣ ಅಭಿನಂದನೆ ತಿಳಿಸಿದ್ದಾರೆ.












Click it and Unblock the Notifications