ಮಂಗಳವಾರವೂ ಸ್ಥಗಿತಗೊಂಡ ಪವರ್ ಪ್ರಸಾರ: ಸಾಮಾಜಿಕ ಜಾಲತಾಣ ಪ್ರತಿರೋಧ!
ಬೆಂಗಳೂರು, ಸೆ. 29: ಕರ್ನಾಟಕ ಬಂದ್ ನಡೆದ ದಿನವೇ ಪೊಲೀಸರ ದಾಳಿಯಿಂದ ಸ್ಥಗಿತಗೊಂಡಿದ್ದ ಪ್ರಾದೇಶಿಕ ಸುದ್ದಿ ವಾಹಿನಿ-ಪವರ್ ಟಿವಿ ಮಂಗಳವಾರವೂ ಕಾರ್ಯಾರಂಭ ಮಾಡಲಿಲ್ಲ. ಸೋಮವಾರ ಸಂಜೆ ಸುದ್ದಿಯನ್ನು ಭಿತ್ತಿರಿಸುತ್ತಿದ್ದ ವಾಹಿನಿಯನ್ನು ಹಾಗೂ ಅದರ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಏಕಕಾಲಕ್ಕೆ ಸ್ಥಗಿತಗೊಳಿಸಲಾಗಿದೆ.
ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಪುತ್ರ ಬಿ. ವೈ. ವಿಜಯೇಂದ್ರ ಕುರಿತಾದ ಹಗರಣದ ಸುದ್ದಿಯನ್ನು ಪವರ್ ಟಿವಿ ಎರಡು ತಿಂಗಳ ಹಿಂದೆಯೇ ಪ್ರಸಾರ ಮಾಡುವ ಸುಳಿವು ನೀಡಿತ್ತು. ಆದರೆ ನಂತರ ನಡೆದ ಡ್ರಗ್ ಪತ್ತೆ ಪ್ರಕರಣ ಹಾಗೂ ಅದಕ್ಕೆ ಸ್ಯಾಂಡಲ್ವುಡ್ ತಳಕು ಹಾಕಿಕೊಂಡಿತು. ಅವೆಲ್ಲಾ ಮುಗಿದ ನಂತರ ಪವರ್ ಟಿವಿ ಮತ್ತೆ ಸಿಎಂ ಪುತ್ರ ವಿಜಯೇಂದ್ರ ಬಗೆಗಿನ ಸುದ್ದಿ ಪ್ರಸಾರ ಆರಂಭಿಸಿತ್ತು. ವಾಹಿನಿಯ ಮೇಲೆ ಹಾಗೂ ಅಲ್ಲಿ ಕೆಲಸ ಮಾಡುವ ಕೆಲವು ಪತ್ರಕರ್ತರ ಮೇಲೆ ಪ್ರಕರಣಗಳು ದಾಖಲಾಗಿದ್ದವು. ಮುಂದುವರಿದ ಭಾಗವಾಗಿ ಈಗ ವಾಹಿನಿ ಪ್ರಸಾರ ಸ್ಥಗಿತಗೊಂಡಿದೆ.
ಪ್ರಕರಣದಲ್ಲಿ ಮಂಗಳವಾರ ಒಂದಷ್ಟು ಬೆಳವಣಿಗೆಗಳು ಜರುಗಿದವು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಇಂದು ಮನವಿ ಸಲ್ಲಿಸಿತು. ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಪ್ರಸಾರಕ್ಕೆ ಕುತ್ತು ತಂದಿರುವುದು ಭಾರಿ ವಿರೋಧಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕನ್ನಡದ ಸುದ್ದಿ ವಾಹಿನಿ ಪವರ್ ಟಿವಿ ಪ್ರಸಾರಕ್ಕೆ ತಡೆ ಒಡ್ಡಿದ ವಿಷಯವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ಮನವಿ ಕೊಡುವ ಮೂಲಕ ಇವತ್ತು ತಂದಿದ್ದಾರೆ.
ತಕ್ಷಣವೆ ಸರ್ವರ್ ಸಿಸ್ಟಂನ್ನು ಹಿಂತಿರುಗಿಸುವಂತೆ ಪೊಲೀಸ್ ಅಧಿಕಾರಿ ಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೂಚಿಸಿದ್ದಾರೆ ಎನ್ನಲಾಗಿದೆ. ವಿಷಯ ಏನೇ ಇದ್ದರೂ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳೋಣ. ಚಾನಲ್ ಪ್ರಸಾರಕ್ಕೆ ಅಡ್ಡಿ ಬೇಡ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಬಂದಿದೆ.

ಪತ್ರಕರ್ತರ ಸಂಘದಿಂದ ಯಡಿಯೂರಪ್ಪ ಭೇಟಿ
ಖಾಸಗಿ ಸುದ್ದಿ ವಾಹಿನಿ ಪವರ್ ಟಿವಿ ಕಚೇರಿ ಮೇಲೆ ಸರ್ಚ್ ವಾರಂಟ್ ಪಡೆದುಕೊಂಡು ಸರ್ವರ್ನ್ನು ವಶಕ್ಕೆ ಪಡೆದಿರುವುದನ್ನು ತೀವ್ರವಾಗಿ ಖಂಡಿಸಿರುವ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ, ಪವರ್ ಟಿವಿ ವಾಹಿನಿ ನೇರ ಪ್ರಸಾರ ಬಂದ್ ಮಾಡಿರುವುದು ಸರಿಯಾದ ಕ್ರಮ ಅಲ್ಲ ಎಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವಿವರಿಸಿದ್ದಾರೆ.
ಪವರ್ ಟಿವಿ ಮಾಲೀಕರ ಮೇಲೆ ಆರೋಪ ಬೇರೆ ವಿಚಾರ. ಅವರ ಮೇಲೆ ತನಿಖೆ ನಡೆಸುವುದಕ್ಕೆ ಸಂಘದ ಅಭ್ಯಂತರವಿಲ್ಲ. ಆದರೆ, ಒಂದು ಟಿವಿ ವಾಹಿನಿ ನೇರ ಪ್ರಸಾರವನ್ನು ಸ್ಥಗಿತ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ. ನೂರಾರು ಪತ್ರಕರ್ತರ ಕುಟುಂಬಗಳು ಬೀದಿಗೆ ಬರುತ್ತವೆ. ಆದ್ದರಿಂದ ತಾವು ಈ ಕೂಡಲೇ ಗೃಹ ಸಚಿವರಿಗೆ ನಿರ್ದೇಶನ ನೀಡಿ, ಪವರ್ ಟಿವಿ ವಾಹಿನಿ ಲೈವ್ ಬಂದ್ ತೆರವು ಮಾಡಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಕಾ.ನಿ.ಪ. ಅಧ್ಯಕ್ಷ ಶಿವಾನಂದ ತಗಡೂರು ಅವರು ಮನವಿ ಪತ್ರ ಸಲ್ಲಿಸಿದ್ದಾರೆ.

ಎಂಡಿ ಮೇಲೆ ಆರೋಪ; ತನಿಖೆ ಪ್ರಗತಿ
ಮೆ. ರಾಮಲಿಂಗಮ್ ಕನ್ಸ್ಟ್ರಕ್ಷನ್ ಕಂಪನಿ ಪ್ರೈವೆಟ್ ಲಿಮಿಟೆಡ್ನ ಡೈರೆಕ್ಷರ್ ಚಂದ್ರಕಾಂತ್ ರಾಮಲಿಂಗಮ್ ಎಂಬುವರು ಕೊಟ್ಟಿರುವ ದೂರಿನ ಅನ್ವಯ ಎಸಿಎಂಎಂ ನ್ಯಾಯಾಲಯ ಸರ್ಚ್ ವಾರೆಂಟ್ ಕೊಟ್ಟಿದೆ. ಖಾಸಗಿ ವಾಹಿನಿಯ ಎಂಡಿ ರಾಕೇಶ್ ಶೆಟ್ಟಿ ಎಂಬುವರು ಹಣಕಾಸು ವ್ಯವಹಾರದಲ್ಲಿ ಮೋಸ ಮಾಡಿದ್ದಾರೆಂದು ಆರೋಪಿಸಿ ಚಂದ್ರಕಾಂತ್ ರಾಮಲಿಂಗಂ ಎಂಬುವರು ದೂರು ಕೊಟ್ಟಿದ್ದರು.
ಅದಾದ ಬಳಿಕ ಸಿಸಿಬಿನ ಪೊಲೀಸರು ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿ ಸಂಪರ್ಕಿಸಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಅವರು ಸಿಗದೇ ಇದ್ದಾಗ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಮತ್ತಿಕೆರೆ ರಸ್ತೆಯಲ್ಲಿರುವ ಪವರ್ ಟಿವಿ ಸುದ್ದಿ ವಾಹಿನಿಯ ಕಚೇರಿಯಲ್ಲಿ ತಪಾಸಣೆ ನಡೆಸಿದ್ದರು.

ಚಂದ್ರಕಾಂತ್ ರಾಮಲಿಂಗಂ ದೂರಿನಲ್ಲಿ ಏನಿದೆ?
ಬಿಡಿಎದಿಂದ ನಮ್ಮ ಕಂಪನಿಗೆ ಬರಬೇಕಾಗಿದ್ದ 140 ಕೋಟಿ ರೂ. ಹಣದ ಬಗ್ಗೆ ತಿಳಿದುಕೊಂಡು, ಆ ಹಣವನ್ನು ಬಿಡುಗಡೆ ಮಾಡಿಸುತ್ತೇನೆಂದು ಹೇಳಿ ನಂಬಿಸಿದ್ದಾರೆ. ಜೊತೆಗೆ ಬಿಡಿಎದಿಂದ ನಮ್ಮ ಕಂಪನಿಗೆ ಬಿಡುಗಡೆಯಾಗಿದ್ದ 7.79 ಕೋಟಿ ರೂಪಾಯಿಗಳನ್ನು ನಾನೇ ಬಿಡುಗಡೆ ಮಾಡಿಸಿದ್ದೇನೆಂದು ಕಮಿಷನ್ ಕೊಡುವಂತೆ ಬಲವಂತ ಮಾಡಿದ್ದಾರೆ. ನಮ್ಮ ಹಣ ಕೊಡದಿದ್ದರೆ ನಮ್ಮ ಕಂಪನಿಯ ಹೆಸರನ್ನು ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಹೀಗಾಗಿ ರಾಕೇಶ್ ಶೆಟ್ಟಿ ಅವರಿಗೆ ಕಳೆದ ಸೆ. 22 ರಂದು 25 ಲಕ್ಷ ರೂ. ಹಣವನ್ನು ಕೊಟ್ಟಿದ್ದೇವೆ. ನಂತರವೂ ನಮ್ಮ ಕಂಪನಿಯ ಹೆಸರನ್ನು ಟಿವಿಯಲ್ಲಿ ಬಿತ್ತರಿಸಿ ನಮ್ಮ ಕಂಪನಿಯು ಕೆಲವು ರಾಜಕೀಯ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ಬಲವಂತವಾಗಿ ನನ್ನಿಂದ ಹೇಳಿಸಿ, ಅದನ್ನು ರೆಕಾರ್ಡ್ ಮಾಡಿಕೊಂಡು ಅದನ್ನು ಪ್ರಸಾರ ಮಾಡಿ ತಮ್ಮ ಚಾನಲ್ನ ಟಿಆರ್ಪಿಯನ್ನು ಹೆಚ್ಚಿಸಿಕೊಂಡಿದ್ದಾರೆ.
ಹೀಗಾಗಿ ನನ್ನಿಂದ ಬಲವಂತವಾಗಿ ಹಣವನ್ನು ಕಿತ್ತುಕೊಂಡು ಮೋಸ ಮಾಡಿರುವ ರಾಕೇಶ್ ಶೆಟ್ಟಿ ಹಾಗೂ ಇತರರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಮೆ. ರಾಮಲಿಂಗಂ ಕನ್ಸ್ಟ್ರಕ್ಟನ್ ಕಂಪನಿಯ ನಿರ್ದೇಶಕ ಚಂದ್ರಕಾಂತ್ ರಾಮಲಿಂಗಂ ಅವರು ದೂರು ಸಲ್ಲಿಸಿದ್ದರು.

ಲಂಚದ ಆರೋಪ ಮಾಡಿದ್ದ ಕಾಂಗ್ರೆಸ್
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರ ಮೇಲೆ ಲಂಚದ ಆರೋಪ ಮಾಡಿದ್ದರು.
ಸಿಎಂ ಪುತ್ರ ವಿಜಯೇಂದ್ರ ಅವರು ರಾಮಲಿಂಗಂ ಕಂಪನಿ ಟೆಂಡರ್ ರದ್ದು ಮಾಡುವ ಬೆದರಿಕೆ ಹಾಕುವ ಮೂಲಕ ಅವರಿಂದ ಒತ್ತಡ ಹಾಕಿ ಹಣವನ್ನು ಪಡೆದಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಅಡಿಯೊ ಕ್ಲಿಪಿಂಗ್, ವಾಟ್ಸಪ್ ದಾಖಲೆ ಬ್ಯಾಂಕ್ ಅಕೌಂಟ್ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು.
7.40 ಕೋಟಿ ಹಣ ಆರ್ಟಿಜಿಎಸ್ ಮೂಲಕ ಯಡಿಯೂರಪ್ಪ ಕುಟುಂಬಸ್ಥರಿಗೆ ಸಂದಾಯವಾಗಿದೆ. ಶಶಿಧರ್ ಮರಡಿ ಖಾತೆಗೆ ಆ ಕಾಂಟ್ರಾಕ್ಟರ್ ಹಣ ಹಾಕಿದ್ದಾರೆ. ಶೇಷಾದ್ರಿಪುರಂನ ಎಚ್ಡಿಎಫ್ಸಿ ಬ್ಯಾಂಕ್ ಖಾತೆಗೆ ಹಣ ಸಂದಾಯವಾಗಿದೆ. ನಂತರ ಹುಬ್ಬಳ್ಳಿಯ ಸಿಎಂ ಯಡಿಯೂರಪ್ಪ ಅವರ ಅಳಿಯನಿಗೂ ಹಣ ಸಂದಾಯವಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದ್ದರು. ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದು ಹಾಗೂ ಪವರ್ ಟಿವಿಯಲ್ಲಿ ಪ್ರಸಾರವಾಗಿದ್ದು ಬಿಡಿಎಗೆ ಸಂಬಂಧಿಸಿದ್ದ ಟೆಂಡರ್ ಪ್ರಕರಣ ಎಂಬುದು ಗಮನಿಸಬೇಕಾದ ಅಂಶ.

ರಾಕೇಶ್ ಶೆಟ್ಟಿ ಮೇಲೆ ತನಿಖೆಗೆ ಅಭ್ಯಂತರವಿಲ್ಲ
ಸಿಸಿಬಿ ಪೊಲೀಸರು ಪವರ್ ಟಿವಿ ನೇರ ಪ್ರಸಾರ ಸ್ಥಗಿತಗೊಳಿಸಿದ ಬಳಿಕ ಫೇಸ್ಬುಕ್ ಲೈವ್ನಲ್ಲಿ ಮಾತನಾಡಿದ್ದ ಪ್ರಧಾನ ಸಂಪಾದಕ ರಹಮಾನ್ ಹಸೀಬ್ ಅವರು, ಕಂಪನಿಯ ಎಂಡಿ ರಾಕೇಶ್ ಶೆಟ್ಟಿ ಅವರ ತಪ್ಪಿದ್ದರೆ ಯಾವುದೇ ಕ್ರಮಕೈಗೊಳ್ಳಿ. ಆದರೆ ಚಾನಲ್ ನೇರ ಪ್ರಸಾರವನ್ನು ನಿಲ್ಲಿಸಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದರು.
ಇದೀಗ ಇದೇ ಪ್ರಶ್ನೆಯನ್ನು ಕಾರ್ಯನಿರತ ಪತ್ರಕರ್ತರ ಸಂಘ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮುಂದಿಟ್ಟಿದೆ. ಕಂಪನಿಯ ಮಾಲೀಕನ ಮೇಲೆ ನಡೆಯುವ ತನಿಖೆಯ ಬಗ್ಗೆ ತಕರಾರು ಇಲ್ಲ. ಆದರೆ ಒಂದು ಚಾನಲ್ ಪ್ರಸಾರವನ್ನೇ ರಾಜ್ಯ ಸರ್ಕಾರ ನಿಲ್ಲಿಸಿರುವುದು ಸರಿಯಲ್ಲ ಎಂದು ಸೂಚ್ಯವಾಗಿ ಕಾನಿಪ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದೆ.
Recommended Video

ನೇರ ಪ್ರಸಾರ ಸ್ಥಗಿತಕ್ಕೆ ಆಕ್ರೋಶ!
ವರದಿ ಪ್ರಸಾರವೊಂದಕ್ಕೆ ಸಂಬಂಧಿಸಿದಂತೆ ಮಾಧ್ಯಮವೊಂದನ್ನು ಸ್ಥಗಿತಗೊಳಿಸಿದ್ದು ರಾಜ್ಯದಲ್ಲಿ ಇದೇ ಮೊದಲ ಬಾರಿ ಎನ್ನಲಾಗಿದೆ. ಹೀಗಾಗಿ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿಯೂ ಭಾರಿ ಚರ್ಚೆಗೆ ಮುನ್ನುಡಿಯಾಗಿದೆ. ಕಾನೂನು ಹೋರಾಟದ ಹೊರತಾಗಿ ಮಾಧ್ಯಮವೊಂದರ ನೇರ ಪ್ರಸಾರವನ್ನು ಸ್ಥಗಿತಗೊಳಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕ ವಲಯದಲ್ಲಿಯೂ ಆಕ್ರೋಶ ವ್ಯಕ್ತವಾಗುತ್ತಿದೆ.
ಈಗಾಗಲೇ ಪವರ್ ಟಿವಿಯ ನೇರ ಪ್ರಸಾರ ಸ್ಥಗಿತವಾಗಿ 24 ಗಂಟೆಗಳು ಕಳದಿವೆ ಎಂದು ಪವರ್ ಟಿವಿಯ ಸಿಬ್ಬಂದಿ ಆರೋಪಿಸಿದ್ದಾರೆ. ಸರ್ಕಾರದ ಈ ನಡೆಯಿಂದಾಗಿ ನಾವೆಲ್ಲರೂ (ಸುಮಾರು 250 ಸಿಬ್ಬಂದಿ) ಬೀದಿಗೆ ಬಿದ್ದಿದ್ದೇವೆ ಎಂದು ಪ್ರಧಾನ ಸಂಪಾದಕ ರಹಮಾನ್ ಹಾಸನ್ ಆರೋಪಿಸಿದ್ದರು. ಈಗ ಬಹುತೇಕ ಎಲ್ಲ ಸಿಬ್ಬಂದಿಯ ಸ್ಥಿತಿಯೂ ಇದೇ ಆಗಿದೆ ಎನ್ನುತ್ತಾರೆ ಪವರ್ ಟಿವಿಯ ಹಿರಿಯ ವರದಿಗಾರರೊಬ್ಬರು.
ಸರ್ಕಾರಕ್ಕೆ ಸಂಸ್ಥೆಯ ಮಾಲೀಕರೊಂದಿಗೆ ಸಮಸ್ಯೆಗಳಿದ್ದಲ್ಲಿ ಅದನ್ನು ಕಾನೂನು ಕ್ರಮದ ಮೂಲಕ ಪರಿಹರಿಸಿಕೊಳ್ಳಬೇಕಿತ್ತು. ಆದರೆ ಅದನ್ನು ಬಿಟ್ಟು ನೂರಾರು ಪತ್ರಕರ್ತರು ಬೀದಿಗೆ ಬೀಳುವಂತೆ ಮಾಡಿರುವುದು ಸರಿಯಲ್ಲ ಎಂದು ರಾಜ್ಯದ ಹಿರಿಯ ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಈಗಲಾದರೂ ಪವರ್ ಟಿವಿಯ ನೇರಪ್ರಸಾರಕ್ಕೆ ಅವಕಾಶ ಮಾಡಿಕೊಡಬೇಕು ಎಂಬುದು ನಾಡಿನ ಪ್ರಜ್ಞಾವಂತ ಜನರ ಒತ್ತಾಯವಾಗಿದೆ!
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications