ಇನ್ನೂ ಆರಂಭವಾಗದ ಪರಿಷ್ಕೃತ ಪಠ್ಯಪುಸ್ತಕ ಮುದ್ರಣ: ಮಕ್ಕಳ ಕೈಗೆ ಝೆರಾಕ್ಸ್ ಪ್ರತಿಗಳು!
ಬೆಂಗಳೂರು, ಜುಲೈ 13 : ರಾಜ್ಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿರುವ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯಿಂದಾಗಿ ನಾಡಿನ ಮಕ್ಕಳು ಪುಸ್ತಕಗಳಿಲ್ಲದೇ ಶಾಲೆಗೆ ತೆರಳುವ ಸ್ಥಿತಿ ಬಂದಿದೆ. ಎರಡೆರಡು ಬಾರಿ ಪಠ್ಯಪುಸ್ತಕಗಳು ಪರಿಷ್ಕರಣೆಗೊಂಡಿದ್ದು, ಮರು ಪರಿಷ್ಕೃತಗೊಂಡ ಕೇವಲ ಒಂದು ಕಿರುಪುಸ್ತಕವನ್ನು ಶಾಲೆಗಳಿಗೆ ನೀಡಲಾಗುತ್ತಿದೆ.
ಮರು ಪರಿಷ್ಕರಣೆಗೊಂಡ ಪುಸ್ತಕಗಳ ಮುದ್ರಣ ಇನ್ನೂ ಪ್ರಾರಂಭವಾಗಬೇಕಿದ್ದು, ಅದನ್ನು 15 ದಿನಗಳಲ್ಲಿ ಪೂರ್ಣಗೊಳಿಸಿ ಶಾಲೆಗಳಿಗೆ ವಿತರಿಸಬೇಕು ಎಂದು ಕರ್ನಾಟಕ ಪಠ್ಯಪುಸ್ತಕ ಸೊಸೈಟಿಯ ಮೂಲಗಳು ತಿಳಿಸಿವೆ. ಅಂದರೆ, ರಾಜ್ಯದ ಮಕ್ಕಳಿಗೆ ಮರು ಪರಿಷ್ಕೃತಗೊಂಡಿರುವ ಪುಸ್ತಕಗಳ ನಕಲು (ಜೆರಾಕ್ಸ್) ಪ್ರತಿಯನ್ನು ನೀಡಲಾಗುತ್ತದೆ.
ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಿಂದಾದ ಎಡವಟ್ಟುಗಳು ಒಂದೆರಡಲ್ಲ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್, ನಾರಾಯಣಗುರು, ಬಸವಣ್ಣ, ಅಕ್ಷರದವ್ವ ಸಾವಿತ್ರಿ ಬಾಪುಲೆ, ರಾಷ್ಟ್ರಕವಿ ಕುವೆಂಪು ಸೇರಿದಂತೆ ಹಲವು ಮಹನೀಯರಿಗೆ ಅವಮಾನ ಮಾಡಿ, ಸಿದ್ದಗಂಗಾ ಮಠ ಮತ್ತು ಆದಿಚುಂಚನಗಿರಿ ಮಠದ ಸೇವೆಗಳ ಮರುಪರಿಚಯ ಸೇರಿದಂತೆ ಹಲವು ವಿಷಯಗಳಿಗೆ ಕತ್ತರಿ ಪ್ರಯೋಗ ಮಾಡಿತ್ತು.
ಚಕ್ರತೀರ್ಥ ಸಮಿತಿಯ ಎಡವಟ್ಟಿನ ವಿರುದ್ಧ ನಾಡಿನಲ್ಲಿ ಭಾರಿ ಪ್ರತಿಭಟನೆ, ಆಕ್ರೋಶ ಉಂಟಾಗಿತ್ತು, ಮೊದಲಿಗೆ ಎಲ್ಲವೂ ಸರಿಯಿದೆ ಎಂದು ಚಕ್ರತೀರ್ಥನ ಬೆಂಬಲಕ್ಕೆ ನಿಂತಿದ್ದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಬಳಿಕ ಒಂದೊಂದೆ ತಪ್ಪುಗಳನ್ನು ಒಪ್ಪಿಕೊಳ್ಳುತ್ತಾ ಬಂದಿದ್ದಾರೆ. ಈ ಸಮಿತಿ ಪರಿಷ್ಕರಣೆ ಮಾಡಿರುವ ಎಲ್ಲಾ ಪಠ್ಯಪುಸ್ತಕಗಳನ್ನು ವಾಪಸ್ ಪಡೆದು ಸಾಹಿತಿ ಬರಗೂರು ರಾಮಚಂದ್ರಪ್ಪ ಸಮಿತಿ ಪರಿಷ್ಕರಣೆ ಮಾಡಿದ್ದ ಹಳೆಯ ಪುಸ್ತಕಗಳನ್ನೇ ನೀಡಲು ಆಗ್ರಹ ಕೇಳಿ ಬರುತ್ತಿದೆ. ಆದರೂ ಸರ್ಕಾರ ಕೆಲವು ತಪ್ಪುಗಳನ್ನು ಸರಿ ಪಡಿಸಿ ಪುಸ್ತಕ ವಿತರಿಸುವುದಾಗಿ ತಿಳಿಸಿದ್ದು, ಅವುಗಳನ್ನು ಕೂಡ ಮಕ್ಕಳಿಗೆ ತಲುಪಿಸುವಲ್ಲಿ ಎಡವಿದೆ.
ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಪ್ರತಿ ಶಾಲೆಗೆ ಒಂದೊಂದು ಕಿರುಪುಸ್ತಕ ವಿತರಿಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. "ಮರು-ಪರಿಷ್ಕರಣೆಯಾದಾಗಲೆಲ್ಲಾ ಈ ವ್ಯವಸ್ಥೆಯನ್ನು ಅನುಸರಿಸಲಾಗುತ್ತದೆ. ಕೇವಲ ಎಂಟು ತಿದ್ದುಪಡಿಗಳನ್ನು ಅನುಮೋದಿಸಲಾಗಿದೆ, ಆದ್ದರಿಂದ ಎಲ್ಲೆಲ್ಲಿ ತಪ್ಪಾಗಿವೆಯೋ ಆ ನಿರ್ದಿಷ್ಟ ಸಾಲುಗಳು ಅಥವಾ ಕಾಣೆಯಾಗಿರುವ ಪದಗಳನ್ನು ಸೇರಿಸಿಕೊಳ್ಳುವಂತೆ ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿಸುತ್ತಾರೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಪಠ್ಯಪುಸ್ತಕಗಳ ಮುದ್ರಣ ಮಾಡುವಾಗ ತಿದ್ದುಪಡಿಗಳನ್ನು ಸೇರಿಸಲಾಗುತ್ತದೆ" ಎಂದಿದ್ದಾರೆ.
ಪಠ್ಯಪುಸ್ತಕದ ಸಾಫ್ಟ್ ಕಾಪಿಯನ್ನು ಶಿಕ್ಷಕರಿಗೆ ಮತ್ತು ಪಠ್ಯಪುಸ್ತಕ ಸೊಸೈಟಿ ವೆಬ್ಸೈಟ್ನಲ್ಲಿ ಲಭ್ಯವಾಗುವಂತೆ ಮಾಡಲಾಗುವುದು. ಮರು ಪರಿಷ್ಕೃತ ಭಾಗದ ಸಾಫ್ಟ್ ಕಾಪಿ ಅಥವಾ ನಕಲು ಪ್ರತಿಯನ್ನು ಸಹ ವಿದ್ಯಾರ್ಥಿಗಳಿಗೆ ಹಂಚಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಲಾ ಪಠ್ಯಪುಸ್ತಕಗಳ ವಿಳಂಬದ ಬಗ್ಗೆ ಹೆಸರು ಹೇಳಲು ಇಚ್ಛಿಸದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು, 'ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಚೇತರಿಕೆ: ಕಲಿಕಾ ಪುನಶ್ಚೇತನ ಕಾರ್ಯಕ್ರಮ ನಡೆಯುತ್ತಿದೆ. 1ನೇ ತರಗತಿಯಿಂದ 9ನೇ ತರಗತಿ ವಿದ್ಯಾರ್ಥಿಗಳಿಗಾಗಿ ಕಲಿಕಾ ಹಾಳೆಗಳು ಮತ್ತು ಶಿಕ್ಷಕರ ಕೈಪಿಡಿಗಳನ್ನು ಬಳಸಲಾಗುತ್ತಿದೆ. ಪಠ್ಯಪುಸ್ತಕಗಳ ಮುದ್ರಣ ವಿಳಂಬ, ಅಥವಾ ಮರು ಪರಿಷ್ಕರಣೆ ಸರ್ಕಾರಿ ಶಾಲೆಗಳ ಮೇಲೆ ಹೆಚ್ಚು ಪರಿಣಾಮ ಬೀರಿಲ್ಲ. ತಡವಾಗಿ ಬಂದ ಕಲಿಕಾ ಚೇತಾರಿಕೆ ಸಾಮಗ್ರಿಗಳ ನಕಲು ಪ್ರತಿಗಳೊಂದಿಗೆ ನಿರ್ವಹಿಸಲಾಗಿದೆ. 15 ದಿನಗಳ ಕಾರ್ಯಕ್ರಮಗಳ ನಂತರ, ಎಸ್ಎಸ್ಎಲ್ಸಿಗೆ ನಿಯಮಿತ ಪಾಠಗಳು ಪ್ರಾರಂಭವಾಗಿವೆ" ಎಂದು ಮಾಹಿತಿ ನೀಡಿದ್ದಾರೆ.
ಶಾಲೆಗಳು ಆರಂಭವಾಗಿ ಸುಮಾರು ಎರಡು ತಿಂಗಳಾಗಿದ್ದು, ಶೇ.96.5ರಷ್ಟು ಪಠ್ಯಪುಸ್ತಕಗಳನ್ನು ಮುದ್ರಿಸಲಾಗಿದ್ದು, ಶೇ.92.02ರಷ್ಟು ಪುಸ್ತಕಗಳು ಶಾಲೆಗಳಿಗೆ ತಲುಪಿವೆ. ಉಳಿದ ಪಠ್ಯಪುಸ್ತಕಗಳು ಒಂದು ತಿಂಗಳಲ್ಲಿ ಎಲ್ಲ ಶಾಲೆಗಳಿಗೆ ತಲುಪುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರಕಾರ ತಿದ್ದುಪಡಿಗೆ ಒಪ್ಪಿರುವ ಭಾಗಗಳು:
9ನೇ ತರಗತಿಯ ಸಮಾಜ ವಿಜ್ಞಾನ ಭಾಗ 1, 'ನಮ್ಮ ಸಂವಿಧಾನ' ಪಾಠದಲ್ಲಿ ಡಾ.ಬಿ. ಆರ್ ಅಂಬೇಡ್ಕರ್ ಕುರಿತು 'ಸಂವಿಧಾನ ಶಿಲ್ಪಿ' ಎಂಬ ಪದವನ್ನು ರೋಹಿತ್ ಚಕ್ರತೀರ್ಥ ಸಮಿತಿ ತೆಗೆದುಹಾಕಿತ್ತು. ಅದನ್ನು ಮರುಪರಿಚಯಿಸಲಾಗುತ್ತಿದೆ.
7ನೇ ತರಗತಿಯ ಸಮಾಜ ವಿಜ್ಞಾನ ಭಾಗ 1: 'ಭಕ್ತಿ ಪಂಥ ಮತ್ತು ಸೂಫಿ ಸಂತರು' ಕುರಿತು ಸಂಪೂರ್ಣ ಪಾಠವನ್ನು ಮತ್ತೆ ಸೇರಿಸಲಾಗುತ್ತಿದೆ.
7ನೇ ತರಗತಿಯ ಕನ್ನಡ ಪ್ರಥಮ ಭಾಷೆಯ ಪುಟ ಸಂಖ್ಯೆ 147, 'ಬೊಂಬೆ ಕಲಿಸುವ ನೀತಿ' ಪದ್ಯದ ಕವಿ ಹೆಸರು ಆರ್.ಎನ್ ಜಯಗೋಪಾಲ್ ಎಂದು ತಪ್ಪಾಗಿ ಬರೆಯಲಾಗಿದ್ದು, ಮೂಲ ಕವಿತೆ ರಚಿಸಿರುವ ಚಿ ಉದಯಶಂಕರ್ ಅವರ ಹೆಸರು ಮತ್ತು ಪರಿಚಯವನ್ನು ಸೇರಿಸಲಾಗಿದೆ.
6 ನೇ ತರಗತಿಯ ಸಮಾಜ ವಿಜ್ಞಾನ ಭಾಗ 1, 'ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ' ಪಾಠದಲ್ಲಿ ಸಿದ್ದಗಂಗಾ ಮಠ ಮತ್ತು ಆದಿಚುಂಚನಗಿರಿ ಮಠದ ಸೇವೆಗಳ ಪರಿಚಯವನ್ನು ಮತ್ತೆ ಸೇರಿಸಲಾಗುತ್ತಿದೆ.
7ನೇ ತರಗತಿಯ ಸಮಾಜ ವಿಜ್ಞಾನ ಭಾಗ 1, 'ಮೈಸೂರು ಮತ್ತು ಇತರ ಸಂಸ್ಥಾನಗಳು' ಪಾಠದಲ್ಲಿ ಸುರಪುರ ನಾಯಕರ ವಿವರಗಳ ಸೇರ್ಪಡೆ.
ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಭಾಗ 1: 'ಭಾರತದ ಮಠ ಪರಿವರ್ತಕರು' ಪಾಠದಲ್ಲಿ ಬಸವಣ್ಣ ಕುರಿತು ಮಾಹಿತಿಯನ್ನು ಮರುಪರಿಚಯಿಸುವುದು.
7ನೇ ತರಗತಿ ಸಮಾಜ ವಿಜ್ಞಾನ ಭಾಗ 2,: 'ಕರ್ನಾಟಕ ರಾಜ್ಯ ಏಕೀಕರಣ ಹಾಗ ಗಡಿವಿವಾದಗಳು' ಪಾಠದಲ್ಲಿ ಕುವೆಂಪು ಮತ್ತು ಹುಯಿಲಗೋಳ ನಾರಾಯಣರಾವ್ ಅವರ ಫೋಟೋಗಳ ಸೇರ್ಪಡೆ.
4ನೇ ತರಗತಿಯ ಪರಿಸರ ಅಧ್ಯಯನಗಳು: 'ಪ್ರತಿಯೊಬ್ಬರು ವಿಶಿಷ್ಟ' ಪಾಠದಲ್ಲಿ ಕುವೆಂಪು ಅವರ ಬಗ್ಗೆ "ಅನೇಕರ ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು" ಎಂಬ ಸಾಲುಗಳನ್ನು ತೆಗೆದುಹಾಕಲು ಆದೇಶಿಸಲಾಗಿದೆ.
ಇದರ ಜೊತೆಗೆ ಹತ್ತನೇ ತರಗತಿಯ ಸಮಾಜ ವಿಜ್ಞಾನದಲ್ಲಿದ್ದ ಶ್ರೀ ನಾರಾಯಣಗುರು ವಿಷಯಾಂಶವನ್ನು ಕನ್ನಡ ಪ್ರಥಮ ಭಾಷಾ ಪಠ್ಯಪುಸ್ತಕಕ್ಕೆ ರೋಹಿತ್ ಚಕ್ರತೀರ್ಥ ಸಮಿತಿ ವರ್ಗಾಯಿಸಿತ್ತು. ಇದಕ್ಕೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಕನ್ನಡ ಭಾಷಾ ವಿಷಯದಿಂದ ಮತ್ತೆ ಸಮಾಜ ವಿಜ್ಞಾನಕ್ಕೆ ನಾರಾಯಣ ಗುರು ಪಠ್ಯ ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿದೆ.
"10ನೇ ತರಗತಿಯ ಕನ್ನಡ ಪ್ರಥಮ ಭಾಷಾ ಪಠ್ಯಪುಸ್ತಕದಲ್ಲಿ ಇರುವ ಶ್ರೀ ನಾರಾಯಣಗುರು ಅವರ ವಿಷಯಾಂಶಗಳನ್ನು 2022-23ನೇ ಸಾಲಿಗೆ ಬೋಧನೆ, ಕಲಿಕೆ ಹಾಗೂ ಮೌಲ್ಯಮಾಪನದಿಂದ ಕೈಬಿಟ್ಟು, ಹಿಂದಿನಂತೆ ಹತ್ತನೇ ತರಗತಿ ಸಮಾಜ ವಿಜ್ಞಾನ ಭಾಗ-1ರಲ್ಲಿ ಅಳವಡಿಸಿಕೊಂಡು ಬೋಧನೆ, ಕಲಿಕೆ ಹಾಗೂ ಮೌಲ್ಯಮಾಪನಕ್ಕೆ ಪರಿಗಣಿಸಬೇಕು" ಎಂದು ಆದೇಶದಲ್ಲಿ ತಿಳಿಸಲಾಗಿದೆ.