ಸಂಪುಟಕ್ಕೆ ಕಳಂಕಿತರು: ಡಿಕೆಶಿ ವಿರುದ್ಧ ಗುಡುಗಿದ ಎಚ್ಡಿಕೆ

ತಾಲ್ಲೂಕಿನ ಮರಳವಾಡಿ ಹೋಬಳಿಯ ಸುಂಡಘಟ್ಟ ಗ್ರಾಮದಲ್ಲಿ ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ ಅವರು 'ಈ ಹಿಂದೆ ಇವರ (ಡಿಕೆ ಶಿವಕುಮಾರ್) ಅಕ್ರಮಗಳ ಬಗ್ಗೆ ಬಹಿರಂಗ ಹೋರಾಟ ನಡೆಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ. ಇದು ಇನ್ನೂ ಇತ್ಯರ್ಥವಾಗದೇ ತಡೆಯಾಜ್ಞೆ ಇದ್ದರೂ ಡಿಕೆಶಿ ಮತ್ತು ಅವರ ಸಹೋದರರು ಪ್ರಕರಣ ಮುಗಿದಿರುವುದಾಗಿ ಬೀಗುತ್ತಿದ್ದಾರೆ. ಇವರ ಎಲ್ಲ ಅನ್ಯಾಯ, ಅಕ್ರಮ ಬಯಲಾಗುವ ದಿನ ಬಹಳ ದೂರವಿಲ್ಲ. ಕಾನೂನಿನ ಮುಷ್ಠಿಯಿಂದ ಪಾರಾಗಲು ಸಾಧ್ಯವೇ ಇಲ್ಲ'ಎಂದು ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಕಳಂಕಿತ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕೆಂದು ರಾಜ್ಯಾದ್ಯಂತ ಪ್ರಗತಿಪರ ಚಿಂತಕರು ಹಾಗೂ ಭ್ರಷ್ಟಾಚಾರ ವಿರೋಧಿ ಹೋರಾಟಗಾರರು ನಿತ್ಯ ಆರೋಪ ಪಟ್ಟಿಗಳನ್ನು ಬಿಡುಗಡೆ ಮಾಡಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಅವರ ಹೋರಾಟಕ್ಕೆ ಜೆಡಿಎಸ್ ವತಿಯಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ಘೋಷಿಸಿದರು.
ರಾಮನಗರ ಜಿಲ್ಲೆ ಬರಪೀಡಿತ ಪ್ರದೇಶವಾಗಿದೆ. ಆದರೂ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಮುಂದಿನ ಬೇಸಿಗೆ ಸಂದರ್ಭದಲ್ಲಿ ಯಾವುದೇ ಗ್ರಾಮಕ್ಕೂ ಕುಡಿಯುವ ನೀರಿನ ಅಭಾವ ಎದುರಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜೆಡಿಎಸ್ ನಾಯಕ ಕುಮಾರಸ್ವಾಮಿ ಹೇಳಿದರು. ಮಾಜಿ ಶಾಸಕ ಕೆ.ರಾಜು, ಜೆಡಿಎಸ್ ಅಧ್ಯಕ್ಷ ಸಿದ್ದಮರಿಗೌಡ, ಜಿಪಂ ಮಾಜಿ ಸದಸ್ಯ ಭುಜಂಗಯ್ಯ, ಮುಖಂಡರಾದ ರಾಮಕೃಷ್ಣ, ರಾಮು, ಹಾರೋಹಳ್ಳಿ ಪುಟ್ಟಸ್ವಾಮಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.












Click it and Unblock the Notifications