ವಲಸೆ ತಡೆಯದಿದ್ರೆ ನಿಮ್ಮ ಕುರ್ಚಿಯಲ್ಲೂ ಹಿಂದಿಯವ್ರೇ ಇರ್ತಾರೆ: ಕರವೇ ಎಚ್ಚರಿಸಿದ್ದು ಯಾರಿಗೆ?
ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಕರ್ನಾಟಕದ ರಾಜಕಾರಣಿಗಳಿಗೆ ಕಿವಿಮಾತೊಂದನ್ನು ಹೇಳಿದ್ದಾರೆ. ಕರ್ನಾಟಕದ ಎಲ್ಲ ರಾಜಕಾರಣಿಗಳಿಗೆ ನನ್ನದೊಂದು ಮಾತು. ಏನೇ ಆಗುವ ಮೊದಲು ಸ್ವಾಭಿಮಾನಿಗಳಾಗಿ. ನಿಮ್ಮತನವನ್ನು ಮಾರಿಕೊಳ್ಳಬೇಡಿ. ಹಿಂದಿಯನ್ನರಿಗೆ ರತ್ನಗಂಬಳಿ ಹಾಕಿದರೆ ನಾಳೆ ನಿಮ್ಮ ಜಾಗದಲ್ಲೂ ಜನಪ್ರತಿನಿಧಿಗಳಾಗಿ ಅವರೇ ಆರಿಸಿಬರುತ್ತಾರೆ ಎಂದು ಎಚ್ಚರಿಸಿದ್ದಾರೆ.
ಕನ್ನಡಿಗರ, ಕನ್ನಡ ನಾಡಿನ, ಕರ್ನಾಟಕದ ಋಣ ತೀರಿಸುವ ಕೆಲಸ ಮಾಡಿ. ಜಡತ್ವವನ್ನು ಕೊಡವಿಕೊಂಡು ಕನ್ನಡಿಗರ ಮೇಲೆ ಆಗುತ್ತಿರುವ ದಾಳಿಯನ್ನು ತಡೆಯಿರಿ. ಕರ್ನಾಟಕದ ಮೂಲಸ್ವರೂಪವನ್ನೇ ಬದಲಾಯಿಸುತ್ತಿರುವ ಮಹಾವಲಸೆಯನ್ನು ತಡೆಗಟ್ಟದೇ ಇದ್ದರೆ, ಮುಂದಿನ ಪೀಳಿಗೆಯ ಕನ್ನಡ ಸಮುದಾಯ ತನ್ನ ನಾಡಿನಲ್ಲಿ ತಾನೇ ಪರಕೀಯತೆ ಅನುಭವಿಸಬೇಕಾಗುತ್ತದೆ. ಇದನ್ನು ನಾವು ತಡೆಗಟ್ಟಲೇಬೇಕು. ಇಲ್ಲವಾದಲ್ಲಿ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ರಾಜನಾಥ ಸಿಂಗ್ ಅವರು ಕರ್ನಾಟಕದ ಉದ್ಯಮಗಳಲ್ಲಿ ಹಿಂದಿಯನ್ನರನ್ನು ತುಂಬುವ ಮಾತುಗಳನ್ನಾಡಿದಾಗ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಸೇರಿದಂತೆ ಸಚಿವರುಗಳು ಯಾಕೆ ಸುಮ್ಮನಿದ್ದರು? ಯಾರೂ ಯಾಕೆ ಪ್ರತಿಭಟಿಸಲಿಲ್ಲ? ನಂತರವೂ ಯಾರೂ ಯಾಕೆ ಈ ಬಗ್ಗೆ ಚಕಾರವೆತ್ತುತ್ತಿಲ್ಲ? ಅವರ ಮಾತಿಗೆ ನಿಮ್ಮ ಸಮ್ಮತಿಯಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಕನ್ನಡಿಗರು ಕರುಣಾಳುಗಳು, ಸೌಜನ್ಯಶೀಲರು, ಸ್ನೇಹಜೀವಿಗಳು. ಇದನ್ನೇ ದುರ್ಬಳಕೆ ಮಾಡಿಕೊಂಡು ನಮ್ಮ ಮೇಲೆ ಸವಾರಿ ಮಾಡಲಾಗುತ್ತಿದೆ. ಕನ್ನಡದ ಮಕ್ಕಳ ಉದ್ಯೋಗ, ಬದುಕನ್ನು ಕಸಿದು ಹಿಂದಿಯನ್ನರಿಗೆ ಕೊಡಲಾಗುತ್ತಿದೆ. ನಮ್ಮ ಸಹನೆಗೂ ಮಿತಿ ಇದೆ. ಕೂಡಲೇ ಈ ಅನಾಚಾರ ನಿಲ್ಲಿಸಿ, ಇಲ್ಲವೇ ಪರಿಣಾಮ ಎದುರಿಸಿ. ಇದು ನನ್ನ ನೇರ ಎಚ್ಚರಿಕೆ ಎಂದಿದ್ದಾರೆ.

ಪ್ರತಿವರ್ಷ ಲಕ್ಷಗಟ್ಟಲೆ ಕೋಟಿ ರೂಪಾಯಿ ತೆರಿಗೆ ಹಣವನ್ನು ನೀಡುವ ಅಗ್ರಗಣ್ಯ ರಾಜ್ಯ ನಮ್ಮದು. ಇದಕ್ಕೆ ಪ್ರತಿಯಾಗಿ ನಮಗೆ ಲಭಿಸುತ್ತಿರುವುದೇನು? ನಮ್ಮ ತೆರಿಗೆಯ ದೊಡ್ಡ ಪಾಲು ಹಿಂದಿ ರಾಜ್ಯಗಳಿಗೆ ಹರಿದುಹೋಗುತ್ತಿದೆ. ಇದು ಸಾಲದೆಂಬಂತೆ ಹಿಂದಿರಾಜ್ಯಗಳಿಂದ ಮಹಾವಲಸೆ ನಡೆಯುತ್ತಿದೆ. ಇದಕ್ಕೆ ಪೂರ್ಣವಿರಾಮ ಹಾಕದ ಹೊರತು ಕನ್ನಡಿಗರಿಗೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದ್ದಾರೆ.
ಕರ್ನಾಟಕಕ್ಕೆ ಹಿಂದಿರಾಜ್ಯಗಳಿಂದ ಅವ್ಯಾಹತವಾಗಿ ವಲಸೆ ನಡೆಸುತ್ತಿದೆ. ಪ್ರತಿದಿನ ಸಾವಿರಾರು ಮಂದಿ ರೈಲುಗಳ ಮೂಲಕ ಬಂದು ಬೆಂಗಳೂರು ಮತ್ತು ಇತರ ನಗರಗಳನ್ನು ಸೇರುತ್ತಿದ್ದಾರೆ. ಇದು ವ್ಯವಸ್ಥಿತವಾಗಿ ನಡೆಯುತ್ತಿದೆ ಮತ್ತು ಇದಕ್ಕೆ ಒಕ್ಕೂಟ ಸರ್ಕಾರದ ಕುಮ್ಮಕ್ಕು ಇದೆ ಎಂಬುದಕ್ಕೆ ರಾಜನಾಥ ಸಿಂಗ್ ಹೇಳಿಕೆ ಸಾಕ್ಷಿ ಎಂದು ದೂರಿದ್ದಾರೆ.
ರಾಜನಾಥ್ ಸಿಂಗ್ ರಾಜೀನಾಮೆ ಕೊಡಲಿ: ಕರ್ನಾಟಕದ ಉದ್ಯಮಗಳಲ್ಲಿ ಯುಪಿ, ಬಿಹಾರಿಗಳನ್ನು ತುಂಬುವ ಮಾತುಗಳನ್ನಾಡಿರುವ ಒಕ್ಕೂಟ ಸರ್ಕಾರದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಭಾರತ ಒಕ್ಕೂಟ ಹೇಗೆ ರಚನೆಯಾಗಿದೆ ಎಂಬುದು ಗೊತ್ತಿಲ್ಲ. ಅವರದು ಭಾರತವನ್ನು ದುರ್ಬಲಗೊಳಿಸುವ ದೇಶದ್ರೋಹದ ಹೇಳಿಕೆ. ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕದ ಉದ್ಯಮಗಳಲ್ಲಿ ಕನ್ನಡಿಗರಿಗೆ ಆದ್ಯತೆ ಇರಬೇಕು. ಕರ್ನಾಟಕ ಹಿಂದಿನಿಂದಲೂ ಉದ್ಯಮಿಗಳಿಗೆ ಮಣೆ ಹಾಕಿದೆ. ಅವರಿಗೆ ಭೂಮಿ, ನೀರು, ವಿದ್ಯುತ್, ಮೂಲಭೂತ ಸೌಕರ್ಯಗಳನ್ನು ನೀಡಿದೆ. ಈ ಉದ್ಯಮಗಳ ಗರಿಷ್ಠ ಲಾಭ ಕನ್ನಡಿಗರಿಗೆ ಲಭಿಸಬೇಕು. ಇಲ್ಲವಾದಲ್ಲಿ ಈ ಉದ್ಯಮಗಳು ಕರ್ನಾಟಕಕ್ಕೆ ಬೇಕಾಗಿಲ್ಲ ಎಂದಿದ್ದಾರೆ.












Click it and Unblock the Notifications