ಶಹಾಪುರ: ಚೌಡೇಶ್ವರಿ ಜಾತ್ರೆ ಘರ್ಷಣೆ, ಓರ್ವ ಬಲಿ
ಬೆಂಗಳೂರು, ಜ. 17: ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಕನ್ಯಾಕೋಳೂರು ಗ್ರಾಮದಲ್ಲಿ ಶುಕ್ರವಾರ ಚೌಡೇಶ್ವರಿ ದೇವಿ ಜಾತ್ರೆ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಕಾದಾಟ ಶುರುವಾಗಿದೆ. ಘಟನೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, 20 ಪೊಲೀಸರು ಸೇರಿದಂತೆ 30ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಕನ್ಯಾಕೋಳೂರಿನಲ್ಲಿ ಶುಕ್ರವಾರ ಚೌಡೇಶ್ವರಿ ಜಾತ್ರೆ ನಡೆಯುವ ವೇಳೆ ಜಾತ್ರೆ ಮೆರವಣಿಗೆ ಹಾದು ಹೋಗುವ ಹಾದಿಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಎರಡು ಗುಂಪಿನವರು ಕೈ ಕೈ ಮಿಲಾಯಿಸಿದ್ದಾರೆ. ಈ ವೇಳೆ 45 ವರ್ಷದ ದೇವೇಂದ್ರಪ್ಪ ದಳಪತಿ ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಇದರಿಂದ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಉದ್ರಿಕ್ತ ಜನತೆ ನಾಲ್ಕು ಬಸ್ ಗಳಿಗೆ ಕಲ್ಲು ತೂರಿದ್ದಾರೆ. ದೇವೇಂದ್ರಪ್ಪ ಅವರ ಸಾವು ದಲಿತರು ಹಾಗೂ ಸವರ್ಣೀಯರ ನಡುವೆ ಸಂಘರ್ಷಕ್ಕೆ ನಾಂದಿ ಹಾಡಿದೆ.
ಘಟನೆ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಘಟನೆಯಲ್ಲಿ ಇನ್ಸ್ ಪೆಕ್ಟರ್ ನ್ಯಾಮಗೌಡ ಹಾಗೂ ಪಿಎಸ್ ಐ ದೊಡ್ಡಪ್ಪ ಸೇರಿದಂತೆ 20ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಸುಮಾರು 30 ಜನರು ಗಾಯಗೊಂಡು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.












Click it and Unblock the Notifications