ಕೃಷ್ಣ, ಧರಂ, ಎಚ್ ಡಿಕೆ ವಿರುದ್ಧ ತನಿಖೆಗೆ ಸುಪ್ರೀಂ ಅಸ್ತು
ನವದೆಹಲಿ, ಸೆಪ್ಟೆಂಬರ್ 20: ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ, ಎನ್. ಧರಂ ಸಿಂಗ್ ಹಾಗೂ ಎಚ್.ಡಿ. ಕುಮಾರಸ್ವಾಮಿ ಇತರರ ವಿರುದ್ಧ ಕರ್ನಾಟಕ ಲೋಕಾಯುಕ್ತದ ವಿಶೇಷ ತನಿಖಾ ತಂಡ ದಾಖಲಿಸಿದ ಅಕ್ರಮ ಗಣಿಗಾರಿಕೆ ಪ್ರಕರಣಗಳ ವಿಚಾರಣೆ ನಡೆಸುವುದಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಗೆ ನೀಡಿದೆ.
2011ರಲ್ಲಿ ದಾಖಲಿಸಿದ್ದ ಈ ಪ್ರಕರಣಗಳ ವಿಚಾರಣೆಯಲ್ಲಿ ಮಧ್ಯ ಪ್ರವೇಶಿಸುವುದಕ್ಕೆ ಅವಕಾಶ ನೀಡಬೇಕು ಎಂದು ಕೋರಿ ಎಸ್ಐಟಿ ಪರವಾಗಿ ವಾದಿಸಿದ್ದ ವಕೀಲ ಜೋಸೆಫ್ ಅರಿಸ್ಟಾಟಲ್ ಅವರು ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ಪಿ.ಸಿ.ಘೋಷ್ ಹಾಗೂ ಅಮಿತಾವ್ ರಾಯ್ ಅವರ ಪೀಠವು ಒಪ್ಪಿಕೊಂಡಿತು.[ಧರ್ಮ-ಕೃಷ್ಣ-ಸ್ವಾಮಿ ಅಕ್ರಮ ಮತ್ತೆ ಸದಾ ಸರ್ಕಾರ ವರದಿ]
ಲೋಕಾಯುಕ್ತ ಸಲ್ಲಿಸಿದ ವರದಿ ಆಧಾರದಲ್ಲಿ ಎಸ್.ಎಂ. ಕೃಷ್ಣ ಅವರ ವಿರುದ್ಧದ ತನಿಖೆ ನಡೆಸುವುದಕ್ಕೆ 2012ರ ಜನವರಿಯಲ್ಲಿ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಲೋಕಾಯುಕ್ತ ತನಿಖೆಗೆ ಅವಕಾಶ ನೀಡಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದ ಎಸ್.ಎಂ. ಕೃಷ್ಣ, ತಮ್ಮ ಅವಧಿಯಲ್ಲಿ (1999ರಿಂದ 2004) ಕೇಂದ್ರದ ಖನಿಜ ನೀತಿಗಳಿಗೆ ಅನುಗುಣವಾಗಿ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದರು.[ಧರಂ, ಕುಮಾರ್, ಕೃಷ್ಣರನ್ನು ಸಿಬಿಐಗೆ ಒಪ್ಪಿಸಿ?]
ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಅರಣ್ಯ ಭೂಮಿಯಲ್ಲಿ ಗಣಿಗಾರಿಕೆ ಮಾಡಲು ಅನುಮತಿ ನೀಡಲಾಗಿದೆ ಎಂದು ದೂರಿ, ಬೆಂಗಳೂರಿನ ಟಿ.ಜೆ. ಅಬ್ರಹಾಂ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.