ಕನ್ನಡಿಗರ ಉಳಿವಿಗಾಗಿ ಸರ್ಕಾರಕ್ಕೆ ದೊಡ್ಡ ಬೇಡಿಕೆ ಇಟ್ಟ ಕರವೇ, ಏನದು?
ಕರ್ನಾಟಕ ರಕ್ಷಣಾ ವೇದಿಕೆಯು (ಕರವೇ) ಸಿದ್ದರಾಮಯ್ಯ ಸರ್ಕಾರದ ಮುಂದೆ ದೊಡ್ಡ ಬೇಡಿಕಿ ಇಟ್ಟಿದೆ. ಕನ್ನಡಿಗರ ಉಳಿವಿಗಾಗಿ ರಾಜ್ಯ ಸರ್ಕಾರವು ಈ ಕೆಲವನ್ನು ತುರ್ತಾಗಿ ಮಾಡಬೇಕಿದೆ ಎಂದು ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡರು ಒತ್ತಾಯಿಸಿದ್ದಾರೆ. ಅಲ್ಲದೆ ಸಿದ್ದರಾಮಯ್ಯ ಅವರನ್ನು ಬಿಟ್ಟರೆ ಮತ್ತೊಬ್ಬರಿಂದ ಈ ಕೆಲಸ ಆಗುವ ನಂಬಿಕೆ ನನಗಿಲ್ಲ ಎಂದೂ ನಾರಾಯಣಗೌಡರು ಹೇಳಿದ್ದಾರೆ.
ಕನ್ನಡನಾಡು ಸಿದ್ದರಾಮಯ್ಯನವರಿಂದ ಇನ್ನಷ್ಟು ನಿರೀಕ್ಷಿಸುತ್ತಿದೆ. ಇನ್ನಷ್ಟು ಕನ್ನಡದ ಕೆಲಸಗಳು ಅವರಿಂದ ಆಗಬೇಕಾಗಿದೆ. ಕನ್ನಡಿಗರ ಬದುಕನ್ನು ಹೊರರಾಜ್ಯದಿಂದ ಬಂದವರು ಕಿತ್ತುಕೊಳ್ಳುತ್ತಿದ್ದಾರೆ. ಕರ್ನಾಟಕದ ಉದ್ಯಮಗಳು, ಉದ್ಯೋಗಗಳು ಕನ್ನಡಿಗರ ಕೈತಪ್ಪುತ್ತಿವೆ. ಇದನ್ನೆಲ್ಲ ನಿಗ್ರಹಿಸಲು ಸಮರ್ಪಕವಾದ ಕಾಯ್ದೆ ರೂಪಿಸಿಬೇಕಾಗಿದೆ. ಬಹುಶಃ ಸಿದ್ದರಾಮಯ್ಯ ಅವರು ಈ ಕಾರ್ಯವನ್ನು ಈಗ ಮಾಡದಿದ್ದರೆ, ಮುಂದೆ ಇನ್ಯಾರೋ ಬಂದು ಇದನ್ನೆಲ್ಲ ಮಾಡುವರೆಂಬ ನಂಬಿಕೆ ನನಗಿಲ್ಲ ಎಂದು ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಪಾರವಾದ ಕನ್ನಡಾಭಿಮಾನದಿಂದ 'ಕನ್ನಡ ರಾಮಯ್ಯ' ಎನಿಸಿಕೊಂಡವರು. ಕನ್ನಡ ನಾಮಫಲಕ ಹೋರಾಟದ ಸಂದರ್ಭದಲ್ಲಿ ನಾನು ಹದಿನಾರು ದಿನಗಳ ಕಾಲ ಜೈಲುವಾಸ ಅನುಭವಿಸಿದೆ. ನನ್ನ ಮೇಲೆ ಒಂದೇ ದಿನ ಹದಿನಾರು ಪ್ರಕರಣಗಳನ್ನು ದಾಖಲಿಸಲಾಯಿತು. ಆದರೆ, ಕನ್ನಡ ನಾಮಫಲಕ ಕಡ್ಡಾಯಕ್ಕಾಗಿ ಸಿದ್ದರಾಮಯ್ಯನವರು ಕಾಯ್ದೆಯನ್ನು ರೂಪಿಸಿ ಜಾರಿಮಾಡಿದ್ದು, ನಮ್ಮ ನೋವನ್ನು ಮರೆಯಿಸಿತು. ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ತಡೆಯುವ ನಮ್ಮ ಹೋರಾಟ ಯಶಸ್ವಿಯಾಗಿದ್ದೂ ಸಹ ಸಿದ್ದರಾಮಯ್ಯನವರು ತೆಗೆದುಕೊಂಡ ದಿಟ್ಟ ನಿರ್ಧಾರದಿಂದ ಎಂದು ಶ್ಲಾಘಿಸಿದ್ದಾರೆ.
ಕನ್ನಡದ ತಾಯಿ ಭುವನೇಶ್ವರಿಯ ಮೂರ್ತಿ ಅನಾವರಣದ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಕನ್ನಡಪರ ಹೋರಾಟಗಾರರ ಮೇಲಿನ ಎಲ್ಲ ಮೊಕದ್ದಮೆಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿದ್ದಾರೆ. ಈ ಅಭೂತಪೂರ್ವ ನಿರ್ಣಯ ಕೈಗೊಂಡಿದ್ದಕ್ಕಾಗಿ ಎಲ್ಲ ಕನ್ನಡಪರ ಹೋರಾಟಗಾರರ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.
ಕನ್ನಡದ ಕುಲದೇವತೆ ಭುವನೇಶ್ವರಿಯ ಸನ್ನಿಧಾನದಲ್ಲೇ ಕನ್ನಡಪರರ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಅವರು ಘೋಷಿಸಿದ್ದಾರೆ. ಆ ತಾಯಿಯ ಎದುರು ಆಡಿದ ಮಾತು ಸುಳ್ಳಾಗಬಾರದು. ಹಿಂದೆ ಹಲವು ಮುಖ್ಯಮಂತ್ರಿಗಳು, ಗೃಹಸಚಿವರು ಇಂಥ ಮಾತನ್ನಾಡಿ ಅದನ್ನು ಉಳಿಸಿಕೊಳ್ಳಲಿಲ್ಲ. ಈಗ ಹಾಗೆ ಆಗದಿರಲಿ. ಕೊಟ್ಟ ಮಾತು ತಪ್ಪದಿರಲಿ. ಹಾಗೆಯೇ ಕನ್ನಡದ ಅಸ್ಮಿತೆ ಎತ್ತಿ ಹಿಡಿಯುವ ಕಾಳಜಿಯ ಕನ್ನಡಪ್ರೇಮಿಯಾಗಿ ತಮ್ಮ ಅಧಿಕಾರವಧಿಯಲ್ಲಿ ಏನೇನು ಸಾಧ್ಯವೋ ಅದನ್ನೆಲ್ಲ ಅವರು ಮಾಡಲಿ ಎಂದು ಮನವಿ ಮಾಡುತ್ತೇನೆ ಎಂದು ಕೇಳಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಮಾರಾಟವಾಗುವ ಅಥವಾ ಬಳಕೆಯಾಗುವ ಎಲ್ಲ ಬಗೆಯ ಉತ್ಪನ್ನಗಳ ಏಜೆನ್ಸಿಗಳು ಪರಭಾಷಿಕರ ಪಾಲಾಗುತ್ತಿದೆ. ಇದು ಸಾರಾಸಗಟಾಗಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಮತ್ತು ಅವಮಾನವಾಗಿದೆ. ಹೀಗಾಗಿ ಎಲ್ಲ ಉತ್ಪನ್ನಗಳ ಏಜೆನ್ಸಿಗಳು ಕನ್ನಡಿಗರಿಗೇ ಸಿಗಬೇಕು. ಅಥವಾ ಈ ಏಜೆನ್ಸಿಗಳಲ್ಲಿ ಕನ್ನಡಿಗರು ಪಾಲುದಾರರಾಗಿರಬೇಕು ಎಂದು ಬೇಡಿಕೆ ಮುಂದಿಟ್ಟಿದ್ದಾರೆ.
ಕರ್ನಾಟಕದಲ್ಲಿ ಮಾರಾಟವಾಗುವ, ಬಳಕೆಯಾಗುವ ಎಲ್ಲ ಬಗೆಯ ಉತ್ಪನ್ನಗಳ ಮೇಲೆ ಶೇ 60ರಷ್ಟು ಬರಹಗಳು ಕನ್ನಡದಲ್ಲಿಯೇ ಇರಬೇಕು ಎಂದು ತಾವು ಬಳಕೆ ಮಾಡುವ ವಸ್ತುಗಳ ಹೆಸರೇನು? ಪ್ರಮಾಣವೇನು? ಅವುಗಳ ತಯಾರಿಕೆಗೆ ಏನನ್ನು ಬಳಸಲಾಗಿದೆ? ಎಂಬ ವಿಷಯಗಳು ಕನ್ನಡಿಗರಿಗೆ ಕಡ್ಡಾಯವಾಗಿ ಗೊತ್ತಾಗಬೇಕು ಎಂದು ನಾರಾಯಣಗೌಡರು ಆಗ್ರಹಿಸಿದ್ದಾರೆ.












Click it and Unblock the Notifications