ತಾಂಬೂಲ ಪ್ರಶ್ನೆ : ಕಾವೇರಿ ಜಲಮೂಲಕ್ಕೆ ಕಾದಿದೆ ಆತಂಕ
ಮಡಿಕೇರಿ, ಡಿ 16: ನಾಡಿನ ಜೀವನದಿ ಕಾವೇರಿಯ ಪಾವಿತ್ರ್ಯತೆ ಮತ್ತು ಜಲಮೂಲಕ್ಕೆ ಧಕ್ಕೆ ಉಂಟಾಗಿದೆ ಎನ್ನುವ ವಿಷಯ 'ತಾಂಬೂಲ ಪ್ರಶ್ನೆ'ಯಿಂದ ಬಹಿರಂಗವಾಗಿದೆ.
ದೇವಸ್ಥಾನದ ಜೀರ್ಣೋದ್ದಾರ, ಬ್ರಹ್ಮಕಲಶ ಅಥವಾ ಕ್ಷೇತ್ರದಲ್ಲಿ ಏನಾದರೂ ಅವಘಡ ಸಂಭವಿಸಿದರೆ ಅಷ್ಠಮಂಗಲ ಪ್ರಶ್ನೆ, ಆರೂಢ ಪ್ರಶ್ನೆ, ಸ್ವರ್ಣ ಪ್ರಶ್ನೆ ಅಥವಾ ತಾಂಬೂಲ ಪ್ರಶ್ನೆ ಇಟ್ಟು ಪರಿಹಾರ ಕಂಡುಕೊಳ್ಳುವ ಸಂಪ್ರದಾಯ ನಮ್ಮಲ್ಲಿದೆ.
ಅದರಂತೇ, ತಲಕಾವೇರಿಯಲ್ಲಿ ಸೋಮವಾರ (ಡಿ 15) ಆಯೋಜಿಸಲಾಗಿದ್ದ ತಾಂಬೂಲ ಪ್ರಶ್ನೆಯಲ್ಲಿ ನಾಡಿನ ಜೀವನದಿಯ ಜಲಮೂಲಕ್ಕೆ ಧಕ್ಕೆ ಉಂಟಾಗಿದೆ ಎನ್ನುವ ಮಾಹಿತಿ ಪ್ರಶ್ನೆಯಿಂದ ಹೊರಬಿದ್ದಿದೆ. (ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ತೀರ್ಥೋದ್ಭವ)
ಏಳು ವರ್ಷಗಳ ಹಿಂದೆ ತಲಕಾವೇರಿಯಲ್ಲಿ ನಡೆದ ಜೀರ್ಣೊದ್ದಾರ ಕಾಮಗಾರಿಯ ಸಮಯದಲ್ಲಿ ಕಾವೇರಿಯ ಪಾವಿತ್ರ್ಯತೆಗೆ ಧಕ್ಕೆಯಾಗಿದೆ ಮತ್ತು ಬ್ರಹ್ಮಕುಂಡಿಕೆಗೆ ಛಾವಣಿ ಹಾಕುವುದು ಬೇಡ ಎಂದು ಪರಿಹಾರ ಹೇಳಲಾಗಿದೆ ಎಂದು ತಾಂಬೂಲ ಪ್ರಶ್ನೆಯಲ್ಲಿ ಭಾಗವಹಿಸಿದ್ದ ಗಣಪತಿ ಐತಾಳ್ ಹೇಳಿದ್ದಾರೆ.
ದೇವಾಲಯದ ಪೂಜಾ ವಿಧಿವಿಧಾನಗಳ ಬಗ್ಗೆ ಭಕ್ತರು ಸಂಶಯ ವ್ಯಕ್ತ ಪಡಿಸಿದ್ದ ಹಿನ್ನಲೆಯಲ್ಲಿ ದೇವಾಲಯದ ಆಡಳಿತ ಮಂಡಳಿ ತಾಂಬೂಲ ಪ್ರಶ್ನೆಯನ್ನು ಆಯೋಜಿಸಿತ್ತು. ಕಾಸರಗೋಡಿನಿಂದ ಬಂದಿದ್ದ ತಂತ್ರಿಗಳು ತಾಂಬೂಲ ಪ್ರಶ್ನೆಯನ್ನು ನಡೆಸಿಕೊಟ್ಟರು.
ತೀರ್ಥೋದ್ಭವವಾಗುವ 'ಬ್ರಹ್ಮಕುಂಡಿಕೆ' ಭಾಗ ಸೇರಿದಂತೆ ದೇವಾಲಯದ ಇತರ ಭಾಗಗಳಲ್ಲಿ ಜೀರ್ಣೋದ್ದಾರ ಕಾಮಗಾರಿಗಳನ್ನು ಆಡಳಿತ ಮಂಡಳಿ ಕೈಗೆತ್ತಿ ಕೊಂಡಿತ್ತು. ಈ ಸಂಬಂಧ ಭಕ್ತರಲ್ಲಿ ಮೂಡಿದ್ದ ಸಂಶಯ ನಿವಾರಿಸಲು ದೇವಾಲಯದ ಆಡಳಿತ ಮಂಡಳಿ ತಾಂಬೂಲ ಪ್ರಶ್ನೆಯನ್ನು ಆಯೋಜಿಸಿತ್ತು.
ತುಲಾಸಂಕ್ರಮಣ ದಿನದಂದು ನಡೆಯುವ ತೀರ್ಥೋದ್ಭವ ಸಂದರ್ಭದಲ್ಲಿ ಬ್ರಹ್ಮಕುಂಡಿಕೆಯ ಬಳಿ ಭಕ್ತರನ್ನು ಬಿಡಬಾರದು, ಭಕ್ತರಿಗೆ ಅರ್ಚಕರೇ ತೀರ್ಥವನ್ನು ನೀಡಿ ಇದರ ಪಾವಿತ್ರ್ಯವನ್ನು ಕಾಪಾಡಬೇಕೆಂದು ಸ್ಥಳೀಯರು ಆಡಳಿತ ಮಂಡಳಿಯಲ್ಲಿ ಈ ಹಿಂದೆ ಮನವಿ ಸಲ್ಲಿಸಿದ್ದರು.
ತೀರ್ಥೋದ್ಭವ ಪ್ರೋಕ್ಷಣೆ ಪುಣ್ಯ : ತುಲಾ ಸಂಕ್ರಮಣದಂದು ಉತ್ತರ ಭಾರತದ ಗಂಗೆ ದಕ್ಷಿಣದ ಕಾವೇರಿಯಲ್ಲಿ ಐಕ್ಯವಾಗುತ್ತಾಳೆ. ತೀರ್ಥೋದ್ಭವಾದ ಗಳಿಗೆಯಲ್ಲಿ ಕಾವೇರಿಯ ನೀರಿನ ಪ್ರೋಕ್ಷಣೆಯಾದರೂ ಸಾಕು ಸಕಲ ಪಾಪಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ.