ಗೃಹಲಕ್ಷ್ಮಿ ವಿಚಾರದಲ್ಲಿ ದ್ವಂದ್ವ ನಿಲುವು, ಬ್ಯಾಂಕ್ ಖಾತೆಗೆ ಬರುತ್ತಿಲ್ಲ ಹಣ: ವಿಜಯೇಂದ್ರ
ಬೆಂಗಳೂರು: ಗ್ಯಾರಂಟಿ ಬಗ್ಗೆ ಸಿಎಂ, ಡಿಸಿಎಂ ಭಾರೀ ಪ್ರಚಾರ ನೀಡಿದರು. ರಾಜ್ಯ ಸರಕಾರ ಗೃಹಲಕ್ಷ್ಮಿ ವಿಚಾರದಲ್ಲಿ ದ್ವಂದ್ವ ನಿಲುವು ಅನುಸರಿಸುತ್ತಿದೆ. ಒಂದೆಡೆ 2 ಸಾವಿರ ಕೊಡುವುದಾಗಿ ಹೇಳಿ ಮತ್ತೊಂದೆಡೆ ಹೆಂಡದ, ಅಬಕಾರಿ ಟಾರ್ಗೆಟ್ ಅನ್ನು ವರ್ಷ ವರ್ಷ ಜಾಸ್ತಿ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಹೇಳಿದರು.
ಇಂದು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 2.5 ವರ್ಷದಲ್ಲಿ ಅನುಭವಿ ಸಿಎಂ ಸಿದ್ದರಾಮಯ್ಯನವರು ರಾಜ್ಯದ ಖಜಾನೆಗೆ ಹಣ ತುಂಬಿಸಲು ತಮ್ಮ ಗ್ಯಾರಂಟಿಗಳಿಗೆ ಹಣ ಕ್ರೋಡೀಕರಿಸಲು ಸಾಧ್ಯವಾಗದೇ ಅಬಕಾರಿ ಗುರಿಯನ್ನು ಶೇ 35ರಷ್ಟು ಹೆಚ್ಚಿಸಿದ್ದಾರೆ. ಇನ್ನೊಂದು ಕಡೆ ಅಬಕಾರಿಯ 500- 600 ಲೈಸನ್ಸ್ ಅನ್ನು ಸರಕಾರ ಹರಾಜು ಮಾಡಲು ಹೊರಟಿದೆ. ರಾಜ್ಯವನ್ನು ಏನು ಮಾಡಲು ಹೊರಟಿದ್ದೀರಿ? ಎಂದು ಕೇಳಿದರು.

ಒಂದೆಡೆ ಗೃಹಲಕ್ಷ್ಮಿ ಎನ್ನುತ್ತಾರೆ. ಮತ್ತೊಂದು ಕಡೆ ಹೆಂಡ, ಮದ್ಯ ಮಾರಾಟ ಹೆಚ್ಚಿಸಲು ವ್ಯಾಪಾರಿಗಳ ಮೇಲೆ ಒತ್ತಡ ಹಾಕುತ್ತಾರೆ. ಕುಡುಕರ ಕಾಟದಿಂದ ಬಡ ಹೆಣ್ಮಕ್ಕಳಿಗೆ ಅನ್ಯಾಯ ಆಗಲಿದೆ. ಇದರ ಕುರಿತು ಮುಖ್ಯಮಂತ್ರಿಗಳು ಯೋಚಿಸಿದ್ದಾರಾ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಒಂದು ಕೈಯಿಂದ 2 ಸಾವಿರ ಕೊಟ್ಟು ಮತ್ತೊಂದು ಕೈಯಿಂದ 20 ಸಾವಿರ ಕಿತ್ತುಕೊಳ್ಳುವ ನೀತಿ ಇವರದು ಎಂದು ಟೀಕಿಸಿದರು. ಇದರ ಕುರಿತು ಮುಖ್ಯಮಂತ್ರಿಗಳು ಸ್ಪಷ್ಟತೆ ನೀಡಲಿ ಎಂದು ಆಗ್ರಹಿಸಿದರು.
ಬೆಳಗಾವಿಯಲ್ಲಿ ಈಚೆಗೆ ನಡೆದ ಚಳಿಗಾಲದ ಅಧಿವೇಶನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಬೇಕು; ಉತ್ತರಿಸಬೇಕೆಂಬ ವ್ಯವಧಾನ ಸಚಿವರಲ್ಲಿ ಇರಲಿಲ್ಲ ಎಂದು ವಿವರಿಸಿದರು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹ ಲಕ್ಷ್ಮಿ ಯೋಜನೆಯಡಿ ಹಣ ಬಿಡುಗಡೆ ವಿಚಾರದಲ್ಲಿ ಸದನಕ್ಕೆ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಸಚಿವೆ ಬಳಿಕ ಕ್ಷಮೆ ಯಾಚಿಸುವ ಪರಿಸ್ಥಿತಿ ಬಂತು ಎಂದು ವಿವರಿಸಿದರು. ಮತ್ತೊಂದೆಡೆ ಕೃಷ್ಣಬೈರೇಗೌಡರ ಭೂಹಗರಣದ ಕುರಿತು ಚರ್ಚೆ ಆಗಿದೆ ಎಂದರು.
ಈ ಸರಕಾರವು ಎನ್ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ರದ್ದು ಮಾಡಿದೆ. ರಾಜ್ಯ ಶಿಕ್ಷಣ ನೀತಿ ತರಲು ಆಯೋಗ ರಚಿಸಿದ್ದಾರೆ. ಮಹಾರಾಷ್ಟ್ರದ ಪ್ರೊ.ಸುಖದೇವ್ ಥೋರತ್ ಅವರನ್ನು ಚೇರ್ಮನ್ ಮಾಡಿದ್ದಾರೆ. ಮುಖ್ಯಮಂತ್ರಿಗಳೇ ಕರ್ನಾಟಕದಲ್ಲಿ ನಿಮಗೆ ತಜ್ಞರು ಸಿಗಲಿಲ್ಲವೇ? ಎಂದು ಪ್ರಶ್ನಿಸಿದರು. ಪ್ರೊ.ಸುಖದೇವ್ ಥೋರತ್ ಅವರನ್ನು ನಾನು ಟೀಕಿಸುತ್ತಿಲ್ಲ; ಅವರ ಬಗ್ಗೆ ಗೌರವವಿದೆ. ನಮ್ಮ ರಾಜ್ಯದ ತಜ್ಞರು ನಿಮಗ್ಯಾರೂ ಸಿಗಲಿಲ್ಲವೇ ಎಂದು ಪ್ರಶ್ನಿಸಿದರು. ಎರಡೂವರೆ ವರ್ಷ ಆದರೂ ಸ್ಪಷ್ಟ ಶಿಕ್ಷಣ ನೀತಿ ಇಲ್ಲದೇ ರಾಜ್ಯದ ವಿದ್ಯಾರ್ಥಿವೃಂದಕ್ಕೆ ಕಾಂಗ್ರೆಸ್ ಸರಕಾರ ಅನ್ಯಾಯ ಮಾಡುತ್ತಿದೆ ಎಂದು ಆಕ್ಷೇಪಿಸಿದರು.
ಫಾಕ್ಸ್ ಕಾನ್ ಕುರಿತು ಚರ್ಚೆ ಆಗುತ್ತಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಏಥರ್ ಇಲೆಕ್ಟ್ರಾನಿಕ್ ಸ್ಕೂಟರ್ನಿಂದ ಹಿಡಿದು ಹಲವು ಸಂಸ್ಥೆಗಳು ಬೇರೆ ರಾಜ್ಯಕ್ಕೆ ಹೋಗಿವೆ. ಟೊಯೊಟಾ ಬೇರೆ ರಾಜ್ಯಕ್ಕೆ ಹೋಗಿದೆ. ಫಾಕ್ಸ್ ಕಾನ್ ಎರಡನೇ ಯೂನಿಟ್ ಬೇರೆ ರಾಜ್ಯಕ್ಕೆ ಹೋದುದು ಚರ್ಚೆ ನಡೆದಿದೆ. ಅನೇಕ ಉದ್ಯಮಿಗಳು ರಾಜ್ಯದಲ್ಲಿ ಕಾಂಗ್ರೆಸ್ಸಿನ ಹೂಡಿಕೆ ವಿರೋಧಿ ನೀತಿಯನ್ನು ಧಿಕ್ಕರಿಸಿ ಬೇರೆ ರಾಜ್ಯಕ್ಕೆ ಹೋಗುತ್ತಿದ್ದಾರೆ. ಫಾಕ್ಸ್ ಕಾನ್ ಕುರಿತು ಬೊಮ್ಮಾಯಿಯವರು ಸಿಎಂ ಇದ್ದಾಗ ಒಡಂಬಡಿಕೆಗೆ ಸಹಿ ಆಗಿದೆ ಎಂದು ಗಮನ ಸೆಳೆದರು. ಪ್ರಿಯಾಂಕ್ ಖರ್ಗೆ, ಕೈಗಾರಿಕಾ ಸಚಿವರು ಇದಕ್ಕೇನು ಹೇಳುತ್ತಾರೆ ಎಂದರು. ರಾಜ್ಯದ ಡಿಸಿಎಂ ಉದ್ಯಮಿಗಳಿಗೆ ಧಮ್ಕಿ ಹಾಕುತ್ತಾರೆ ಎಂದು ಟೀಕಿಸಿದರು.
ಅಪಾರ್ಟ್ಮೆಂಟ್ ಅಸೋಸಿಯೇಶನ್ನವರು ಮನವಿ ನೀಡಿದ್ದಾರೆ. ಅವರಿಗೂ ಧಮ್ಕಿ ಹಾಕಿದ್ದಾರೆ. ರಾಜ್ಯ ಸರಕಾರ ಗೂಂಡಾಗರ್ದಿಗೆ ಇಳಿದಂತಿದೆ ಎಂದು ಟೀಕಿಸಿದರು. ಎಲ್ಲ ವಿಚಾರದಲ್ಲೂ ರಾಜ್ಯ ಸರಕಾರ ಎಡವುತ್ತಿದೆ ಎಂದು ದೂರಿದರು. ವಸತಿ ಸಚಿವ ಜಮೀರ್ ಅಹ್ಮದ್ ಅವರ ಆಪ್ತ ಸಹಾಯಕ ಸರ್ಫರಾಜ್ ಖಾನ್ ಅವರ ಮೇಲೆ ಲೋಕಾಯುಕ್ತ ದಾಳಿ ಆದಾಗ 14.35 ಕೋಟಿ ವಶಕ್ಕೆ ಪಡೆದಿದ್ದಾರೆ. ಇದು ಭ್ರಷ್ಟಾಚಾರ ಅಲ್ಲವೇ? ನೀವು ಭ್ರಷ್ಟಾಚಾರದ ಮಾತನಾಡುತ್ತೀರಾ ಎಂದು ಕೇಳಿದರು. ಕಾಂಗ್ರೆಸ್ಸಿನ ಹಿರಿಯ ಶಾಸಕ ಬಿ.ಆರ್.ಪಾಟೀಲರು ಒಂದು ವರ್ಷದ ಹಿಂದೆ ಸರ್ಫರಾಜ್ ಖಾನ್ ಲಂಚ ಕೇಳಿದ ಬಗ್ಗೆ ಆರೋಪಿಸಿದ್ದರು. ಆಡಿಯೋ ಟೇಪ್ ಲೀಕ್ ಆಗಿತ್ತು. ಮುಖ್ಯಮಂತ್ರಿಗಳು ಏನು ಮಾಡಿದ್ದರು ಎಂದು ಕೇಳಿದರು. ಈ ವಿಷಯದಲ್ಲಿ ಸಿಎಂ ಮೃದು ಧೋರಣೆ ಯಾಕೆ ಎಂದರು.












Click it and Unblock the Notifications