ಸತೀಶ್ ಜಾರಕಿಹೊಳಿ ವಿರುದ್ಧ 'ಸ್ವಾಭಿಮಾನಿ ಹಿಂದೂ ಅಭಿಯಾನ' ಆರಂಭಿಸಿದ ಸುನಿಲ್ ಕುಮಾರ್
ಬೆಂಗಳೂರು, ನವೆಂಬರ್ 8 : ಹಿಂದೂ ಶಬ್ದದ ಅರ್ಥ ಅಶ್ಲೀಲವಾಗಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆ ವಿರುದ್ಧ ಕೇಸರಿಪಡೆ ಕೆರಳಿ ನಿಂತಿದ್ದು, 'ಸ್ವಾಭಿಮಾನಿ ಹಿಂದೂ' ಎಂಬ ಘೋಷವಾಕ್ಯದೊಂದಿಗೆ ಇಂಧನ ಹಾಗೂ ಕನ್ನಡ- ಸಂಸ್ಕ್ರತಿ ಸಚಿವ ವಿ. ಸುನಿಲ್ ಕುಮಾರ್ ಅಭಿಯಾನ ಆರಂಭಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ನನ್ನನ್ನು ಹಿಂದೂ ಎಂದು ಕರೆಯಬೇಡಿ ಎಂದು ಹೇಳಿದ್ದ ಜವಾಹರ್ ಲಾಲ್ ನೆಹರು ಅವರ ಹಾದಿಯಲ್ಲೇ ಕಾಂಗ್ರೆಸ್ ಇಷ್ಟು ವರ್ಷ ನಡೆದುಕೊಂಡಿದೆ. ಹಿಂದೂ, ಹಿಂದುತ್ವ ಹಾಗೂ ಹಿಂದೂ ರಾಷ್ಟ್ರೀಯ ವಿಚಾರಧಾರೆಯನ್ನು ಅವಕಾಶ ಸಿಕ್ಕಾಗಲೆಲ್ಲ ಹತ್ತಿಕ್ಕಲು ಕಾಂಗ್ರೆಸ್ ಯತ್ನಿಸುತ್ತಲೆ ಬಂದಿದೆ. ಸತೀಶ್ ಜಾರಕಿಹೊಳಿ ಈ ಪರಂಪರೆಯ ಭಾಗ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
- ಸತೀಶ್ ಜಾರಕಿಹೊಳಿಗೆ ಹಿಂದೂ ಶಬ್ದ ಅಶ್ಲೀಲ.
- ಸಿದ್ದರಾಮಯ್ಯ ಅವರಿಗೆ ಕೇಸರಿ-ತಿಲಕ ಕಂಡರೆ ಭಯ.
- ದೈವಾರಾಧನೆ ಹಾಗೂ ತೀರ್ಥ ಬಿ.ಟಿ.ಲಲಿತಾನಾಯಕರಿಗೆ ವಾಕರಿಕೆ ತರಿಸುತ್ತದೆ.
- ಡಿ.ಕೆ.ಶಿವಕುಮಾರ್ಗೆ ಮುಸ್ಲಿಂರು ಸೋದರರು.
- ಎಂ.ಬಿ.ಪಾಟೀಲರಿಗೆ ಹಿಂದೂ ಧರ್ಮದ ಅಖಂಡತೆ ಒಡೆಯುವ ಯೋಚನೆ.
- ಕೇಂದ್ರದ ಮಾಜಿ ಸಚಿವ ಶಿವರಾಜ್ ಪಾಟೀಲ್ಗೆ ಭಗವದ್ಗೀತೆ ಜಿಹಾದ್ ಆಗಿ ಕಾಣುತ್ತದೆ.
ಇವೆಲ್ಲವೂ ಕಾಂಗ್ರೆಸ್ ಒಳಮನಸಿನಲ್ಲಿರುವ ಹಿಂದು ವಿರೋಧಿ ಭಾವಗಳು ಎಂದು ಟೀಕಿಸಿದ್ದಾರೆ.

ಭಾರತ್ ಜೋಡೊ ಯಾತ್ರೆ ಬಳಿಕ ಕಾಂಗ್ರೆಸ್ ನಾಯಕರ ಹಿಂದು ವಿರೋಧಿ ಹೇಳಿಕೆ ಮಿತಿಮೀರಿದೆ. ಭಾರತ್ ಜೋಡೊ ಯಾತ್ರೆ ಹೆಸರಿನಲ್ಲಿ ರಾಹುಲ್ ಗಾಂಧಿ ನಡೆಸಿದ ಪಾದಯಾತ್ರೆಯ ಬಳಿಕ ಕಾಂಗ್ರೆಸ್ ನಾಯಕರ ಹಿಂದು ವಿರೋಧಿ ಹೇಳಿಕೆಗಳು ಮಿತಿಮೀರಿದೆ.ಕಾಂಗ್ರೆಸ್ ನಡೆಸುವ ಎಲ್ಲ ಯಾತ್ರೆ, ಅಭಿಯಾನದ ಹಿಂದಿರುವುದು ಹಿಂದು ದ್ವೇಷ. ಕಾಂಗ್ರೆಸ್ ಅಧಿನಾಯಕರ ಭಾವನೆಗಳಿಗೆ ಸತೀಶ್ ಜಾರಕಿಹೊಳಿ ಮಾತಿನ ರೂಪ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಹಿಂದುತ್ವ ಎಂಬ ಜೀವನ ಪದ್ಧತಿಯನ್ನೇ ಟೀಕಿಸಿದ ಸತೀಶ್ ಜಾರಕಿಹೊಳಿ ಪರವಾಗಿ ಕಾಂಗ್ರೆಸ್ ಇಡಿ ರಾಷ್ಟ್ರದ ಕ್ಷಮೆ ಯಾಚಿಸಬೇಕು. ಇದು ವೈಯಕ್ತಿಕ ಅಭಿಪ್ರಾಯ ಎಂದು ಕೈ ತೊಳೆದುಕೊಳ್ಳುವ ನಾಟಕ ಬೇಡ ಮಾನ್ಯ ಸುರ್ಜೇವಾಲಾ ಅವರೇ. ಭಾರತೀಯತೆಗೆ ಅಪಮಾನ ಮಾಡುವ ನಿಮ್ಮ ನಾಟಕಕ್ಕೆ ಕ್ಷಮೆ ಇಲ್ಲ ಎಂದು ಸಚಿವ ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಜಾಲತಾಣದಲ್ಲಿ ಆರಂಭಿಸಿರುವ " ಸ್ವಾಭಿಮಾನಿ ಹಿಂದು ಅಭಿಯಾನದಲ್ಲಿ ನಾನು ಸ್ವಾಭಿಮಾನಿ ಹಿಂದು. ಹಿಂದುತ್ವದ ಅವಹೇಳನವಾದಾಗ ನಾನು ಪ್ರತಿರೋಧಿಸುತ್ತೇನೆ, ರಾಷ್ಟ್ರೀಯತೆಗೆ ಧಕ್ಕೆಯಾದಾಗ ನಾನು ಸೆಟೆದು ನಿಲ್ಲುತ್ತೇನೆ ಭಾರತೀಯ ಪರಂಪರೆಯ ನಿಂದನೆಯಾದಾಗ ನಾನು ಹೋರಾಡುತ್ತೇನೆ. ಸ್ವಧರ್ಮ, ಸ್ವದೇಶ, ಸ್ವಭಾಷೆ ನನ್ನ ಅಸ್ಮಿತೆ ಎಂದು ಟ್ವೀಟ್ ಮಾಡಿದ್ದಾರೆ.

ನಾನು ಸ್ವಾಭಿಮಾನಿ ಹಿಂದೂ, ನನ್ನೊಡಲೊಳಗೆ ದೇಶಭಕ್ತಿಯ ಕೆಚ್ಚಿದೆ. ನನ್ನ ಹೃದಯದಲ್ಲಿ ಹಿಂದೂ ರಾಷ್ಟ್ರ ಪ್ರೀತಿ ಇದೆ. ನನ್ನ ಮನಸಿನಲ್ಲಿ ಹಿಂದುತ್ವದ ಸಂಸ್ಕಾರವಿದೆ, ನನ್ನ ಉಸಿರಿನಲ್ಲಿ ರಾಷ್ಟ್ರ ವಿರೋಧಿಗಳ ವಿರುದ್ಧ ದ್ವೇಷವಿದೆ. ನನ್ನ ರಕ್ತದಲ್ಲಿ ಶಿವಾಜಿಯ ಸ್ವಾಭಿಮಾನವಿದೆ. ಹಿಂದುತ್ವಕ್ಕೆ ಅಪಮಾನವಾದಾಗ ನಾ ಮೌನಿಯಾಗಲಾರೆ ಎಂದು ಸುನಿಲ್ ಕುಮಾರ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಹಿಂದೂ ಪದ ಅಶ್ಲೀಲ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿ, ಹಿಂದೂ ಪದ ಅಂದರೆ ಕಾಂಗ್ರೆಸ್ ನಾಯಕರಿಗೆ ಅಶ್ಲೀಲ, ಹಾಗೂ ಅದೇ ರೀತಿಯಲ್ಲಿ ಕೇಸರಿ ಎಂದರೆ ಅವರಿಗೆ ಅಲರ್ಜಿ ಈ ನಿಲುವು, ಆ ಪಕ್ಷದ ಸಿದ್ದಾಂತದ ಒಂದು ಅವಿಭಾಜ್ಯ ಅಂಗವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಾಂಗ್ರೆಸ್ ನಾಯಕರ ಬಗ್ಗೆ ಕಿಡಿ ಕಾರಿದರು.
ಕಾಂಗ್ರೆಸ್ ನಾಯಕ ಸತೀಶ್ ಜಾರಕಹೊಳಿ ಯವರು ಹಿಂದೂ ಧರ್ಮದ ಬಗ್ಗೆ ಅವಹೇಳನ ಕಾರಿಯಾಗಿ ಹೇಳಿಕೆ ನನಗೆ ಆಶ್ಚರ್ಯ ತಂದಿಲ್ಲ, ಅವರು ತಮ್ಮ ಪಕ್ಷದ ನಿಜ ಧೋರಣೆಯನ್ನು ಹೇಳಿದ್ದಾರೆ ಎಂದರು.












Click it and Unblock the Notifications