ಕಾವೇರಿ ನೀರು ಬಿಡುವಂತೆ ತಮಿಳುನಾಡು ಕಿರಿಕ್, ಕನ್ನಡಿಗರಿಗೆ ಕುಡಿಯಲು ಕೂಡ ನೀರು ಸಿಗಲ್ವಾ?
ಕನ್ನಡಿಗರು ಕುಡಿಯಲು ಕೂಡ ನೀರು ಇಲ್ಲದೆ ಪರದಾಡುವ ಸಮಯದಲ್ಲೇ, ತಮಿಳುನಾಡು ಸರ್ಕಾರ ಮಾತ್ರ ಕಾವೇರಿ ನೀರು ಬಿಡಿ ಅಂತಾ ಮತ್ತೆ ಕಿರಿಕ್ ತೆಗೆದಿದೆ. ಈ ಮೂಲಕ ಉಳಿದ ಅಲ್ಪಸ್ವಲ್ಪ ನೀರಿಗೂ ಕನ್ನಡಿಗರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಹಾಗಾದ್ರೆ ಕಾವೇರಿ ನೀರು ಕೇಳುತ್ತಿರುವ ತಮಿಳುನಾಡಿಗೆ ಕಾವೇರಿ ನೀರು ನಿರ್ವಹಣೆ ಮಂಡಳಿ ನೀಡಿದ ಉತ್ತರ ಏನು? ಹಾಗಾದ್ರೆ ಕನ್ನಡಿಗರಿಗೆ ಕುಡಿಯಲು ಕೂಡ ನೀರು ಸಿಗಲ್ವಾ? ಬನ್ನಿ ತಿಳಿಯೋಣ.
ಕಾವೇರಿ ನದಿ ಕನ್ನಡಿಗರ ಪಾಲಿಗೆ ಜೀವನದಿ, ಹೀಗಾಗಿಯೇ ಕಾವೇರಿ ನದಿಯನ್ನು ಕನ್ನಡಿಗರು ಪೂಜಿಸುತ್ತಾರೆ. ಹೀಗೆ ಕನ್ನಡ ನಾಡಿನಲ್ಲಿ ಹುಟ್ಟಿ, ನೂರಾರು ಕಿಲೋ ಮೀಟರ್ ದೂರಕ್ಕೂ ಹರಿಯುತ್ತಾ, ಕೋಟ್ಯಂತರ ಜೀವಗಳ ದಾಹ ನೀಗಿಸುವ ಕಾವೇರಿ ನೀರಿನ ವಿಚಾರದಲ್ಲಿ ಕಿರಿ ಕಿರಿ ಮುಂದುವರಿದಿದೆ. ಅದರಲ್ಲೂ ಮಳೆ ಬೀಳದ ಸಮಯದಲ್ಲಿ ತಮಿಳುನಾಡು ಸರ್ಕಾರ, ಮತ್ತೊಮ್ಮೆ ಕಾವೇರಿ ನೀರಿಗಾಗಿ ದೊಡ್ಡ ಕಿರಿಕ್ ತೆಗೆದಿದೆ. ಈ ಮೂಲಕ ಕಾವೇರಿ ನೀರಿನಲ್ಲಿ ರಾಜಕೀಯ ಮುಂದುವರಿದಿದೆ. ಭೀಕರ ಬರದಲ್ಲಿ ಕನ್ನಡ ನಾಡು ಪರದಾಡುವ ಸಮಯದಲ್ಲಿ ತಮಿಳುನಾಡು ಸರ್ಕಾರ ಮಾತ್ರ, 2.5 ಟಿಎಂಸಿ ನೀರು ಬಿಡಿ ಎಂದು ಬೇಡಿಕೆ ಇಟ್ಟಿದೆ.

ಕಾವೇರಿ ನೀರಿಗಾಗಿ ಮತ್ತೆ ಹೋರಾಟ?
ಮೊದಲೇ ಹೇಳಿದಂತೆ ಕರ್ನಾಟಕದಲ್ಲಿ ಮಳೆ ಇಲ್ಲ, ಅದರಲ್ಲೂ ಕಾವೇರಿ ನದಿ ಹರಿಯುವ ಪ್ರದೇಶದಲ್ಲಿ ಮಳೆಯ ಕೊರತೆ ತೀವ್ರವಾಗಿದೆ. ಹೀಗಾಗಿ ಕಾವೇರಿ ಕೊಳ್ಳದ ಜನರು ಪರದಾಟ ಪಡುತ್ತಿದ್ದಾರೆ. ಪರಿಸ್ಥಿತಿ ಹೀಗೆ ಭಯಾನಕವಾದ ಸಮಯದಲ್ಲಿ ಕೂಡ ತಮಿಳುನಾಡು ಸರ್ಕಾರ ಮಾತ್ರ ನೀರಿಗಾಗಿ ಕಿರಿಕ್ ಶುರು ಮಾಡಿದೆ. ಕಾವೇರಿ ನೀರು ಬಿಡಿ ಅಂತಾ ಈಗ ಕರ್ನಾಟಕದ ಜೀವ ಹಿಂಡಲು ಮುಂದಾಗಿದೆ. ತಮಿಳುನಾಡಿಗೆ ಈ ತಿಂಗಳು ಬರಬೇಕಿದ್ದ 2.5 ಟಿಎಂಸಿ ನೀರನ್ನ ಬಿಡುಗಡೆ ಮಾಡಿ ಎಂದು, ತಮಿಳುನಾಡು ಸರ್ಕಾರ ಕಾವೇರಿ ನೀರು ನಿಯಂತ್ರಣ ಸಮಿತಿಗೆ ಈಗ ಮನವಿ ಸಲ್ಲಿಸಿದೆ. ಈ ವಿಚಾರ ಈಗ ಮತ್ತೆ ದೊಡ್ಡ ಪ್ರತಿಭಟನೆಗೆ ನಾಂದಿ ಹಾಡುತ್ತಾ? ಎಂಬ ಆತಂಕ ಹುಟ್ಟಿಸಿದೆ.
ಕರ್ನಾಟಕದ ವಿರುದ್ಧ ತಮಿಳುನಾಡು ಆರೋಪ
ಅಲ್ಲದೆ ಇದೇ ವೇಳೆ ತಮಿಳುನಾಡು ಸರ್ಕಾರ ಕರ್ನಾಟಕದ ವಿರುದ್ಧ ಬಾಯಿಗೆ ಬಂದಂತೆಲ್ಲ ಆರೋಪ ಮಾಡಿದೆ. ಮಳೆ ಕೊರತೆ ಕಾರಣ ನೀಡಿ ಕರ್ನಾಟಕ ಸುಪ್ರೀಂ ಆದೇಶ ಪಾಲನೆಯನ್ನೇ ಮಾಡುತ್ತಿಲ್ಲ. ಸೂಚನೆ ನೀಡಿರುವ ಪ್ರಮಾಣದಲ್ಲಿ ನೀರು ಹರಿಸುತ್ತಿಲ್ಲ. ಫೆಬ್ರವರಿ 1 ರಿಂದ, ಏಪ್ರಿಲ್ 28 ರವರೆಗೂ ಪರಿಸರಕ್ಕೆ 7.33 ಟಿಎಂಸಿ ನೀರು ಹರಿಸಬೇಕಿತ್ತು. ಆದರೂ, ಕರ್ನಾಟಕ ರಾಜ್ಯ ಮಾತ್ರ 5.31 ಟಿಎಂಸಿ ನೀರು ಹರಿಸಿ ಇಲ್ಲಿಯೂ 2 ಟಿಎಂಸಿ ಬಾಕಿಯಾಗಿ ಉಳಿಸಿಕೊಂಡಿದೆ ಎಂದು ತಮಿಳುನಾಡು ಆರೋಪ ಮಾಡಿದೆ.
ಮೇ 16ಕ್ಕೆ ಮತ್ತೊಂದು ಸುತ್ತಿನ ಸಭೆ
ಇದರ ಜೊತೆಗೆ ತಮಿಳುನಾಡಿನ ಮೆಟ್ಟೂರಿನಲ್ಲಿ 20 ಟಿಎಂಸಿ ಮಾತ್ರ ನೀರಿದೆ. ಕುಡಿಯಲು & ಪರಿಸರಕ್ಕೆ ಆ ನೀರನ್ನ ಬಳಸಲಾಗುತ್ತಿದೆ. ಬಾಕಿ ಉಳಿದ ನೀರನ್ನು ಕರ್ನಾಟಕ ರಿಲೀಸ್ ಮಾಡಲಿ ಅಂತ ಈಗ ತಮಿಳುನಾಡು ಸರ್ಕಾರ ತಮ್ಮ ಅಧಿಕಾರಿಗಳ ಮೂಲಕ ಕಾವೇರಿ ನೀರು ನಿಯಂತ್ರಣ ಸಮಿತಿಗೆ ಮನವಿ ಸಲ್ಲಿಸಿದೆ. ಹೀಗೆ 2 ರಾಜ್ಯಗಳ ನಡುವೆ ಸಭೆಯಲ್ಲಿ ಸಮನ್ವಯತೆ ಮೂಡದ ಕಾರಣಕ್ಕೆ, ಮೇ 16 ಕ್ಕೆ ಮತ್ತೊಂದು ಸುತ್ತಿನ ಸಭೆಯನ್ನ ನಡೆಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಅಧಿಕಾರಿಗಳು ನಿರ್ಧರಿಸಿದ್ದಾರೆ.












Click it and Unblock the Notifications