ಕೆಂಗೇರಿ: ರೆವಿನ್ಯೂ ಇನ್ಸ್ ಪೆಕ್ಟರ್ ಸವಿತಾ ಬಂಧನ

ಬೆಂಗಳೂರು, ಮಾ. 6: ಪಿತ್ರಾರ್ಜಿತ ಜಮೀನಿನ ಖಾತೆ ಬದಲಾವಣೆಗೆ 20 ಸಾವಿರ ರೂ.ಲಂಚ ಸ್ವೀಕರಿಸುತ್ತಿದ್ದ ವೇಳೆ ಕೆಂಗೇರಿಯ ಕಂದಾಯ ನಿರೀಕ್ಷಕಿ ಸವಿತಾ ಬುಧವಾರ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಈ ಸಂಬಂಧ ಕಂಗೇರಿಯ ರಾಮ ಚಂದ್ರ ಎಂಬವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ದೂರುದಾರ ರಾಮಚಂದ್ರ ಅವರಿಗೆ ಕೆಂಗೇರಿಯ ಸರ್ವೇ ನಂ.105/1ರಲ್ಲಿ 10.08 ಗುಂಟೆ ಪಿತ್ರಾರ್ಜಿತ ಜಮೀನಿದ್ದು, ಖಾತೆ ಬದಲಾವಣೆಗಾಗಿ ಫೆಬ್ರವರಿ 28ರಂದು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು.

ಖಾತೆ ಬದಲಾವಣೆಗೆ ಕಂದಾಯ ನಿರೀಕ್ಷಕಿ ಸವಿತಾ 20 ಸಾವಿರ ರೂ.ಗಳ ಲಂಚ ಬೇಡಿಕೆ ಇಟ್ಟಿದ್ದು, 15 ಸಾವಿರ ರೂ.ಗಳಿಗೆ ಒಪ್ಪಿಕೊಂಡಿದ್ದರು ಎನ್ನಲಾಗಿದೆ. ನಿನ್ನೆ ಸವಿತಾ ಸೂಚನೆಯ ಮೇರೆಗೆ ಅದೇ ಕಚೇರಿಯಲ್ಲಿ ಗ್ರಾಮ ಸಹಾಯಕರಾಗಿ ಕರ್ತವ್ಯ ನಿರ್ವಹಿಸುವ ಎಸ್.ರಮೇಶ್ 10 ಸಾವಿರ ರೂ.ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.

ಪಂಚರ ಸಮಕ್ಷಮ ಆರೋಪಿತರಿಂದ ಲಂಚ ಹಣವನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು, ಆರೋಪಿ ಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತ ಇಬ್ಬರು ಆರೋಪಿಗಳನ್ನು ಲೋಕಾಯುಕ್ತ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಉಳಿದಂತೆ ಮಂಡ್ಯ, ಬೆಂಗಳೂರು, ಕನಕಪುರ, ಉಡುಪಿ, ಮಾಲೂರು, ಶಿವಮೊಗ್ಗ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳನ್ನು ಮುಂದೆ ಓದಿ...

ಆಯಿಲ್ ಬಾಯ್ಲರ್ ಸ್ವಚ್ಛಗೊಳಿಸಲು ಹೋಗಿ 5 ಸಾವು

ಆಯಿಲ್ ಬಾಯ್ಲರ್ ಸ್ವಚ್ಛಗೊಳಿಸಲು ಹೋಗಿ 5 ಸಾವು

ಆಯಿಲ್ ಬಾಯ್ಲರ್ ಸ್ವಚ್ಛಗೊಳಿಸಲು ಇಳಿದ ಐವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲೂಕಿನ ತೂಬಿನಕೆರೆ ಕೈಗಾರಿಕಾ ಪ್ರದೇಶದಲ್ಲಿ ಗುರುವಾರ(ಮಾ.6) ಬೆಳಗ್ಗೆ ಜರುಗಿದೆ.

ತೂಬಿನಕೆರೆ ಕೈಗಾರಿಕಾ ಪ್ರದೇಶದಲ್ಲಿರುವ ಸಂಪತ್ ಆಯಿಲ್ ಇಂಡಸ್ಟ್ರಿಯಲ್ಲಿ ಆಯಿಲ್ ಪ್ಯೂರಿಫೈ ಮಾಡಲಾಗುತ್ತದೆ. ಕಳೆದ 15 ದಿನಗಳ ಕಾಲ ಇಲ್ಲಿ ಕೆಲಸ ನಿಲ್ಲಿಸಲಾಗಿತ್ತು. ಇಂದು ಬೆಳಗ್ಗೆ ಕಾರ್ಯ ಆರಂಭವಾಗಿದ್ದು, ಹಳೇ ಆಯಿಲ್ ಸ್ವಚ್ಛಗೊಳಿಸಲು ಬಾಯ್ಲರ್‌ಗೆ ಕಾರ್ಮಿಕನೊಬ್ಬ ಇಳಿದಿದ್ದಾನೆ.

ಬಹಳ ಹೊತ್ತಾದರೂ ಆತ ಮೇಲೆ ಬಂದಿಲ್ಲ. ಇದನ್ನು ಗಮನಿಸಿದ ಇತರ ಕಾರ್ಮಿಕರು ಒಬ್ಬೊಬ್ಬರಾಗಿ ನೋಡಲು ಬಾಯ್ಲರ್‌ಗೆ ಇಳಿದು ಐದು ಮಂದಿ ಸಾವನ್ನಪ್ಪಿದ್ದಾರೆ. ವಿಷಯ ತಿಳಿದು ಅಗ್ನಿಶಾಮಕ ದಳ ಸಿಬ್ಬಂದಿ ಮೂರು ವಾಹನಗಳಲ್ಲಿ ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯ ಕೈಗೊಂಡಿದ್ದಾರೆ. ಎಸ್‌ಪಿ ಭೂಷಣ್ ಬೊರಸೆ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಬಸವೇಶ್ವರನಗರ ಪೊಲೀಸ್ ಠಾಣೆ ಕಳ್ಳ ವಶ

ಬಸವೇಶ್ವರನಗರ ಪೊಲೀಸ್ ಠಾಣೆ ಕಳ್ಳ ವಶ

ಕುಖ್ಯಾತ ಕನ್ನಕಳವು ಆರೋಪಿ ಮಂಜುನಾಥ @ ಸ್ಕೆಚ್ ಮಂಜ @ ಆದಿ ಎಂಬಾತನ ಬಂಧನ - 383 ಗ್ರಾಂ ಚಿನ್ನಾಭರಣ ವಶ

ಬಸವೇಶ್ವರನಗರ ಪೊಲೀಸ್ ಠಾಣೆಯ ಪೊಲೀಸರು ಮಾಹಿತಿ ಸಂಗ್ರಹಿಸಿ ಕುಖ್ಯಾತ ಕನ್ನಕಳವು ಆರೋಪಿಯಾದ ಮಂಜುನಾಥ @ ಸ್ಕೆಚ್ ಮಂಜ @ ಆದಿ ಬಿನ್ ರಾಮಯ್ಯ, 30 ವರ್ಷ, ಸೋಮಿನಕೊಪ್ಪ ಗ್ರಾಮ ಶಿವಮೊಗ್ಗ ಎಂಬಾತನನ್ನು ದಸ್ತಗಿರಿ ಮಾಡಿ ಆರೋಪಿಯು ನೀಡಿದ ಮಾಹಿತಿ ಆಧಾರದ ಮೇರೆಗೆ 11,50,000/- ಮೌಲ್ಯದ 383 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.

ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿ ತಿಳಿದು ಬಂದ ಅಂಶವೇನೆಂದರೆ ಆರೋಪಿಯು ಬಸವೇಶ್ವರನಗರ, ವಿಜಯನಗರ ಮತ್ತು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕನ್ನಕಳವು ಮತ್ತು ಮನೆಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿರುತ್ತದೆ. ಆರೋಪಿಯ ಬಂಧನದಿಂದ ಬಸವೇಶ್ವರನಗರ ಪೊಲೀಸ್ ಠಾಣೆಯ 7 ಮನೆ ಕಳವು, ವಿಜಯನಗರ ಪೊಲೀಸ್ ಠಾಣೆಯ 3 ಕನ್ನಕಳವು ಮತ್ತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ 1 ಕನ್ನಕಳವು ಪ್ರಕರಣಗಳು ಸೇರಿ ಒಟ್ಟು 11 ಪ್ರಕರಣಗಳು ಪತ್ತೆಯಾಗಿರುತ್ತವೆ.

ಬಸವೇಶ್ವರನಗರ ಪೋಲೀಸ್ ಠಾಣೆಯ ಪೊಲೀಸ್ ಇನ್ಸ್ ‍ಪೆಕ್ಟರ್ ಶ್ರೀ ಪೂರ್ಣಚಂದ್ರ ತೇಜಸ್ವಿರವರ ನೇತೃತ್ವದಲ್ಲಿ ಪಿಎಸ್ ‍ಐ ಬಿ.ಎಸ್.ಅಶೋಕ್, ಸಿ.ಎ.ಸಿದ್ದಲಿಂಗಯ್ಯ ಮತ್ತು ಸಿಬ್ಬಂದಿಯವರಾದ ಹೆಚ್ ‍ಸಿ 1446 ವೆಂಕಟೇಶ್, ಪಿಸಿ 9562 ಸಿದ್ದಪ್ಪರಾವ್, ಪಿಸಿ 7054 ಖಾಜಾ ಅಜ್ಮೀರ್, ಪಿಸಿ 11008 ರೇಣುಕುಮಾರ್, ಪಿಸಿ 5398 ಕುಮಾರ್.ಕೆ.ಆರ್, ಪಿಸಿ 4420 ರಮೇಶ್ ಮತ್ತು ಪಿಸಿ 8915 ಮುನಿಸ್ವಾಮಿ ರವರುಗಳು ಆರೋಪಿಯನ್ನು ದಸ್ತಗಿರಿ ಮಾಡಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಕನಕಪುರದಲ್ಲಿ ಯುವಕನ ಕೊಲೆ

ಕನಕಪುರದಲ್ಲಿ ಯುವಕನ ಕೊಲೆ

ಕಲ್ಲಹಳ್ಳಿ ವೆಂಕಟರಮಣಸ್ವಾಮಿ ಜಾತ್ರಾಮಹೋತ್ಸವ, ಊರ ಹಬ್ಬದ ರಸ್ತೆ ಸುಂಕ ಮತ್ತು ಪಾರ್ಕಿಂಗ್ ಹಣ ವಸೂಲಿಯ ವಿಷಯವಾಗಿ ಎರಡು ಗುಂಪುಗಳ ನಡುವೆ ಇದ್ದ ಹಳೇ ವೈಷಮ್ಯದಿಂದ ಬುಧವಾರ ಕಲ್ಲಹಳ್ಳಿ ಗ್ರಾಮದ ರಾಜು, ಉಮೇಶ್, ರಘು ಎಂಬವರು ಹಾಗೂ ಕುರುಪೇಟೆಯ ಇಬ್ಬರು ಯುವಕರು ಚಂದ್ರ ಎಂಬಾತನನ್ನು ಹಿಂಬಾಲಿಸಿಕೊಂಡು ಬಂದು ಮಾರಾಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ನಡೆದಿದೆ.

ರಾಜಕೀಯ ಹಿನ್ನೆಲೆಯಿದ್ದ ಚಂದ್ರು ಜೀವ ಬೆದರಿಕೆ ಇದ್ದರೂ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ. ಕೊಲೆಗೆ ಗ್ರಾಮಾಂತರ ಪೊಲೀಸರ ನಿರ್ಲಕ್ಷವೇ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇಲಾಖೆಯ ವೈಫಲ್ಯವಾಗಿದ್ದರೆ ತನಿಖೆ ಮಾಡಿ ಉನ್ನತ ಅಧಿಕಾರಿಗೆ ವರದಿ ನೀಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.

ಹಲ್ಲೆ ನಡೆಸಿ, ಜೀವ ಬೆದರಿಕೆ ನೀಡಿದ ಪ್ರಕರಣ

ಹಲ್ಲೆ ನಡೆಸಿ, ಜೀವ ಬೆದರಿಕೆ ನೀಡಿದ ಪ್ರಕರಣ

ಶಿರ್ವಾ: ಉಡುಪಿ ತಾಲೂಕು ಪಿಲಾರು ಗ್ರಾಮದ ಮುದರಂಗಡಿಯ ಗ್ರುಟ್ಟೋ ಎಂಬಲ್ಲಿ ತನಗೆ ಮಕ್ಕಳಿಲ್ಲ ಎಂದು ಅಪ ಪ್ರಚಾರ ಮಾಡುತ್ತಿಯಾ ಎಂದು ಆರೋಪಿ ಜೋಸೇಫ್‌ ಡಿಸೋಜ ಎಂಬವರು ಪಿರ್ಯಾದಿದಾರರಾದ ಸಂತಾನ ಮಥಾಯಸ್‌‌ (83) ತಂದೆ ದಿವಂಗತ ರುಜಾರಿಯೋ ಮಥಾಯಸ್‌, ವಾಸ ಮೋತಿ ನಿವಾಸ, ಪಿಲಾರು ಅಂಚೆ, ಪಿಲಾರು ಗ್ರಾಮ ಉಡುಪಿ ತಾಲೂಕು ಎಂಬವರಿಗೆ ಕೈಗಳಿಂದ ಹೊಡೆದು, ನಿನ್ನನ್ನು ಸುಮ್ಮನೆ ಬಿಡುವುದಿಲ್ಲವೆಂದು ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ಸಂತಾನ ಮಥಾಯಸ್‌‌ ರವರು ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 58/2014 ಕಲಂ 323,506 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಆಸೀಡ್ ದಾಳಿ ಮಾಡಿ ಕೊಲೆಗೆ ಪ್ರಯತ್ನ

ಆಸೀಡ್ ದಾಳಿ ಮಾಡಿ ಕೊಲೆಗೆ ಪ್ರಯತ್ನ

ಮಾಲೂರು ಪೊಲೀಸ್ ಠಾಣೆಯಲ್ಲಿ ಕೊಲೆಗೆ ಪ್ರಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲ್ಲೂಕು, ಶಿವಾರಪಟ್ಟಣ ಗ್ರಾಮದಲ್ಲಿ ಸಂಭವಿಸಿರುತ್ತದೆ.

ಶಿವಾರಪಟ್ಟಣದ ವಾಸಿ ಕೃಷ್ಣಪ್ಪ- ರವರು ತಮ್ಮ ಮನೆಯ ಬಳಿ ಇದ್ದಾಗ ಯಾರೋ 3 ಜನರು ಪಲ್ಸರ್ ವಾಹನದಲ್ಲಿ ವಿಳಾಸವನ್ನು ಕೇಳುವ ನೆಪದಲ್ಲಿ ಬಂದು ಕೃಷ್ಣಪ್ಪ ರವರಿಗೆ ಪ್ಲಾಸ್ಟಿಕ್ ಡಬ್ಬದಲ್ಲಿ ತಂದಿದ್ದ ಆಸೀಡ್‌ನ್ನು ವಾಹನದಲ್ಲಿ ಬಂದಿದ್ದವರ ಪೈಕಿ ಒಬ್ಬರೂ ಮುಖದ ಮೇಲೆ ಎರಚಿ ಪರಾರಿಯಾಗಿರುತ್ತಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08152-243066 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

ಗ್ರಾಮಾಂತರ ಠಾಣೆ ಶಿವಮೊಗ್ಗ: ವಂಚನೆ ಪ್ರಕರಣ

ಗ್ರಾಮಾಂತರ ಠಾಣೆ ಶಿವಮೊಗ್ಗ: ವಂಚನೆ ಪ್ರಕರಣ

ಪಿರ್ಯಾದಿ ಮೆಹಬೂಬ್ ಪಾಷ 40 ವರ್ಷ ವಾಸ ಹೊಳಲೂರು ಮಶೀದಿ ಕೇರಿ ಇವರು ಹೊಳಲೂರಿನ ಕೆನರಾ ಬ್ಯಾಕಿನಲ್ಲಿ 69,500ರೂಗಳನ್ನು ಡ್ರಾ ಮಾಡಿ ಎಣಿಸುತ್ತಿರುವಾಗ ಆರೋಪಿಗಳು ಅದರಲ್ಲಿ ಖೋಟ ನೋಟು ಇದೆ ತೋರಿಸುತ್ತೇವೆ ಎಂದು ಹೇಳಿ ಎರಡು ನೋಟುಗಳನ್ನು ತೋರಿಸಿ ಇದು ಖೊಟ ನೋಟು ಎಂದು ಹೇಳಿ ಹಣ ವಾಪಸ್ಸು ಕೊಡುವಾಗ ರೂ22,000/- ಗಳು ತಗೆದು ಕೊಂಡು ಮೊಸ ಮಾಡಿರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+