ಖಾಸಗಿ ಶಾಲೆಗಳ ಶುಲ್ಕ: ಸರ್ಕಾರದ ನಿಲುವು ಸ್ಪಷ್ಟಪಡಿಸಿದ ಸುರೇಶ್ ಕುಮಾರ್!
ಬೆಂಗಳೂರು, ಜ. 06: ಕೊರೊನಾ ವೈರಸ್ ಎಂಬ ಮಹಾಮಾರಿಯ ಆತಂಕದ ಮಧ್ಯೆ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಎರಡನೇ ವರ್ಷದ ತರಗತಿಗಳು ಆರಂಭವಾಗಿವೆ. ಬಹುದೊಡ್ಡ ಅಪಾಯ ಮೈಮೇಲೆ ಎಳೆದುಕೊಂಡು ಇಡೀ ಶಿಕ್ಷಣ ಇಲಾಖೆ ಮೊದಲ ಹಂತದ ಯಶಸ್ಸು ಸಾಧಿಸಿದೆ. ಆದರೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಇರುವ ಅದೃಷ್ಟ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಇಲ್ಲ.
ಕೊರೊನಾದಂತಹ ಸಂಕಷ್ಟದ ಸಮಯದಲ್ಲಿಯೂ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಕಲಿಕೆಗೆ ಶಿಕ್ಷಣ ಇಲಾಖೆ ಕ್ರಮಕೈಗೊಂಡಿತ್ತು. ವಿದ್ಯಾಗಮ ಎಂಬ ವಿನೂತನ ಯೋಜನೆಯಿಂದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಕಲಿಕೆಗೆ ಅನಕೂಲವಾಗಿದೆ. ಆದರೆ ಖಾಸಗಿ ಶಾಲೆಗಳು ಮಾತ್ರ ಮಕ್ಕಳ ಕಲಿಕೆಗೆ ವಿದ್ಯಾಗಮವನ್ನು ಅಳವಡಿಸಿಕೊಂಡಿಲ್ಲ. ಆನ್ಲೈನ್ ಕಲಿಕೆಗೆ ಒತ್ತು ಕೊಟ್ಟಿವೆ. ಆದರೆ ಶುಲ್ಕದ ವಿಚಾರವಾಗಿ ಪಾಲಕರು ಹಾಗೂ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಮಧ್ಯೆ ಹಗ್ಗಜಗ್ಗಾಟ ಮುಂದುವರೆದಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ (KAMS) ಪ್ರಕಟಣೆಯನ್ನು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಸ್ವಾಗತಿಸಿದ್ದಾರೆ.
ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶುಲ್ಕ ಪಾವತಿ ವಿಚಾರವಾಗಿ ತಮ್ಮ ನಿಲವುವನ್ನೂ ಕೂಡ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ವರ್ಷ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಸಂಫೂರ್ಣ ಶುಲ್ಕ ಭರಿಸಬೇಕಾ? ಸರ್ಕಾರದ ನಿಲುವೇನು? ಮುಂದಿದೆ ಮಾಹಿತಿ.

ಶುಲ್ಕ ಕಟ್ಟಲು ಸಾಧ್ಯವಾಗುತ್ತಿಲ್ಲ
ಈ ಕುರಿತು ತಮ್ಮ ಪ್ರತಿಕ್ರಿಯೆ ಕೊಟ್ಟಿರುವ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು, ರಾಜ್ಯದ ಖಾಸಗಿ ಶಾಲೆಗಳಲ್ಲಿ ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿ ಮಧ್ಯೆ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ. ಜೊತೆಗೆ ಈ ಮಹಾಮಾರಿ ವರ್ಷದಲ್ಲಿ ಶಾಲಾ ಶುಲ್ಕ ಕಟ್ಟುವ ಬಗ್ಗೆ ತೀವ್ರ ವಾಗ್ವಾದ, ಸಂಘರ್ಷ ಕೂಡ ನಡೆದಿದೆ.
ಸಂಪಾದನೆ ಕಡಿಮೆ ಆಗಿರುವುದರಿಂದ ಮತ್ತು ಕೆಲವು ಕಡೆಗಳಲ್ಲಿ ಸಂಪಾದನೆಯೇ ಇಲ್ಲದ್ದರಿಂದ ತಮಗೆ ಎಂದಿನಂತೆ ಶುಲ್ಕ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂಬುದು ಪೋಷಕರ ನ್ಯಾಯಯುತ ಅಳಲು. ಅಂಥವರ ಮೇಲೆ ಒತ್ತಡ ಹಾಕುವುದು ಕೂಡ ಸರಿಯಲ್ಲ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಶಿಕ್ಷಕರಿಗೆ ವೇತನ ಪಾವತಿ!
ಆದರೆ ಪೋಷಕರು ಶುಲ್ಕ ಕಟ್ಟದಿದ್ದರೆ, ನಾವು ನಮ್ಮ ಶಾಲೆಗಳ ಶಿಕ್ಷಕರಿಗೆ ವೇತನ ಕೊಡುವುದು ಹೇಗೆ ಎಂಬುದು ಖಾಸಗಿ ಶಾಲೆಗಳ ಪ್ರಶ್ನೆ. ಅದರಲ್ಲಿಯೂ ಬಜೆಟ್ ಶಾಲೆಗಳು ಎಂದು ಕರೆಯಲ್ಪಡುವ ಮಧ್ಯಮ ವರ್ಗದ ಶಾಲೆಗಳಲ್ಲಿ, ಅನೇಕ ಶಿಕ್ಷಕರು ಇಂದು ತಮ್ಮ ಕೆಲಸ ಕಳೆದುಕೊಂಡಿದ್ದಾರೆ ಅಥವಾ ಅವರ ಸಂಬಳ ಕಡಿತಗೊಂಡಿದೆ. ಇವರಲ್ಲಿ ಅನೇಕರು ಇಂದು ತರಕಾರಿ ಮಾರುವುದರಿಂದ ಹಿಡಿದು ಬೇರೆ ಬೇರೆ ಉದ್ಯೋಗಗಳಲ್ಲಿ ತೊಡಗಿದ್ದಾರೆ. ಇದು ಕೂಡ ಸರಿಯಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಅಷ್ಟಕ್ಕೂ ಕ್ಯಾಮ್ಸ್ ನಿಲುವೇನು?
ಈ ವರ್ಷ ಪೂರ್ತಿ ಶಾಲಾ ಶುಲ್ಕ ಭರಿಸಿ ಎಂದು ಒತ್ತಡ ಹೇರುವುದು ಸರಿಯಲ್ಲ. ಈ ವರ್ಷದ ಖರ್ಚು ವೆಚ್ಚದ ಆಧಾರದ ಮೇಲೆ ಶುಲ್ಕ ನಿಗದಿ ಮಾಡಿ. ಬಲವಂತವಾಗಿ ಶುಲ್ಕ ಪಾವತಿ ಮಾಡಿ ಎಂದು ಪೋಷಕರ ಮೇಲೆ ಒತ್ತಡ ಹಾಕಬೇಡಿ ಎಂದು ಕರ್ನಾಟಕ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (KAMS) ತನ್ನ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳಿಗೆ ಮನವಿ ಮಾಡಿದೆ. ಕ್ಯಾಮ್ಸ್ ಮನವಿಯನ್ನು ನಾನು ಸ್ವಾಗತಿಸುತ್ತೇನೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಹೇಳಿದ್ದಾರೆ.
ಹೀಗಾಗಿ ಯಾವುದೇ ಕಾರಣಕ್ಕೂ ಪಾಲಕರಿಗೆ ಪೂರ್ಣ ಶುಲ್ಕ ಭರಿಸಿ ಎಂಬುದನ್ನು ಸರ್ಕಾರ ಒಪ್ಪುವುದಿಲ್ಲ ಎಂದು ಪರೋಕ್ಷವಾಗಿ ಶಿಕ್ಷಣ ಸಚಿವರು ಹೇಳಿದಂತಾಗಿದೆ.
Recommended Video

ಸರ್ಕಾರದ ಸ್ಪಷ್ಟ ನಿಲುವು
ಈ ವರ್ಷ ಅನೇಕ ಶೈಕ್ಷಣಿಕ ಚಟುವಟಿಕೆಗಳು ನಡೆಯುವುದಿಲ್ಲ. ಹೀಗಾಗಿ ಪಠ್ಯಕ್ರಮ ಅಥವಾ ಪಠ್ಯೇತರ ಚಟುವಟಿಕೆಗಳಿಗೆ ಶುಲ್ಕ ನಿಗದಿ ಪಡಿಸಿದ್ದರೆ ಅದನ್ನು ಕೈಬಿಡಬೇಕು. ಮೊದಲಿನಂತೆ ಸಂಪೂರ್ಣವಾಗಿ ಶುಲ್ಕ ಪಡೆಯುವುದು ಬೇಡ. ಪಾಲಕ-ಪೋಷಕರು ಒಂದಿಗೆ ಚರ್ಚೆ ನಡೆಸಿ ಶುಲ್ಕ ರಿಯಾಯಿತಿ ನೀಡಿದರೆ ಪಾಲಕ-ಪೋಷಕರು ಖಂಡಿತವಾಗಿಯೂ ಶುಲ್ಕ ಪಾವತಿ ಮಾಡುತ್ತಾರೆ ಎಂಬ ಕ್ಯಾಮ್ಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಅವರ ಹೇಳಿಕೆ ಅತ್ಯಂತ ಆರೋಗ್ಯಕರ.
ಎಲ್ಲಾ ಶಾಲೆಗಳು ತಮ್ಮ ಶಾಲೆಗಳ ಮಕ್ಕಳ ಪೋಷಕರ ಆರ್ಥಿಕ ಸ್ಥಿತಿಯನ್ನು ಅರಿಯಬೇಕು ಎಂದು ಸುರೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜೊತೆಗೆ ಆರ್ಥಿಕವಾಗಿ ಸಬಲರಾಗಿರುವ ಪೋಷಕರು ತಮ್ಮ ಮಕ್ಕಳು ಓದುತ್ತಿರುವ ಶಾಲೆಗಳ ಶಿಕ್ಷಕರ ಜೀವನ ನಿರ್ವಹಣೆ ಬಗ್ಗೆಯೂ ಕಾಳಜಿ ವ್ಯಕ್ತಪಡಿಸಬೇಕು ಎಂದೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications