ಕರ್ನಾಟಕ: ವರದಿಯಿಂದ ಅಳಿವಿನಂಚಿನ 53 ಜಾತಿಗಳ ಸ್ಥಿತಿಗತಿ ಬಹಿರಂಗ
ಬೆಂಗಳೂರು, ಅಕ್ಟೋಬರ್ 26: ನ್ಯಾ.ನಾಗಮೋಹನ್ ದಾಸ್ ಅವರ ವರದಿ ಅನುಷ್ಠಾನಕ್ಕೆ ಅನುಮೋದನೆ ನೀಡುವ ಮೂಲಕ ಎಸ್ಸಿ, ಎಸ್ಟಿ ವರ್ಗದ ಮೀಸಲಾತಿ ಹೆಚ್ಚಿಸಲಾಗುತ್ತಿದೆ. ಇತ್ತ ಕರ್ನಾಟಕದಲ್ಲಿ 53 ಜಾತಿಗಳು ಅಳಿವಿನಂಚಿನಲ್ಲಿವೆ ಎಂದು ವರದಿಯೊಂದು ಬಹಿರಂಗಪಡಿಸಿದೆ.
ಉನ್ನತ ಮಟ್ಟದ ಸಮಿತಿಯೊಂದು ಈ ಮಾಹಿತಿ ಬಹಿರಂಗಪಡಿಸಿದ್ದು, ಅಳಿವಿನಂಚಿನಲ್ಲಿರುವ ಈ ಜಾತಿ ಸಮುದಾಯಗಳಿಗೆ ಸರ್ಕಾರಿ ಸವಲತ್ತುಗಳು ಸಿಗದೇ ದುಃಸ್ಥಿತಿ ತಲುಪಿವೆ. ಅತ್ಯಂತ ಕರುಣಾಜನಕ ಸ್ಥಿತಿಗಳಲ್ಲಿ ಆ ಜನರು ಬದುಕುತ್ತಿದ್ದಾರೆ. ಹೀಗೆಂದು ಹೈಕೋರ್ಟ್ ನಿವೃತ್ತ ನ್ಯಾ. ಸುಭಾಷ್ ಆಡಿ ನೇತೃತ್ವದ ಸಮಿತಿ ಅಕ್ಟೋಬರ್ 7 ರಂದು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸುವ ಬಗ್ಗೆ ನ್ಯಾ. ಎಚ್.ಎನ್.ನಾಗಮೋಹನ್ ದಾಸ್ ಆಯೋಗದ ಶಿಫಾರಸನ್ನು ಅನುಷ್ಠಾನಗೊಳಿಸುವ ವಿಧಾನಗಳನ್ನು ಪರಿಶೀಲಿಸುವ ಕೆಲಸವನ್ನು ಉನ್ನತ ಮಟ್ಟದ ಸಮಿತಿಗೆ ವಹಿಸಲಾಗಿತ್ತು.
ಎಲ್ಲ ರಂಗಗಳಲ್ಲೂ ಹಿಂದುಳಿದ ಈ 53 ಸಮುದಾಯಗಳು ಸಂಖ್ಯೆಯಲ್ಲಿ ಅತ್ಯಂತ ಚಿಕ್ಕದಾಗಿವೆ. ಈ ಜಾತಿಗಳ ಹೆಸರುಗಳು ಸಹ ಅಗೋಚರವಾಗೇ ಉಳಿದಿವೆ. ಈ ಜಾತಿಗಳ ಜನರು ಕೇವಲ ಸಾಂಪ್ರದಾಯಿಕ ವೃತ್ತಿಗಳನ್ನು ಮಾತ್ರ ಅವಲಂಬಿಸಿದ್ದಾರೆ. ಸಮಾಜದ ಮುಖ್ಯವಾಹಿನಿಗೆ ಬಾರದೆ, ಯಾವ ಸ್ಥಾನಮಾನ ಪಡೆಯದೆ ಉಳಿದಿವೆ, ಸಮಾಜದಲ್ಲಿ ಅದೃಶ್ಯದಂತೆ ಈ ಜಾತಿ ಜನರು ಬದುಕುತ್ತಿದ್ದಾರೆ ಎಂದು ವರದಿ ಹೇಳುತ್ತದೆ.
53 ಜಾತಿಗಳ ಜನಸಂಖ್ಯೆ ತೀರಾ ಕಡಿಮೆ
ವರದಿ ಪ್ರಕಾರ, 53 ಜಾತಿಗಳ ಪೈಕಿ 47 ಸಮುದಾಯಗಳ ಒಟ್ಟು ಜನಸಂಖ್ಯೆಯು ಒಂದು ಲಕ್ಷದಷ್ಟು ಇಲ್ಲ. ಮುಂದುವರಿದು ಹೇಳುವುದಾದರೆ ಡಕ್ಕಲಿಗರ ಜಾತಿ ಸಮುದಾಯದವರರ ಜನಸಂಖ್ಯೆ, ಸಾಂಪ್ರದಾಯಿಕ ಜಾನಪದ ಹಾಡು ಹಾಡಿ ಭಿಕ್ಷೆ ಬೇಡುವವರ ಸಂಕ್ಯೆ1,000 ಸಹ ದಾಟಲ್ಲ. ದಾಸರಿ ಸಮುದಾಯದವರು 500 ಕ್ಕಿಂತ ಕಡಿಮೆ ಇದ್ದರೆ, ಪಂಬದ ಜಾತಿಯ ಜನಸಂಖ್ಯೆ 614 ಇದ್ದು, ಬಂಡಿ ಸಮುದಾಯವು 608 ಮತ್ತು ಆದಿಯರು ಕೇವಲ 811 ರಷ್ಟಿದ್ದು ಇವರು ಕೃಷಿಯನ್ನೇ ಅವಲಂಬಿಸಿದ್ದಾರೆ.
ಇದೇ ರೀತಿ ಇನ್ನಿತರ ಜಾತಿ ಸಮುದಾಯದವರು ಜನ ಸಂಖ್ಯೆ 200 ಸಹ ದಾಟುವುದಿಲ್ಲ. ಶೇ.74 ರಷ್ಟು ಅಲೆಮಾರಿ ಹಾಗೂ ಅರೆ ಅಲೆಮಾರಿ ಬುಡಕಟ್ಟು ಸಮುದಾಯದ ಜನರು ಅಗೋಚರವಾಗಿ ಉಳಿದಿದ್ದಾರೆ. ಅವರ ಜನಸಂಖ್ಯೆ 10,000 ಕ್ಕಿಂತ ಕಡಿಮೆ ಇದೆ. ಇನ್ನೂ ಅವರ ಸಾಕ್ಷರತೆ ಮಟ್ಟ ಕೇವಲ ಶೇ 3 ರಷ್ಟಿದ್ದರೆ ಹೆಚ್ಚು. ಆಧುನಿಕ ಕಾಲದಲ್ಲೂ ಸಹ ರಾಜ್ಯದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ವಂಚಿತ ವರ್ಗದವರಿಗೆ ಈ ವರೆಗೆ ಮೀಸಲಾತಿಯ ಪ್ರಯೋಜನ ದೊರೆತಿಲ್ಲ. 101 ಎಸ್ಸಿ ಜಾತಿಗಳಲ್ಲಿ ಮೀಸಲಾತಿ ಎಂಬುದು ಕೆಲವೇ ಉಪ ಜಾತಿಗಳಿಗೆ ಮಾತ್ರ ಸೀಮಿತವಾಗಿದೆ.
ಇದಲ್ಲದೇ ನಗರ ಪ್ರದೇಶಗಳಲ್ಲಿ ಸ್ಲಂ/ಕೊಳೆಗೇರಿ ಪ್ರದೇಶಗಳಲ್ಲಿ ವಾಸಿಸುವ ನಿವಾಸಿಗಳು ಹಾಗೂ ಬುಡಕಟ್ಟು ಮಹಿಳೆಯರ ತೃಪ್ತಿದಾಯಕವಾದ ಜೀನವ ನಡೆಸುತ್ತಿಲ್ಲ. ದೇವದಾಸಿಗಳು, ಸಫಾಯಿ ಕರ್ಮಚಾರಿಗಳ ಸಮುದಾಯಗಳು ಶೈಕ್ಷಣಿಕ ಮಟ್ಟದಲ್ಲಿ ತೀರಾ ಹಿಂದುಳಿವೆ. ಸ್ವಾತಂತ್ರ್ಯ ಬಂದ ಇಷ್ಟು ವರ್ಷವಾದರೂ ಈ ಸಮುದಾಯಗಳಿಗೆ ಸರ್ಕಾರಿ ಉದ್ಯೋಗ, ಉನ್ನತ ಶಿಕ್ಷಣ, ಮೀಸಲಾತಿಯ ಪ್ರಯೋಜನ ಮರೀಚಿಕೆಯಾಗೇ ಉಳಿದಿವೆ ಎಂದು ವರದಿ ತಿಳಿಸಿದೆ.