ನ್ಯಾಯಾಧೀಶರಾದ ಮಾಜಿ ಸಚಿವ ಟಿ.ಬಿ.ಜಯಚಂದ್ರ
ಬೆಂಗಳೂರು, ಜನವರಿ 24 : ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಟಿ.ಬಿ.ಜಯಚಂದ್ರ ನ್ಯಾಯಾಧೀಶರಾಗಿದ್ದಾರೆ. ಹೌದು, ಕನ್ನಡ ಚಲನಚಿತ್ರವೊಂದರಲ್ಲಿ ಅವರು ನ್ಯಾಯಾಧೀಶರಾಗಿ ನಟನೆ ಮಾಡಿದ್ದಾರೆ.
ಇನ್ನೂ ಹೆಸರಿಡದ ಕನ್ನಡ ಚಿತ್ರದಲ್ಲಿ ನ್ಯಾಯಾಧೀಶನ ಪಾತ್ರದಲ್ಲಿ ಬಣ್ಣ ಹಚ್ಚಿದ್ದೇನೆ ಎಂದು ಟಿ.ಬಿ.ಜಯಚಂದ್ರ ಅವರು ಫೇಸ್ಬುಕ್ನಲ್ಲಿ ತಿಳಿಸಿದ್ದಾರೆ. ಚಿತ್ರದ ಪಾತ್ರದ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.
ಸ್ವತಃ ಎಲ್ಎಲ್ಬಿ ಪದವೀಧರರಾಗಿರುವ ಟಿ.ಬಿ.ಜಯಚಂದ್ರ ಅವರು ಕೆಲವು ಕಾಲ ವಕೀಲರಾಗಿಯೂ ಕಾರ್ಯ ನಿರ್ವಹಿಸಿದ್ದರು. ಕಾನೂನಿನ ಬಗ್ಗೆ ಅಪಾರವಾದ ಜ್ಞಾನ ಹೊಂದಿರುವ ಅವರು ಸಿನಿಮಾದಲ್ಲಿ ನ್ಯಾಯಾಧೀಶರಾಗಿ ಬಣ್ಣ ಹಚ್ಚಿದ್ದಾರೆ.
'ಹೆಸರಿಡದ ಚಿತ್ರದಲ್ಲಿ ನ್ಯಾಯಾಧೀಶನ ಪಾತ್ರದಲ್ಲಿ ಬಣ್ಣ ಹಚ್ಚಿ ಎರಡು ದಶಕಗಳ ನಂತರ ಚಲನಚಿತ್ರದಲ್ಲಿ ಮತ್ತೊಮ್ಮೆ ಅಭಿನಯಿಸುತ್ತಿದ್ದೇನೆ. ಚಿತ್ರವೊಂದರ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಸಂತೋಷ ತಂದಿದೆ' ಎಂದು ಅವರು ಬರೆದಿದ್ದಾರೆ.
2013ರ ಚುನಾವಣೆಯಲ್ಲಿ ಶಿರಾ ಕ್ಷೇತ್ರದಲ್ಲಿ ಗೆದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಟಿ.ಬಿ.ಜಯಚಂದ್ರ ಅವರು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು. ಈಗ ನ್ಯಾಯಾಧೀಶರಾಗಿ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಎಚ್ಡಿ ಕುಮಾರಸ್ವಾಮಿ ವಿರುದ್ಧ ಟಿಬಿ ಜಯಚಂದ್ರ ಅಸಮಾಧಾನ
2018ರ ವಿಧಾನಸಭೆ ಚುನಾವಣೆಯಲ್ಲಿ ಶಿರಾ ಕ್ಷೇತ್ರದಲ್ಲಿ ಟಿ.ಬಿ.ಜಯಚಂದ್ರ ಅವರು 63,973 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು. ಜೆಡಿಎಸ್ನ ಬಿ.ಸತ್ಯನಾರಾಯಣ ಅವರು ಗೆಲುವು ಸಾಧಿಸಿದ್ದರು.
ಕಳ್ಳಂಬೆಳ್ಳ ಕ್ಷೇತ್ರದಿಂದ ನಾಲ್ಕು ಬಾರಿ, ಶಿರಾ ಕ್ಷೇತ್ರದಿಂದ ಸತತ ಎರಡು ಬಾರಿ ಸೇರಿ ಒಟ್ಟು 6 ಬಾರಿ ಶಾಸಕರಾಗಿರುವ ಟಿ.ಬಿ.ಜಯಚಂದ್ರ ಅವರು ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ಕೃಷಿ, ತೋಟಗಾರಿಕೆ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವರಾಗಿದ್ದರು.
ಬಡ ಕೃಷಿ ಕುಟುಂಬದ ಹಿನ್ನಲೆಯಿಂದ ಬಂದ ಜಯಚಂದ್ರ ಅವರು ಬಿಎಸ್ಸಿ, ಎಲ್ಎಲ್ಬಿ ಪದವೀಧರರು. ಕೆಲವು ಕಾಲ ವಕೀಲರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದಾರೆ. ಈಗ ಸಿನಿಮಾದಲ್ಲಿ ನ್ಯಾಯಾಧೀಶರಾಗಿದ್ದಾರೆ.