ತೌಕ್ತೆ ಚಂಡಮಾರುತ; ಕರ್ನಾಟಕದಲ್ಲಿ ಪ್ರಭಾವ ತಗ್ಗುವುದು ಯಾವಾಗ? ಆಗಿರುವ ಹಾನಿಯೆಷ್ಟು?
ಬೆಂಗಳೂರು, ಮೇ 17: ದೇಶದಲ್ಲಿ ತೌಕ್ತೆ ಚಂಡಮಾರುತದ ಪ್ರಭಾವ ಜೋರಾಗಿದೆ. ಸೋಮವಾರ ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಚಂಡಮಾರುತದ ಪ್ರಭಾವ ತೀವ್ರಗೊಳ್ಳಲಿರುವುದಾಗಿ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕರ್ನಾಟಕದಲ್ಲಿಯೂ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ತೌಕ್ತೆ ಚಂಡಮಾರುತ ಆರ್ಭಟಿಸಿದ್ದು, ಈ ಚಂಡಮಾರುತದಿಂದಾಗಿ ರಾಜ್ಯದಲ್ಲಿ ಇದುವರೆಗೂ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಸೋಮವಾರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕರ್ನಾಟಕದಲ್ಲಿ ತೌಕ್ತೆ ಚಂಡ ಮಾರುತದಿಂದಾಗಿ ಏನೆಲ್ಲಾ ಹಾನಿಯಾಗಿದೆ? ವಿವರಕ್ಕೆ ಮುಂದೆ ಓದಿ...

ಚಂಡಮಾರುತದಿಂದ 121 ಗ್ರಾಮಗಳಲ್ಲಿ ಹಾನಿ
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದು, ತೌಕ್ತೆ ಚಂಡಮಾರುತದಿಂದಾಗಿ ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳ 121 ಗ್ರಾಮಗಳು ಹಾಗೂ 22 ತಾಲೂಕುಗಳಲ್ಲಿ ಹಾನಿ ಸಂಭವಿಸಿದೆ ಎಂದು ತಿಳಿಸಿದ್ದಾರೆ.

547 ಮಂದಿ ಸ್ಥಳಾಂತರ
ಇದುವರೆಗೂ 547 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 13 ಕಾಳಜಿ ಕೇಂದ್ರಗಳಲ್ಲಿ ಸುಮಾರು 290 ಮಂದಿ ಆಶ್ರಯ ಪಡೆದಿದ್ದಾರೆ. ತೌಕ್ತೆ ಚಂಡಮಾರುತದಿಂದಾಗಿ 333 ಮನೆಗಳಿಗೆ ಹಾನಿಯಾಗಿದೆ. 644 ವಿದ್ಯುತ್ ಕಂಬಗಳು, 147 ಟ್ರಾನ್ಸ್ಫಾರ್ಮರ್ಗಳು, 3,004.3 ಮೀಟರ್ ಲೈನ್ಗಳು, 57 ಕಿ.ಮೀ ವಿಸ್ತೀರ್ಣದ ರಸ್ತೆಗಳು, 57 ಬಲೆಗಳು, 104 ಹಡಗುಗಳು ಹಾನಿಯಾಗಿರುವುದಾಗಿ ತಿಳಿದು ಬಂದಿದೆ.

ಸೋಮವಾರದಿಂದ ಚಂಡಮಾರುತದ ಪ್ರಭಾವ ತಗ್ಗಲಿದೆ
ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಹಾವೇರಿ, ಧಾರವಾಡ, ಚಾಮರಾಜನಗರ, ಮೈಸೂರು, ಕೊಡಗು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಸೋಮವಾರ ಚಂಡ ಮಾರುತ ಉತ್ತರ ರಾಜ್ಯಗಳನ್ನು ಹಾದು ಹೋಗಲಿದ್ದು, ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾಗಲಿದೆ. ಸೋಮವಾರದ ನಂತರ ಕರ್ನಾಟಕದಲ್ಲಿ ಚಂಡಮಾರುತದ ಪ್ರಭಾವ ತಗ್ಗಲಿದೆ ಎಂದು ಹೇಳಿದೆ.
Recommended Video

ನೌಕಾಪಡೆಗೆ ಧನ್ಯವಾದ ಸಲ್ಲಿಸಿದ ಮುಖ್ಯಮಂತ್ರಿ
ಉಡುಪಿಯ ಕಾಪು ಕಡಲ ಕಿನಾರೆಯಿಂದ 15 ನಾಟೆಕಲ್ ಮೈಲ್ ದೂರದಲ್ಲಿ ಕೋರಮಂಡಲ್ ಎಂಬ ಟಗ್ನಲ್ಲಿ 9 ಕಾರ್ಮಿಕರು ಸಿಲುಕಿದ ವರದಿಯಾಗಿತ್ತು. ಟಗ್ನಲ್ಲಿದ್ದ ಕಾರ್ಮಿಕರ ರಕ್ಷಣೆಗೆ ಕೋಸ್ಟ್ ಗಾರ್ಡ್ ನೌಕೆ IGS ವರಾಹ ರಕ್ಷಣಾ ಕಾರ್ಯಾಚರಣೆಗೆ ಮುಂದಾದರೂ ಕಡಲ ಅಬ್ಬರ ತಡೆಯುಂಟಯ ಮಾಡಿತ್ತು. ಈ ಹಿನ್ನಲೆಯಲ್ಲಿ ನೌಕಾಪಡೆ ಹೆಲಿಕಾಪ್ಟರ್ ಬಳಸಿ ರಕ್ಷಣೆ ಮಾಡಲಾಗಿದ್ದು, ಭಾರತೀಯ ನೌಕಾಪಡೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಧನ್ಯವಾದ ಸಲ್ಲಿಸಿದ್ದಾರೆ.












Click it and Unblock the Notifications