JDS: ಜೆಡಿಎಸ್ ಭವಿಷ್ಯಕ್ಕೆ ಹೊಡೆತ ಕೊಟ್ಟ ಬಿಜೆಪಿ ಜೊತೆಗಿನ ಮೈತ್ರಿ ?!
BJP-JDS alliance: ಕರ್ನಾಟಕದಲ್ಲಿ ಬಿಜೆಪಿ ಯೊಂದಿಗೆ ಮೈತ್ರಿ ಮಾಡಿಕೊಂಡ ಜೆಡಿಎಸ್ಗೆ ಆಘಾತವಾಗಿದೆಯೇ. ಹೌದು, ಈ ರೀತಿಯ ಪ್ರಶ್ನೆಗೆ ಮುಖ್ಯ ಕಾರಣ ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿಗೆ ಸೋಲು. ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಇನ್ನೂ ಕೆಲವು ಕಾರಣಗಳಿವೆ ನಿಜ.
ಆದರೆ, ಜೆಡಿಎಸ್ ಪಕ್ಷ ತನ್ನ ಮೂಲ ಮತದಾರರನ್ನು ಹಾಗೂ ಅವರ ವಿಶ್ವಾಸವನ್ನು ಕಳೆದುಕೊಂಡಿದೆ ಎನ್ನುವುದಕ್ಕೆ ಈ ಚುನಾವಣೆ ಫಲಿತಾಂಶ ಸಾಕ್ಷಿಯಾಗಿದೆ. ಜೆಡಿಎಸ್ (Janata Dal (Secular) (ಜನತಾ ದಳ) ಪಕ್ಷವು ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡ ಮೇಲೆ ಮುಸ್ಲಿಂ ಸಮುದಾಯದ ನಾಯಕರು ಹೊರ ನಡೆದಿದ್ದರು.

ಕರ್ನಾಟಕದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ ಗೆಲುವು ದಾಖಲಿಸಿದ್ದಾರೆ. ಆದರೆ, ಜೆಡಿಎಸ್ನ ನಿಖಿಲ್ ಕುಮಾರಸ್ವಾಮಿಗೆ ಹಾಗೂ ಎಚ್.ಡಿ ಕುಮಾರಸ್ವಾಮಿ ಅವರಿಗೆ ಮುಖಭಂಗವಾಗಿದೆ.
ಇದಕ್ಕೆ ಜೆಡಿಎಸ್ ತೆಗೆದುಕೊಂಡಿರುವ ಈ ಹಿಂದಿನ ನಿರ್ಧಾರಗಳೇ ಕಾರಣ ಎನ್ನಲಾಗುತ್ತಿದೆ. ಅಲ್ಲದೇ ಈ ಬಾರಿ ಜೆಡಿಎಸ್ ಪಕ್ಷ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿ ಇತ್ತು. ಈಗಾಗಲೇ ನಿಖಿಲ್ ಕುಮಾರಸ್ವಾಮಿ ಎರಡು ಬಾರಿ ಸೋತಿದ್ದು ಕಾರಣವಾದರೆ, ಜೆಡಿಎಸ್ನ ಭವಿಷ್ಯದ ದೃಷ್ಟಿಯೂ ಕಾರಣವಾಗಿತ್ತು.

ಮುಳುವಾಯಿತೇ ಮೈತ್ರಿ ?
ಲೋಕಸಭೆ ಚುನಾವಣೆ ಪೂರ್ವದಲ್ಲಿ ಜೆಡಿಎಸ್ ಪಕ್ಷವು ಬಿಜೆಪಿಯೊಂದಿಗೆ ಚುನಾವಣೆ ಪೂರ್ವ ಮೈತ್ರಿ ಮಾಡಿಕೊಂಡಿತ್ತು. ಈ ಮೈತ್ರಿಯ ಬೆನ್ನಲ್ಲೇ ಜೆಡಿಎಸ್ನ ಪ್ರಮುಖ ಹಾಗೂ ಮುಸ್ಲಿಂ ಸಮುದಾಯದ ನಾಯಕರು ಜೆಡಿಎಸ್ನಿಂದ ಹೊರ ನಡೆದರು. ಅದರ ನಡುವೆ ಜೆಡಿಎಸ್ನಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಯಿತು. ಬಿಜೆಪಿಯೊಂದಿಗಿನ ಮೈತ್ರಿಯಿಂದ ಜೆಡಿಎಸ್ ಬಹಿರಂಗವಾಗಿಯೇ ಮುಸ್ಲಿಂ ಸಮುದಾಯದ ವಿಶ್ವಾಸ ಹಾಗೂ ಮತಗಳನ್ನು ಕಳೆದುಕೊಂಡಿತು.
ಇದೀಗ ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ಪರಿಣಾಮ ಬೀರಿರುವುದು ಇದೇ ಮುಖ್ಯ ಅಂಶ ಎನ್ನಲಾಗುತ್ತಿದೆ. ಅಲ್ಲದೆ ಜೆಡಿಎಸ್ಗೆ ಈ ಉಪ ಚುನಾವಣೆ ಮಾತ್ರವಲ್ಲ ಮುಂದೆ ಭವಿಷ್ಯದಲ್ಲೂ ಜೆಡಿಎಸ್ಗೆ ಹೊಡೆತ ಬೀಳಲಿದೆಯೇ ಎನ್ನುವ ಆಂತಕ ಶುರುವಾಗಿದೆ. ಜೆಡಿಎಸ್ಗೆ ಲೋಕಸಭೆ ಚುನಾವಣೆಯಲ್ಲಿ ಸಿಕ್ಕ ಗೆಲುವು ಅಲ್ಪ ಅವಧಿಯಲ್ಲಿ ಸಿಕ್ಕ ಗೆಲುವುವಾಗಿತ್ತು.
ಆಗ ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡಿತ್ತು. ಅಲ್ಲದೇ ಡಾ. ಮಂಜುನಾಥ್ ಅವರು ಬೆಂಗಳೂರು ಗ್ರಾಮಾಂತರದಿಂದ ಬಿಜೆಪಿ ಚಿಹ್ನೆಯ ಅಡಿಯಲ್ಲಿ ಸ್ಪರ್ಧೆ ಮಾಡಿದ್ದರು. ಆದರೆ, ಇದೀಗ ಜೆಡಿಎಸ್ ದೀರ್ಘಕಾಲದ ಹಾಗೂ ಭವಿಷ್ಯದ ದೃಷ್ಟಿಯಿಂದ ನೋಡಿದರೆ ಬಿಜೆಪಿಯೊಂದಿಗಿನ ಮೈತ್ರಿ ದೀರ್ಘಕಾಲದಲ್ಲಿ ಪರಿಣಾಮ ಬೀರುವಂತಿದೆ.
ಮೂಲ ಮತದಾರರನ್ನು ಕಳೆದುಕೊಂಡ ಜೆಡಿಎಸ್
ಇನ್ನು ಜೆಡಿಎಸ್ ಪಕ್ಷಕ್ಕೆ ತನ್ನದೇ ಮತದಾರರು ಇದ್ದಾರೆ. ಪಕ್ಷದ ಹೆಸರೇ ಹೇಳುವಂತೆ ಜಾತ್ಯಾತೀತ ಜನತಾದಳ. ಈ ಪಕ್ಷ ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡಾಗಲು ಸಹ ಅಲ್ಪ ಪ್ರಮಾಣದ ಹಿನ್ನಡೆ ಅನುಭವಿಸಿತ್ತು. ಆದರೆ, ಈಗ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದು ಸೈದ್ಧಾಂತಿಕ ಪ್ರಶ್ನೆಯಾಗಿದೆ.
ಈ ಪಕ್ಷವು ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಮತದಾರ ವಿಶ್ವಾಸ ಗಳಿಸಿತ್ತು. ಆದರೆ, ಯಾವಾಗ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿತೋ ಆಗಲೇ ಜೆಡಿಎಸ್ನ ಘಟಾನುಘಟಿ ಮುಸ್ಲಿಂ ನಾಯಕರು ಜೆಡಿಎಸ್ನಿಂದ ಹೊರ ನಡೆದರು. ಆದರೆ, ಈ ಬೆಳವಣಿಗೆ ಜೆಡಿಎಸ್ಗೆ ಲೋಕಸಭೆ ಚುನಾವಣೆಯಲ್ಲಿ ಅಂತಹ ಬದಲಾವಣೆಗೆ ಕಾರಣವಾಗಿರಲಿಲ್ಲ. ಅದು ಅಲ್ಪ ಅವಧಿಯಲ್ಲಿ (ಮೈತ್ರಿಯಾದ ಮೇಲೆ) ನಡೆದಿದ್ದ ಚುನಾವಣೆಯಾಗಿತ್ತು. ಆದರೆ, ಈಗ ವಿಧಾನಸಭೆ ಉಪ ಚುನಾವಣೆಯು ದೀರ್ಫಾವಧಿಯದ್ದಾಗಿದ್ದು, ಇದೀಗ ಅದರ ಪ್ರಭಾವ ಜೆಡಿಎಸ್ನ ಮೇಲೆ ಬೀರಿದಂತೆ ಇದೆ.
ಈ ಎಲ್ಲಾ ಕಾರಣಗಳಿಂದ ಮುಂದಿನ ದಿನಗಳಲ್ಲಿ ಜೆಡಿಎಸ್ ಹೇಗೆ ಕಾರ್ಯತಂತ್ರ ರೂಪಿಸಲಿದೆ. ಈ ಸೋಲುಗಳಿಂದ ಹೇಗೆ ಹೊರಗೆ ಬರಲಿದೆ ಎನ್ನುವುದು ಸದ್ಯಕ್ಕೆ ಇರುವ ಬಹುದೊಡ್ಡ ಕುತೂಹಲವಾಗಿದೆ.












Click it and Unblock the Notifications