ಪರೀಕ್ಷೆ ಇಲ್ಲದೇ PUC ಪಾಸಾದ್ರೂ ಕಾಲೇಜಿನಲ್ಲಿ ಸೀಟು ಸಿಗಲ್ಲ ಏನ್ ಮಾಡ್ತೀರಿ?

ಬೆಂಗಳೂರು, ಜೂ. 07: ರಾಜ್ಯದಲ್ಲಿ ಪಿಯುಸಿ ಪರೀಕ್ಷೆ ರದ್ದು ಮಾಡಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಣೆ ಮಾಡಿದ್ದಾರೆ. ಎಸ್ಎಸ್ಎಲ್‌ಸಿಗೆ ಮಾತ್ರ ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಆಧರಿಸಿ ಆರು ವಿಷಯಕ್ಕೆ ಎರಡು ದಿನದ ಪರೀಕ್ಷೆ ನಡೆಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ತೀರ್ಮಾನ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪರಿಹರಿಸಲಾಗದಂಥ ಸಮಸ್ಯೆಗೆ ನಾಂದಿ ಹಾಡಲಿದೆ. ಎಸ್ಎಸ್ಎಲ್‌ಸಿ - ಪಿಯುಸಿ ಪಾಸ್ ಆದರೂ ಕಾಲೇಜಿನಲ್ಲಿ ಸೀಟು ಸಿಗದ ಕಾರಣಕ್ಕೆ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯಲಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದು ಮಾಡಿ ತೀರ್ಮಾನ ಕೈಗೊಂಡಿದ್ದು ಸರಿ. ಆದರೆ, ಅದಕ್ಕೆ ನಡೆಸಬೇಕಾದ ಪೂರ್ವ ತಯಾರಿ ನಡೆದಿಲ್ಲ. ಹೀಗಾಗಿ ಪದವಿ ಶಿಕ್ಷಣ, ವೃತ್ತಿಪರ ಕೋರ್ಸ್ ಗಳ ದಾಖಲಾತಿ ಪ್ರಕ್ರಿಯೆಯಲ್ಲೇ ಬಹುದೊಡ್ಡ ತೊಡಕು ಕಾಣಿಸಿಕೊಂಡಿದೆ.

Recommended Video

    ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಡಿರೋ ಎಡವಟ್ಟು ನೋಡಿ! | Oneindia Kannada
    ಪಿಯುಸಿಗೆ ಸೀಟು ಸಿಗಲ್ಲ

    ಪಿಯುಸಿಗೆ ಸೀಟು ಸಿಗಲ್ಲ

    ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ 8.5 ಲಕ್ಷ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಇನ್ನು ಪುನರಾವರ್ತಿತ ಅಭ್ಯರ್ಥಿಗಳು, ಖಾಸಗಿ ಅಭ್ಯರ್ಥಿಗಳು ಹಾಗೂ ಸಿಬಿಎಸ್‌ಇ ಪಠ್ಯಕ್ರಮ ಅಧ್ಯಯನ ಮಾಡಿದ ವಿದ್ಯಾರ್ಥಿಗಳನ್ನು ಪರಿಗಣಿಸಿದರೆ ರಾಜ್ಯದಲ್ಲಿ ಎಸ್ಎಸ್ಎಲ್‌ಸಿ ಪಾಸಾಗುವ ವಿದ್ಯಾರ್ಥಿಗಳ ಸಂಖ್ಯೆ 10 ಲಕ್ಷ ದಾಟುತ್ತದೆ. ಆದರೆ, ಪಿಯು ಮಂಡಳಿ ರಾಜ್ಯದಲ್ಲಿ ಪ್ರಸಕ್ತ ಸಾಲಿನ ಪಿಯುಸಿ ಪರೀಕ್ಷೆ ರದ್ದು ಮಾಡಿ ವಿದ್ಯಾರ್ಥಿಗಳ ವಿವರ ನೀಡಿತ್ತು. 6.5 ಲಕ್ಷ ಪಿಯುಸಿ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ಪರೀಕ್ಷೆ ಬರೆಯಬೇಕಿತ್ತು.


    ಎಸ್‌ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣ ಪ್ರಮಾಣ ಕನಿಷ್ಠ ಶೇ. 30 ರಷ್ಟು ವಿದ್ಯಾರ್ಥಿಗಳು ಕಡ್ಡಾಯವಾಗಿ ಅನುತ್ತೀರ್ಣಆಗುತ್ತಿದ್ದರು. ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಶೇ. 20 ರಷ್ಟು ವಿದ್ಯಾರ್ಥಿಗಳು ಪ್ರತಿ ವರ್ಷ ಅನುತ್ತಿರ್ಣ ರಾಗುತ್ತಿದ್ದರು. ಈ ವರ್ಷ ಅನುತ್ತೀರ್ಣ ಮಾಡುವ ಕಾರಣದಿಂದ ಸರಾಸರಿ ಹತ್ತು ಲಕ್ಷ ವಿದ್ಯಾರ್ಥಿಗಳ ದಾಖಲಾತಿಗೆ ಸರ್ಕಾರ ಅವಕಾಶ ಮಾಡಿಕೊಡಬೇಕಿದೆ. ಇನ್ನು ಈ ವರ್ಷ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದ ಕಾರಣ ರಾಜ್ಯ ಹಾಗೂ ಕೇಂದ್ರ ಪಠ್ಯಕ್ರಮ, ಹೊರ ರಾಜ್ಯದಿಂದ ವ್ಯಾಸಂಗಕ್ಕೆ ಬರುವ ವಿದ್ಯಾರ್ಥಿಗಳನ್ನು ಪರಿಗಣಿಸಿ ಹೇಳುವುದಾದರೆ, ಪಿಯುಸಿಯಿಂದ ತೇರ್ಗಡೆಯಾದವರ ಸಂಖ್ಯೆಯೂ ಹತ್ತು ಲಕ್ಷ ದಾಟುತ್ತದೆ. ಅಷ್ಟು ಮಂದಿಯಲ್ಲಿ ಸಿಇಟಿ ಮೂಲಕ ಕೇವಲ ಇಂಜಿನಿಯರಿಂಗ್, ವೈದ್ಯಕೀಯ ಕೋರ್ಸ್ ಆಯ್ಕೆ ಮಾಡಿಕೊಳ್ಳುತ್ತಾರೆ. ಉಳಿದ ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾಖಲಾತಿ ಕೊಡುವಷ್ಟು ಪದವಿ ಕಾಲೇಜುಗಳು ರಾಜ್ಯದಲ್ಲಿ ಇವೆಯೇ ?

    ಪದವಿ ಪ್ರವೇಶಕ್ಕೂ ಅವಕಾಶ ಇಲ್ಲ

    ಪದವಿ ಪ್ರವೇಶಕ್ಕೂ ಅವಕಾಶ ಇಲ್ಲ

    ರಾಜ್ಯ ಪಠ್ಯಕ್ರಮ, ಕೇಂದ್ರ ಪಠ್ಯ, ಪುನರಾವರ್ತಿತ ಅಭ್ಯರ್ಥಿಗಳು ಸೇರಿದಂತೆ ಪಿಯುಸಿಯಿಂದ ಉತ್ತೀರ್ಣರಾದ ನಾಲ್ಕರಿಂದ 6 ಲಕ್ಷ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡಹುದು. ಇಂಜಿನಿಯರಿಂಗ್, ವೈದ್ಯಕೀಯ, ಪದವಿ, ವೃತ್ತಿಪರ ಕೋರ್ಸ್ ಪರಿಗಣಿಸಿದರು ಅರು ಲಕ್ಷ ಮಂದಿಗೆ ಏಕ ಕಾಲಕ್ಕೆ ದಾಖಲಾತಿ ನೀಡಲು ನಮ್ಮ ರಾಜ್ಯದಲ್ಲಿ ಸೌಲಭ್ಯವೇ ಇಲ್ಲ. ಪರೀಕ್ಷೆ ಇಲ್ಲದ ಕಾರಣ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ ಎಂಬುದನ್ನು ಪರಿಗಣಿಸಿ ರಾಜ್ಯ ಸರ್ಕಾರ ಸರ್ಕಾರಿ ಕಾಲೇಜುಗಳನ್ನು ಅದಕ್ಕೆ ಸಜ್ಜುಗೊಳಿಸಬೇಕಿತ್ತು. ಈಗಲೇ ಶೇ. 80 ರಷ್ಟು ಅತಿಥಿ ಉಪನ್ಯಾಸಕರನ್ನು ನಂಬಿ ಬದುಕುತ್ತಿರುವ ಸರ್ಕಾರಿ ಪದವಿ ಕಾಲೇಜುಗಳ ಪ್ರವೇಶಕ್ಕೆ ಈ ಬಾರಿ ವಿದ್ಯಾರ್ಥಿಗಳು ಮುಗಿ ಬೀಳಲಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಕಾಲೇಜುಗಳು ಹೊಸ ಹಾದಿ ಹುಡುಕಿಕೊಂಡಿವೆ. ಪರೀಕ್ಷೆ ಇಲ್ಲದೇ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗಕ್ಕೆ ಅವಕಾಶ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಆದರೆ, ಯಾವ ಆಯಾಮದಿಂದಲೂ ಈ ವರ್ಷ ಪಿಯುಸಿ ಪಾಸಾದವರೆಲ್ಲರೂ ದಾಖಲಾತಿ ಪಡೆಯುವಷ್ಟು ಮೂಲ ಸೌಲಭ್ಯ ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಹೊಂದಿಲ್ಲ. ಹೀಗಾಗಿ ಪಾಸಾದರೂ ವಿದ್ಯಾರ್ಥಿಗಳು ಬೀದಿ ಪಾಲಾಗುವ ಸಾಧ್ಯತೆ ಕಾಣುತ್ತಿದೆ.

    ಪ್ರವೇಶ ಪರೀಕ್ಷೆ ಮತ್ತು ಫೀಸು

    ಪ್ರವೇಶ ಪರೀಕ್ಷೆ ಮತ್ತು ಫೀಸು

    ಪರೀಕ್ಷೆ ಇಲ್ಲದೇ ಪಾಸು ಮಾಡಿದ್ದನ್ನು ಬಂಡವಾಳ ಮಾಡಿಕೊಳ್ಳಲು ಖಾಸಗಿ ಕಾಲೇಜುಗಳು ಸಮರಕ್ಕೆ ಇಳಿದಿವೆ. ಒಂದೆಡೆ ಮೆಡಿಕಲ್, ಇಂಜಿನಿಯರಿಂಗ್ ಶುಲ್ಕವನ್ನು ಕೇಳಲಿಕ್ಕೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಪದವಿ ಪ್ರವೇಶಕ್ಕೂ ಪ್ರವೇಶ ಪರೀಕ್ಷೆ ನಡೆಸುವ ಮೂಲಕ ಗುಣಮಟ್ಟದ ವಿದ್ಯಾರ್ಥಿಗಳ ಆಯ್ಕೆ ಹೆಸರಿನಲ್ಲಿ ದುಬಾರಿ ಶುಲ್ಕ ವಸೂಲಿಗೆ ಸಕಲ ಸಿದ್ಧತೆ ಮಾಡಿಕೊಂಡಿವೆ. ಹೀಗಾಗಿ ಈ ವರ್ಷದ ಪದವಿ ಶಿಕ್ಷಣ ಉಳ್ಳವರ ಪಾಲಾಗಿದೆ. ಸರ್ಕಾರಿ ಪದವಿ ಕಾಲೇಜುಗಳ ಸ್ಥಿತಿ ಹೇಳತೀರಲಾಗದು. ಬಹುತೇಕ ಪದವಿ ಕಾಲೇಜುಗಳು ಪ್ರಾಧ್ಯಾಪಕರ ಕೊರತೆ ಎದುರಿಸುತ್ತಿವೆ. ಬಹುತೇಕ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರೇ ಪಾಠ ಮಾಡುತ್ತಿದ್ದಾರೆ. ಅವರಿಗೆ ನೆಟ್ಟಿಗೆ ಸಂಬಳ ಕೊಡದ ಕಾರಣ ಈ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಮುಷ್ಕರ ಹೂಡಲು ಚಿಂತನೆ ನಡೆಸಿದ್ದಾರೆ. ಈ ರೀತಿ ಆದರೆ, ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತುಂಬಿ ತುಳುಕಿದರೂ ಕೂಡ ಪಾಸಾದ ಎಲ್ಲರಿಗೂ ದಾಖಲಾತಿ ನೀಡಿ ಪಾಠ ಮಾಡುವಷ್ಟು ಮೂಲ ಸೌಲಭ್ಯಗಳು ಇಲ್ಲ. ಹೀಗಾಗಿ ಒಂದಡೆ ಉನ್ನತ ಶಿಕ್ಷಣ ಶುಲ್ಕ ದುಬಾರಿಯಾಗಲಿದ್ದು, ಬಡವರು ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಡಾ. ಅಶ್ವತ್ಥ್ ನಾರಾಯಣ್‌ಗೆ ಹೊಡೆತ

    ಡಾ. ಅಶ್ವತ್ಥ್ ನಾರಾಯಣ್‌ಗೆ ಹೊಡೆತ

    ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪಿಯುಸಿ ಪರೀಕ್ಷೆ ರದ್ದು ಮಾಡಿ ತೀರ್ಮಾನ ತೆಗೆದುಕೊಂಡಿದ್ದಾರೆ. ಆದರೆ, ಇದರಿಂದ ಬಹುದೊಡ್ಡ ಸಮಸ್ಯೆ ಎದುರುಗಾವುದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ್ ಅವರಿಗೆ. ಪ್ರಸಕ್ತ ಸಾಲಿನಲ್ಲಿ ಪಾಸಾಗುವ ಪಿಯುಸಿ ವಿದ್ಯಾರ್ಥಿಗಳಿಗೆ ದಾಖಲಾಗುವಷ್ಟು ಕಾಲೇಜುಗಳು ರಾಜ್ಯದಲ್ಲಿ ಇಲ್ಲ. ಎರಡು ದಿನದಲ್ಲಿ ಕಾಲೇಜು ಆರಂಭಿಸಲು ಸಾಧ್ಯವಿಲ್ಲ.ಈ ವರ್ಷದ ಪದವಿ ಶಿಕ್ಷಣ ವ್ಯವಸ್ಥೆಯಲ್ಲಿ ಎದುರಾಗಲಿರುವ ಸಮಸ್ಯೆಗಳಿಂದ ಡಾ. ಅಶ್ವತ್ಥ್ ನಾರಾಯಣ ಈವರೆಗೂ ಗಳಿಸಿರುವ ಮರ್ಯಾದೆ ಕಳೇದು ಹೋದರೂ ಅಚ್ಚರಿ ಪಡಬೇಕಿಲ್ಲ. ಸುರೇಶ್ ಕುಮಾರ್ ಅವರು ತೆಗೆದಕೊಂಡಿರುವ ತೀರ್ಮಾನ ಉಪ ಮುಖ್ಯಮಂತ್ರಿ ಪಾಲಿಗೆ ಬಿಸಿ ತುಪ್ಪವಾಗಲಿದೆ.

    ಸುರೇಶ್ ಕುಮಾರ್‌ಗೂ ತಪ್ಪಿಲ್ಲ ತಲೆನೋವು

    ಸುರೇಶ್ ಕುಮಾರ್‌ಗೂ ತಪ್ಪಿಲ್ಲ ತಲೆನೋವು

    ಪಿಯುಸಿ ಪರೀಕ್ಷೆ ರದ್ದು ಮಾಡಿ ಎಸ್ಎಸ್ಎಲ್ ಸಿ ಗೆ ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಮೂಲಕ ಪರೀಕ್ಷೆ ನಡೆಸಲು ಶಿಕ್ಷಣ ಸಚಿವರು ಹೊರಟಿದ್ದಾರೆ. ಯಾರನ್ನು ಫೇಲ್ ಮಾಡಲ್ಲ ಎಂದು ಭರವಸೆ ನೀಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಎಸ್ಎಸ್ ಎಲ್ ಸಿ ಪರೀಕ್ಷೆ ಬರೆಯಲಿರುವ ರಾಜ್ಯದ 8. 5 ಲಕ್ಷ ವಿದ್ಯಾರ್ಥಿಗಳು ಈ ಸಾಲಿನಲ್ಲಿ ಎಸ್ಎಸ್ಎಲ್‌ಸಿ ಪಾಸಾಗಲಿದ್ದಾರೆ. ಪುನರಾವರ್ತಿತರು, ಸಿಬಿಎಸ್ ಸಿ, ಖಾಸಗಿ ವಿದ್ಯಾರ್ಥಿಗಳನ್ನು ಪರಿಗಣಿಸಿದರೆ ರಾಜ್ಯದಲ್ಲಿ 12 ಲಕ್ಷ ಕ್ಕೂ ಅಧಿಕ ವಿದ್ಯಾರ್ಥಿಗಳು ಪಿಯುಸಿಗೆ ದಾಖಲಾತಿ ಪಡೆಯಬೇಕದ ಅನಿವಾರ್ಯತೆ ಎದುರಾಗಲಿದೆ. ಐಟಿಐ ಸೇರಿದಂತೆ ಸೀಮಿತ ವೃತ್ತಿಪರ ಕೋರ್ಸ್ ಬಿಟ್ಟರೆ ಬಹುತೇಕರು ಪಿಯಿಸಿ ಆಯ್ಕೆ ಮಾಡಿಕೊಳ್ಳುತ್ತಾರೆ. ರಾಜ್ಯದಲ್ಲಿ ಪ್ರಸ್ತುತ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳನ್ನು ಪರಿಗಣಿಸಿ ಹೇಳುವುದಾದರೆ 6.50 ಲಕ್ಷ ವಿದ್ಯಾರ್ಥಿಗಳಷ್ಟೇ ಓದಲು ಕಾಲೇಜು ಸೌಲಭ್ಯವಿದೆ. ಹೀಗಾಗಿ ಎಸ್ಎಸ್ ಎಲ್ ಸಿ ವಿದ್ಯಾರ್ಥಿಗಳು ಕೂಡ ಪಾಸಾದರೂ ದಾಖಲಾತಿ ಪಡೆಯದೇ ಬೀದಿಗೆ ಬೀಳುವುದರಲ್ಲಿ ಅನುಮಾನವಿಲ್ಲ. ಈಗಾಗಲೇ ಮನಸೋ ಇಚ್ಧೆ ತೀರ್ಮಾನ ತೆಗೆದುಕೊಂಡು, ಯಾವ ಪೂರ್ವ ತಯಾರಿ ಇಲ್ಲದೇ ಆದೇಶಗಳನ್ನು ಹೊರಡಿಸಿ ತಾರತಮ್ಯ ಎಸಗಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿರುದ್ಧ ಜನಾಕ್ರೋಶ ವ್ಯಕ್ತವಾಗಲಿದೆ. ಈಗಾಗಲೇ ಶಿಕ್ಷಣ ವ್ಯವಸ್ಥೆಗೆ ಅವರು ಕೊಟ್ಟಿರುವ ಕೊಡುಗೆ ನೋಡಿ ನೊಂದಿರುವ ಆಡಳಿತ ಮಂಡಳಿಗಳೇ ಬೀದಿಗೆ ಇಳಿದರೂ ಅಚ್ಚರಿ ಪಡಬೇಕಿಲ್ಲ.

    ಫೇಲ್ ಮಾಡೋದೇ ನಮ್ಮವರ ಗುರಿ

    ಫೇಲ್ ಮಾಡೋದೇ ನಮ್ಮವರ ಗುರಿ

    ನಮ್ಮ ದೇಶದಲ್ಲಿ ಪಾಶಿಮಾತ್ಯ ದೇಶಗಳ ಮಾದರಿಯಲ್ಲಿ ಶಿಕ್ಷಣ ಪದ್ಧತಿ ಅಭಿವೃದ್ಧಿಯಾಗಿಲ್ಲ. ಇಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಮೂಲ ಸೌಲಭ್ಯ ಇಲ್ಲದೇ ಓದುವ ಮಕ್ಕಳನ್ನು ದುರುದ್ದೇಶ ಪೂರ್ವಕವಾಗಿ ಫೇಲ್ ಮಾಡುವ ವ್ಯವಸ್ಥೆ ನಮ್ಮದು. ನಮ್ಮಲ್ಲಿ ಪರೀಕ್ಷೆ ಅಂತ ಇಟ್ಟಿರುವುದೇ ಫೇಲ್ ಮಾಡಲಿಕ್ಕೆ. ಆರು ಲಕ್ಷ ಜನ ವಿದ್ಯಾರ್ಥಿಗಳಿದ್ದರೆ, ಅದರಲ್ಲಿ ಎರಡು ಲಕ್ಷ ವಿದ್ಯಾರ್ಥಿಗಳನ್ನು ದುರುದ್ದೇಶ ಪೂರ್ವಕವಾಗಿ ಫೇಲ್ ಮಾಡಲೇಬೇಕು. ಅವರು ಪಾಸು ಆದರೆ ಇಲ್ಲಿ ಅವರಿಗೆ ಓದುವ ಸೌಲಭ್ಯ ಸಿಗಲ್ಲ. ಸರ್ಕಾರಿ ಪದವಿ ಕಾಲೇಜುಗಳಲ್ಲಿ ಶೇ. 80 ರಷ್ಟು ಮಂದಿ ಅತಿಥಿ ಉಪನ್ಯಾಸಕರಿದ್ದಾರೆ. ಇದೆಲ್ಲವನ್ನೂ ಪೂರ್ವಾಲೋಚನೆ ಮಾಡಿ ಪರಿಹಾರ ಕ್ರಮ ತೆಗೆದುಕೊಂಡು ತೀರ್ಮಾನ ಮಾಡಬೇಕಿತ್ತು. ಕೊರೊನಾ ನೆಪದಲ್ಲಿ ಮಾಡಬಾರದ ಆದೇಶಗಳನ್ನು ಮಾಡಿ ಇಡಿ ವ್ಯವಸ್ಥೆಯನ್ನು ಕುಲಗೆಡಿಸಲಾಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಕಾಲೇಜು ಪ್ರಾಂಶುಪಾಲರು ತಿಳಿಸಿದರು.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+