Sunil Kanugolu: ಸಿಎಂ ಸಿದ್ದರಾಮಯ್ಯ ಅವರ ಸಲಹೆಗಾರರಾದ ಚುನಾವಣಾ ಚಾಣಾಕ್ಷ ಸುನೀಲ್ ಕನುಗೋಲು
ಬೆಂಗಳೂರು, ಜೂನ್. 01: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಭರ್ಜರಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎನ್ನಲಾದ ಕಾಂಗ್ರೆಸ್ ಚುನಾವಣಾ ತಂತ್ರಗಾರ ಸುನೀಲ್ ಕಾನುಗೋಲು ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖ್ಯ ಸಲಹೆಗಾರರಾಗಿ ಸಂಪುಟ ಸಚಿವರ ದರ್ಜೆಯೊಂದಿಗೆ ಬುಧವಾರ ನೇಮಿಸಲಾಗಿದೆ.
ಈ ಬಗ್ಗೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ. ಕಳೆದೊಂದು ವರ್ಷದಿಂದ ರಾಜ್ಯದಲ್ಲಿ ಸುನೀಲ್ ಕನುಗೋಲು ಕಾಂಗ್ರೆಸ್ ಜೊತೆಗೂಡಿ ಕೆಲಸ ಮಾಡುತ್ತಿದ್ದಾರೆ. ಸುನೀಲ್ ಕನುಗೋಲು ಅವರು ಬಳ್ಳಾರಿ ಜಿಲ್ಲೆಯಲ್ಲಿ ಜನಿಸಿದ್ದು, ಅಲ್ಲಿ ಅವರು ತಮ್ಮ ಮಧ್ಯಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಅಮೆರಿಕಾದಲ್ಲಿ ಉನ್ನತ ಶಿಕ್ಷಣ ಪೂರೈಸಿದ ಬಳಿಕ ಗುಜರಾತ್ ಚುನಾವಣೆಯಲ್ಲಿ ರಾಜಕೀಯ ತಂತ್ರಗಾರರಾಗಿ ಕರ್ತವ್ಯ ನಿರ್ವಹಿಸಿದ್ದವರು. ಸದ್ಯ ಅವರು ಚೆನ್ನೈ ಮತ್ತು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಸುನೀಲ್ ಕನುಗೋಲು ಮತ್ತು ರಾಜಕೀಯ
ಈ ಹಿಂದೆ ಬಿಜೆಪಿ, ಡಿಎಂಕೆ, ಎಐಎಡಿಎಂಕೆ ಪಕ್ಷಗಳಲ್ಲಿ ಸುನೀಲ್ ಕನುಗೋಲು ಕೆಲಸ ಮಾಡಿದ್ದಾರೆ. 2014 ರ ಲೋಕಸಭೆಯ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ತಂತ್ರಗಾರಿಕಾ ತಂಡದಲ್ಲಿ ಮಹತ್ವದ ಜವಾಬ್ದಾರಿ ಹೊತ್ತಿದ್ದ ಅವರು 2017 ರ ಜಲ್ಲಿಕಟ್ಟು ಪ್ರತಿಭಟನೆಯ ಸಮಯದಲ್ಲಿ ತಮಿಳು ಹೆಮ್ಮೆ ಮತ್ತು ದ್ರಾವಿಡ ಮಾದರಿಯ ಅಂಶಗಳ ಹಿಂದೆ ಕೆಲಸ ಮಾಡಿದ್ದಾರೆ. ಅವರು ತಮಿಳುನಾಡಿನಲ್ಲಿ ಬಿಜೆಪಿಯನ್ನು ಎದುರಿಸಲು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಹಾಯ ಮಾಡಿದ್ದಾರೆ.
ಕಾಂಗ್ರೆಸ್ ಮತ್ತು ಸುನೀಲ್ ಕನುಗೋಲು
ಕಳೆದ ವರ್ಷ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಪ್ರಸ್ತಾಪವನ್ನು ಪ್ರಶಾಂತ್ ಕಿಶೋರ್ ನಿರಾಕರಿಸಿದ ನಂತರ, ಭಾರತದಾದ್ಯಂತ ಹಲವಾರು ವಿಧಾನಸಭಾ ಚುನಾವಣೆಗಳಿಗೆ ಪಕ್ಷದ ಚುನಾವಣಾ ಕಾರ್ಯತಂತ್ರಕ್ಕೆ ಸಹಾಯ ಮಾಡಲು ಸುನೀಲ್ ಕನುಗೋಲು ಅವರನ್ನು ತರಲಾಯಿತು. ಕಳೆದ ವರ್ಷ ಮೇ ತಿಂಗಳಲ್ಲಿ, ಉದಯಪುರದಲ್ಲಿ ಅಂಗೀಕರಿಸಲಾದ ನವ ಸಂಕಲ್ಪ್ (ಹೊಸ ನಿರ್ಣಯ) ಘೋಷಣೆಯನ್ನು ಕಾರ್ಯಗತಗೊಳಿಸಲು ಕಾಂಗ್ರೆಸ್ ರಚಿಸಿದ ಟಾಸ್ಕ್ ಫೋರ್ಸ್ 2024 ರ ಸದಸ್ಯರಾಗಿ ಸುನೀಲ್ ಕನುಗೋಲು ಅವರನ್ನು ನೇಮಿಸಲಾಯಿತು.

ಸುನೀಲ್ ಕನುಗೋಲು ಹೊರತುಪಡಿಸಿ ಈ ತಂಡದಲ್ಲಿ ಪ್ರಮುಖ ಕಾಂಗ್ರೆಸ್ ನಾಯಕರಾದ ಪಿ ಚಿದಂಬರಂ, ಮುಕುಲ್ ವಾಸ್ನಿಕ್, ಜೈರಾಮ್ ರಮೇಶ್, ಕೆ ಸಿ ವೇಣುಗೋಪಾಲ್, ಅಜಯ್ ಮಾಕನ್, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಇದ್ದಾರೆ. ಭಾರತದ ದಕ್ಷಿಣ ತುದಿಯಿಂದ ಜಮ್ಮು ಮತ್ತು ಕಾಶ್ಮೀರದವರೆಗೆ ಸುಮಾರು 4,000 ಕಿ.ಮೀ ಉದ್ದದ ಪಾದಯಾತ್ರೆಯನ್ನು ನಡೆಸಿದ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯನ್ನು ಯೋಜಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ.












Click it and Unblock the Notifications