ದೆಹಲಿಯಲ್ಲಿ ಸಿಎಂ ಸಿದ್ದುಗೆ ಹೆದರುತ್ತಿರುವ ರಾಜ್ಯ ಹಿರಿಯ ಕಾಂಗ್ರೆಸ್ ಮುಖಂಡರಾರು?
ದೆಹಲಿಯಲ್ಲಿರುವ ರಾಜ್ಯದ ಹಿರಿಯ ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹೆದರುತ್ತಿದ್ದಾರೆ ಎನ್ನುವ ಹೇಳಿಕೆಯನ್ನು ಮಾಜಿ ಸಂಸದ ಮತ್ತು ಕಾಂಗ್ರೆಸ್ಸಿನ ಹಿರಿಯ ಮುಖಂಡ ಎಚ್ ವಿಶ್ವನಾಥ್ ನೀಡಿದ್ದಾರೆ.
ಮೂಲ ಕಾಂಗ್ರೆಸ್ಸಿಗರಲ್ಲದ ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿಯಾದ ನಂತರ, ಅಂದಿನಿಂದ ಇಂದಿನವರೆಗೆ ಅವರು ನಡೆದದ್ದೇ ದಾರಿ. ಸ್ವಪಕ್ಷೀಯರ ಯಾವ ಒತ್ತಡಕ್ಕೂ ಮಣಿಯದ ಅವರ ನಿರ್ಧಾರಕ್ಕೆ ಹೈಕಮಾಂಡ್ ತಲೆಯಾಡಿಸಿದ್ದೇ ಹೆಚ್ಚು.
ಕಾಂಗ್ರೆಸ್ಸಿನ ಇದುವರೆಗಿನ ಇತಿಹಾಸವನ್ನು ಒಮ್ಮೆ ಅವಲೋಕಿಸುವುದಾದರೆ, ತಪ್ಪೋ.. ಸರಿಯೋ ಹೈಕಮಾಂಡ್ ದೆಹಲಿಯಲ್ಲಿ ಏನು ನಿರ್ಧಾರ ತೆಗೆದುಕೊಳ್ಳುತ್ತೋ ಅದೇ ಅಂತಿಮವಾಗುತಿತ್ತು. ಆದರೆ ಸಿದ್ದರಾಮಯ್ಯ ಸಿಎಂ ಆದ ಮೇಲೆ ಕರ್ನಾಟಕದ ಮಟ್ಟಿಗೆ ಆ ಪರಂಪರೆ ಸಡಿಲಾಗುತ್ತಾ ಬರುತ್ತಿದೆ. (ಎಚ್.ವಿಶ್ವನಾಥ್ ಜೆಡಿಎಸ್ ಸೇರ್ಪಡೆ?)
ಮೈಸೂರಿನಲ್ಲಿ ಶನಿವಾರ (ಮಾ 25) ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುತ್ತಾ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಕ್ಷೇತ್ರದ ಮಾಜಿ ಸಂಸದ ಎಚ್ ವಿಶ್ವನಾಥ್, ದೆಹಲಿಯಲ್ಲಿರುವ ರಾಜ್ಯದ ಹಿರಿಯ ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯಗೆ ಹೆದರುತ್ತಿದ್ದಾರೆ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.
ಸರಕಾರವನ್ನು ಹೇಗೆ ಬೇಕಾದರೂ ಹಾಳು ಮಾಡಿ, ಆದರೆ ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷವನ್ನು ಮಾತ್ರ ಹಾಳು ಮಾಡಬೇಡಿ ಎಂದು ವಿಶ್ವನಾಥ್, ಪರೋಕ್ಷವಾಗಿ ಸಿದ್ದರಾಮಯ್ಯ ಹೆಸರು ಹೇಳದೇ ಬೇಸರ ವ್ಯಕ್ತ ಪಡಿಸಿದ್ದಾರೆ. ವಿಶ್ವನಾಥ್ ಅವರ ಹೇಳಿಕೆ, ರಾಜಕೀಯವಾಗಿ ಹಲವು ಆಯಾಮಗಳನ್ನು ಪಡೆದುಕೊಂಡಿದೆ.
ಸಮರ್ಥವಾಗಿದ್ದರೂ, ದೆಹಲಿಯಲ್ಲಿ ಅಸಮರ್ಥರಂತಿರುವ ರಾಜ್ಯದ ಹಿರಿಯ ಕಾಂಗ್ರೆಸ್ ಮುಖಂಡರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹೆದರುತ್ತಿದ್ದಾರೆಂದು, ವಿಶ್ವನಾಥ್ ನೇರವಾಗಿ ಆರೋಪಿಸಿದ್ದಾರೆ.
ದೆಹಲಿಯಲ್ಲಿನ ಆ ಹಿರಿಯ ನಾಯಕರುಗಳಾರು ಎಂದು ವಿಶ್ವನಾಥ್ ಸ್ಪಷ್ಟ ಪಡಿಸದಿದ್ದರೂ, ಅವರು ಯಾರಿರಬಹುದು ಎಂದು ಅರ್ಥಮಾಡಿಕೊಳ್ಳಲು ಹೆಚ್ಚು ರಾಜಕೀಯದ ಲೆಕ್ಕಾಚಾರದ ಅವಶ್ಯಕತೆಯಿಲ್ಲ. ಮುಂದೆ ಓದಿ..

ಸಿಎಂಗೆ ಹೆದರುವ ಕಾಂಗ್ರೆಸ್ ಮುಖಂಡರು
ಮೈಸೂರು, ಸಿಎಂ ಅವರ ತವರು ಕ್ಷೇತ್ರ ಮತ್ತು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಏನೇ ಪಕ್ಷಕ್ಕೆ ಸಂಬಂಧಪಟ್ಟ ವಿದ್ಯಮಾನಗಳು ನಡೆದರೂ, ಅದು ಸಿಎಂ ಗಮನಕ್ಕೆ ಬರುತ್ತದೆ. ಹೈಕಮಾಂಡ್ ಸಿಎಂ ಕ್ಷೇತ್ರ ಎಂದು ತಲೆಹಾಕುವುದಿಲ್ಲ. ಪಕ್ಷದ ದುರ್ದೈವವೋ ಏನೋ, ದೆಹಲಿಯಲ್ಲಿರುವ ರಾಜ್ಯದ ಹಿರಿಯ ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿಗಳಿಗೆ ಹೆದರುವಂತೆ ಕಾಣುತ್ತಿದೆ - ಎಚ್ ವಿಶ್ವನಾಥ್.

ವಿಶ್ವನಾಥ್ ಉಲ್ಲೇಖಿಸಿರುವವರಲ್ಲಿ ಖರ್ಗೆ ಇರಬಹುದೇ?
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರಸಕ್ತ ಕಲಬರುಗಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವವರು. ಇವರ ಮತ್ತು ಸಿದ್ದರಾಮಯ್ಯ ನಡುವಿನ ಸಂಬಂಧ ಅಷ್ಟಕಷ್ಟೇ.. ಕೆಲವು ಬಾರಿ ತಮ್ಮ ನೋವನ್ನು ಖರ್ಗೆ ಹೊರಹಾಕಿದ್ದುಂಟು. ವಿಶ್ವನಾಥ್ ಹೇಳುತ್ತಿರುವ ದೆಹಲಿಯಲ್ಲಿನ ರಾಜ್ಯದ ಕಾಂಗ್ರೆಸ್ಸಿಗರು ಎನ್ನುವ ಪಟ್ಟಿಯಲ್ಲಿ ಮೊದಲ ಹೆಸರು ಮಲ್ಲಿಕಾರ್ಜುನ ಖರ್ಗೆಯವರದ್ದಾಗಿರಬಹುದು.

ದೆಹಲಿಯಲ್ಲಿನ ರಾಜ್ಯದ ಹಿರಿಯ ಮುಖಂಡ ವೀರಪ್ಪ ಮೊಯ್ಲಿ
ಹಾಲೀ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ವೀರಪ್ಪ ಮೊಯ್ಲಿ ಮತ್ತು ಹೈಕಮಾಂಡ್ ನಡುವೆ ಉತ್ತಮ ಸಂಬಂಧವಿದೆ. ಸಿದ್ದು ಮತ್ತು ಮೊಯ್ಲಿ ನಡುವೆ ಮೇಲ್ನೋಟಕ್ಕೆ ಅಂಥಾ ತೊಂದರೆ ಏನೂ ಇಲ್ಲ. ವಿಶ್ವನಾಥ್ ಉಲ್ಲೇಖಿಸಿರುವ ಕಾಂಗ್ರೆಸ್ಸಿಗರ ಪಟ್ಟಿಯಲ್ಲಿ ವೀರಪ್ಪ ಮೊಯ್ಲಿಯವರೂ ಇರಬಹುದು.

ಹೈಕಮಾಂಡ್ ವಲಯದಲ್ಲಿ ಪ್ರಭಾವಿ ಬಿ ಕೆ ಹರಿಪ್ರಸಾದ್
ಹೈಕಮಾಂಡ್ ವಲಯದಲ್ಲಿ ಪ್ರಭಾವಿ ಮುಖಂಡರ ಪೈಕಿ ಬಿ ಕೆ ಹರಿಪ್ರಸಾದ್ ಕೂಡಾ ಒಬ್ಬರು. ವಿಶ್ವನಾಥ್ ಹೇಳುತ್ತಿರುವ ಸಿದ್ದರಾಮಯ್ಯನವರಿಗೆ ಹೆದರುವವರ ಪಟ್ಟಿಯಲ್ಲಿ ಹರಿಪ್ರಸಾದ್ ಹೆಸರು ಕೂಡಾ ಇರಬಹುದೇ?

ಆಸ್ಕರ್ ಫೆರ್ನಾಂಡಿಸ್ ಹೆಸರು ಇರಬಹುದೇ?
ದಶಕಗಳಿಂದಲೂ ಗಾಂಧಿ ಕುಟುಂಬಕ್ಕೆ ಆಪ್ತರಾಗಿರುವ ಆಸ್ಕರ್ ಫೆರ್ನಾಂಡಿಸ್ ಅವರನ್ನೂ ಸೇರಿಸಿ ವಿಶ್ವನಾಥ್ ಮೇಲಿನ ಹೇಳಿಕೆ ನೀಡಿರಬಹುದೇ? ಆದರೆ ಆಸ್ಕರ್ ರಾಜ್ಯದ ರಾಜಕೀಯದಲ್ಲಿ ಹೆಚ್ಚು ತಲೆಹಾಕಿದ ಉದಾಹರಣೆಗಳು ಕಮ್ಮಿ.

ಕೆ ಎಚ್ ಮುನಿಯಪ್ಪ ಹೆಸರು ಇದ್ದರೂ ಇರಬಹುದು
ಕೋಲಾರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕೆ ಎಚ್ ಮುನಿಯಪ್ಪನವರ ಹೆಸರನ್ನು ತಲೆಯಲ್ಲಿ ಇಟ್ಟುಕೊಂಡು ಎಚ್ ವಿಶ್ವನಾಥ್ ಹೇಳಿಕೆ ನೀಡಿದ್ದರೂ ಆಶ್ಚರ್ಯ ಪಡಬೇಕಾಗಿಲ್ಲ.












Click it and Unblock the Notifications