Breaking; ಕಂದಾಯ ಇಲಾಖೆಯ ಎಲ್ಲಾ ವರ್ಗಾವಣೆಗಳಿಗೆ ಸರ್ಕಾರದ ತಡೆ
ಬೆಂಗಳೂರು, ಡಿಸೆಂಬರ್ 07; ಕರ್ನಾಟಕ ಸರ್ಕಾರ ಕಂದಾಯ ಇಲಾಖೆಯ ಎಲ್ಲಾ ವರ್ಗಾವಣೆಗಳಿಗೆ ತಡೆ ನೀಡಿದೆ. ಕಳೆದ ವಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಆರೋಗ್ಯ ಇಲಾಖೆಯ ವರ್ಗಾವಣೆಗಳಿಗೆ ಸಹ ತಡೆ ನೀಡಿ ಆದೇಶ ಹೊರಡಿಸಲಾಗಿತ್ತು.
ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿಯವರ ಕಚೇರಿ ಈ ಕುರಿತು ಆದೇಶ ಹೊರಡಿಸಿದೆ. ಕಂದಾಯ ಇಲಾಖೆ ಕರ್ನಾಟಕ ಸರ್ಕಾರದ ಸಚಿವಾಲಯದ ಬಹುಮಹಡಿ ಕಟ್ಟಡ ಇವರ ಟಿಪ್ಪಣಿಯಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ.
ಭಾರತ ಚುನಾವಣಾ ಆಯೋಗ ಮತದಾರರ ಪಟ್ಟಿಯ ನೋಂದಣಿ, ಪರಿಷ್ಕರಣಾ ಕಾರ್ಯ/ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈ ಪ್ರಕ್ರಿಯೆಯು ಮುಕ್ತಾಯಗೊಳ್ಳುವವರೆಗೂ ಮತದಾರರ ನೋಂದಣಿ, ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವ ಅಧಿಕಾರಿ/ ಸಿಬ್ಬಂದಿಗಳ ವರ್ಗಾವಣೆ ಮಾಡದಂತೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.

ಅದರನ್ವಯ ತಹಶೀಲ್ದಾರ್, ಉಪ ತಹಶೀಲ್ದಾರ್, ಶಿರಸ್ತೇದಾರ್, ಕಂದಾಯ ನಿರೀಕ್ಷಕರು/ ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರುಗಳ ಯಾವುದೇ ವರ್ಗಾವಣೆ ಮತ್ತು ನಿಯೋಜನೆ/ ಓಓಡಿ ಪ್ರಸ್ತಾವನೆಗಳನ್ನು ಕಡತದಲ್ಲಿ ಜನವರಿ-2023ರ ಎರಡನೇ ವಾರದವರೆಗೆ ವಿಲೇ ಇಡುವುದು.
ಮತದಾರರ ನೋಂದಣಿ ಪರಿಷ್ಕರಣಾ ಪ್ರಕ್ರಿಯೆ ಮುಕ್ತಾಯವಾದ ನಂತರ ನಿಯಮಾನುಸಾರ ಪರಿಶೀಲಿಸಿ ಮಂಡಿಸುವಂತೆ ಕೋರಲು ಕಾರ್ಯದರ್ಶಿಯವರಿಂದ ನಿರ್ದೇಶಿತಳಾಗಿದ್ದೇನೆ ಎಂದು ಸರ್ಕಾರದ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿ ಕೆ. ಲತಾ ಕಂದಾಯ ಇಲಾಖೆ ಆದೇಶದಲ್ಲಿ ತಿಳಿಸಿದ್ದಾರೆ.
ಸಿಎಂ ತಡೆ ನೀಡಿದ್ದರು; ಕಳೆದ ವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡು ಇಲಾಖೆಗಳ ವರ್ಗಾವಣೆಗೆ ಮುಂದಿನ ಆದೇಶದ ತನಕ ತಡೆ ನೀಡಿದ್ದರು.
ಮುಖ್ಯಮಂತ್ರಿಗಳು ಆದೇಶದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದ ಯಾವುದೇ ವರ್ಗಾವಣೆ ಪ್ರಸ್ತಾವನೆಗಳನ್ನು ಮುಂದಿನ ಸೂಚನೆಯವರೆಗೆ ಮುಖ್ಯಮಂತ್ರಿಯವರ ಸಚಿವಾಲಯಕ್ಕೆ ಮಂಡಿಸದಂತೆ ಸೂಚಿಸಿದೆ ಎಂದು ತಿಳಿಸಿದ್ದರು.
ಮುಖ್ಯಮಂತ್ರಿಗಳು ಮತ್ತೊಂದು ಆದೇಶದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಯಾವುದೇ ವರ್ಗಾವಣೆ ಪ್ರಸ್ತಾವನೆಗಳನ್ನು ಮುಂದಿನ ಸೂಚನೆಯವರೆಗೆ ಮುಖ್ಯಮಂತ್ರಿಯವರ ಸಚಿವಾಲಯಕ್ಕೆ ಮಂಡಿಸದಂತೆ ಸೂಚಿಸಿದ್ದರು.












Click it and Unblock the Notifications