SSLC Exam: ಎಸ್ಎಸ್ಎಲ್ಸಿ ಪರೀಕ್ಷೆ, ಹಾಲ್ ಟಿಕೆಟ್ ಕುರಿತು ಅಪ್ಡೇಟ್
ಬೆಂಗಳೂರು, ಮಾರ್ಚ್ 12: ಕರ್ನಾಟಕದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಅಂತಿಮ ಪರೀಕ್ಷೆ ತಯಾರಿಯಲ್ಲಿ ತೊಡಗಿದ್ದಾರೆ. ದಿನಾಂಕ 21.03.2025ರಿಂದ ಎಸ್ಎಸ್ಎಲ್ಸಿ ಪರೀಕ್ಷೆ-1 ಆರಂಭವಾಗಲಿದೆ. ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ಹಾಲ್ ಟಿಕೆಟ್ ತೋರಿಸಿ, ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ವಾರ್ಷಿಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಹಾಲ್ ಟಿಕೆಟ್ ನೀಡುವ ಕುರಿತು ಸುತ್ತೋಲೆಯನ್ನು ಹೊರಡಿಸಲಾಗಿದೆ.
ಈ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಆದೇಶವನ್ನು ಹೊರಡಿಸಿದೆ. ಈ ಆದೇಶ 2025ನೇ ಮಾರ್ಚ್/ ಏಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ಎಸ್ಎಸ್ಎಲ್ಸಿ ಪರೀಕ್ಷೆ-1ಕ್ಕೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ ಅಂತಿಮ ಪ್ರವೇಶ ಪತ್ರಗಳ ವಿತರಣೆ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.

ಆದೇಶದಲ್ಲಿ ಮಾರ್ಚ್/ ಏಪ್ರಿಲ್ ಮಾಹೆಯಲ್ಲಿ ನಡೆಯುವ ಎಸ್ಎಸ್ಎಲ್ಸಿ ಪರೀಕ್ಷೆ-1ಕ್ಕೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ ಅಂತಿಮ ಪ್ರವೇಶ ಪತ್ರಗಳನ್ನು ದಿನಾಂಕ 10.03.2025ರಂದು ಮಂಡಳಿಯ ಜಾಲತಾಣದ ಶಾಲಾ ಲಾಗಿನ್ನಲ್ಲಿ ಅಪ್ ಲೋಡ್ ಮಾಡಲಾಗುವುದು. ಶಾಲಾ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ಮಂಡಲಿಯ ಜಾಲತಾಣದ ಶಾಲಾ ಲಾಗಿನ್ ಮೂಲಕ ಡೌನ್ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ವಿತರಿಸುವುದು ಎಂದು ತಿಳಿಸಿದೆ.
ಪ್ರಮುಖ ಸೂಚನೆಗಳು
* ತಮ್ಮ ಶಾಲೆಯ ಮುಖಾಂತರ ನೋಂದಾಯಿಸಿದ ವಿದ್ಯಾರ್ಥಿಗಳ ಸಂಖ್ಯೆ, ಡೌನ್ಲೋಡ್ ಮಾಡಿಕೊಂಡ ಪವೇಶ ಪತ್ರಗಳ ಸಂಖ್ಯೆಗೆ ಸರಿ ಹೊಂದುತ್ತಿದೆಯೇ ಎಂದು ಪರಿಶೀಲಿಸಿಕೊಳ್ಳುವುದು. ಒಂದು ವೇಳೆ ಯಾವುದಾದರು ವಿದ್ಯಾರ್ಥಿಯ ಪವೇಶ ಪತ್ರ ಬಂದಿಲ್ಲದಿದ್ದರೆ, ಸದರಿ ವಿದ್ಯಾರ್ಥಿಯ ವಿವರವನ್ನು ಸಮರ್ಥನೆಯೊಂದಿಗೆ/ ದಾಖಲೆಗಳೊಂದಿಗೆ ಕೂಡಲೇ ಮಂಡಲಿಗೆ ಕಳುಹಿಸಿಕೊಡುವುದು.
* ಒಂದು ವೇಳೆ CCERF ವಿದ್ಯಾರ್ಥಿ CCEPF ಆಗಿದ್ದು, ಅಥವಾ CCEPF ವಿದ್ಯಾರ್ಥಿ CCERF ಆಗಿದ್ದು, ಹೀಗೆ ವಿದ್ಯಾರ್ಥಿಯ ವಿಧ ಬದಲಾಗಿದ್ದಲ್ಲಿ ಅಂತಹ ಪ್ರವೇಶ ಪತ್ರಗಳನ್ನು ಸೂಕ್ತ ದಾಖಲೆಗಳ ಸಮರ್ಥನೆಯೊಂದಿಗೆ ತಿದ್ದುಪಡಿಗಾಗಿ ಮಂಡಲಿಗೆ ಕಳುಹಿಸಬೇಕು.
* ಅಧಿಸೂಚನೆಯಲ್ಲಿ ವಿವರಿಸಿರುವಂತೆ ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯ/ ವಿನಾಯಿತಿ ನೀಡುವ ಸಂಬಂಧ ಉಪನಿರ್ದೇಶಕರ ಜ್ಞಾಪನದನ್ವಯ ದೈಹಿಕ ಸ್ಥಿತಿ, ಭಾಷಾ ವಿನಾಯಿತಿ, ಬದಲಿ ವಿಷಯಗಳ ಮಾಹಿತಿಗಳು ಪ್ರವೇಶ ಪತ್ರದಲ್ಲಿ ಮುದ್ರಿತವಾಗಿರುವ ಬಗ್ಗೆ ಮುಖ್ಯಶಿಕ್ಷಕರು ಖಚಿತಪಡಿಸಿಕೊಳ್ಳುವುದು. ಇಲ್ಲವಾದಲ್ಲಿ ಉಪನಿರ್ದೇಶಕ [ಆಡಳಿತ] ಅವರ ಜ್ಞಾಪನದ ಪ್ರತಿಯನ್ನು ದೃಢೀಕರಿಸಿ ಸಮರ್ಥನೆಯೊಂದಿಗೆ ಸಂಬಂಧಿಸಿದ ಶಾಖಾಧಿಕಾರಿಗಳಿಗೆ ಕಳುಹಿಸಿ ವಿನಾಯಿತಿ ಪಡೆದುಕೊಳ್ಳುವುದು.
* ವಿದ್ಯಾರ್ಥಿಯ ಭಾವಚಿತ್ರ ಸಹಿ ಮತ್ತು ಇತರೆ ತಿದ್ದುಪಡಿಗಳಿದಲ್ಲಿ ಸೂಕ್ತ ದಾಖಲೆಗಳೊಂದಿಗೆ ಮಂಡಲಿಗೆ ಸಲ್ಲಿಸಿ ಸರಿಪಡಿಸಿಕೊಳ್ಳುವುದು. ಒಂದು ವೇಳೆ ಸರಿಪಡಿಸಿಕೊಳ್ಳದೇ ಇದ್ದಲ್ಲಿ ಇದರಿಂದ ವಿದ್ಯಾರ್ಥಿಗೆ ಮುಂದೆ ಅಂಕಪಟ್ಟಿಯಲ್ಲಾಗುವ ತೊಂದರೆಗೆ ಸಂಬಂಧಿಸಿದ ಶಾಲಾ ಮುಖ್ಯಸ್ಥರೇ ಜವಾಬ್ದಾರರಾಗಿದ್ದು, ಮಂಡಲಿಯು ಇದರ ಜವಾಬ್ದಾರಿ ಹೊರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
* ಯಾವುದೇ ವಿದ್ಯಾರ್ಥಿಯ ಭಾವಚಿತ್ರ ಬದಲಾವಣೆಗೆ ಸಂಬಂಧಿಸಿದಂತೆ, ಪರೀಕ್ಷೆಗೆ ಪೂರ್ವದಲ್ಲಿ ಮಾಡಲಾದ ಬದಲಾವಣೆಗಳನ್ನು ಮಾತ್ರ ಮಂಡಲಿಯು ಪರಿಗಣಿಸುತ್ತದೆ. ಪರೀಕ್ಷಾ ನಂತರದಲ್ಲಿ ಬರುವ ವಿದ್ಯಾರ್ಥಿಗಳ ಭಾವಚಿತ್ರ ಬದಲಾವಣೆ ಕುರಿತ ಯಾವುದೇ ಮನವಿಗಳನ್ನು ಮಂಡಲಿ ಪುರಸ್ಕರಿಸುವುದಿಲ್ಲ. ಇದಕ್ಕೆ ಸಂಬಂಧಿಸಿದ ಶಾಲಾ ಮುಖ್ಯಸ್ಥರು ಹಾಗೂ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರುಗಳು ನೇರ ಜವಾಬ್ದಾರರಾಗಿರುತ್ತಾರೆ. ಒಂದು ವೇಳೆ ಇದಕ್ಕೆ ವ್ಯತಿರಿಕ್ತವಾಗಿ ಬದಲಿ, ವಿದ್ಯಾರ್ಥಿ ಪರೀಕ್ಷೆ ಬರೆಯಲು ಸಹಕರಿಸಿ ಪರೀಕ್ಷಾ ಅವ್ಯವಹಾರದಲ್ಲಿ ಭಾಗಿಯಾಗಿದಲ್ಲಿ ಸಂಬಂಧಿಸಿದ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರ ಮತ್ತು ಶಾಲಾ ಮುಖ್ಯಸ್ಥರ ಮೇಲೆ ಕೆ.ಸಿ.ಎಸ್ (ಸಿ.ಸಿ.ಎ.) ನಿಯಮ-1957 ಮತ್ತು 1983ರ ಕರ್ನಾಟಕ ಶಿಕ್ಷಣ ಕಾಯ್ದೆ ಹಾಗೂ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಕಾಯ್ದೆ -1966 ರನ್ವಯ ಕ್ರಮ ಜರುಗಿಸಲಾಗುವುದು.
* ಒಂದೇ, ವಿದ್ಯಾರ್ಥಿಗೆ ಎರಡು ನೋಂದಣಿ ಸಂಖ್ಯೆಯ ಪ್ರವೇಶ ಪತ್ರಗಳು ಬಂದಿದ್ದಲ್ಲಿ ಒಂದನ್ನು ಉಳಿಸಿಕೊಂಡು ಮತ್ತೊಂದನ್ನು ರದ್ದುಪಡಿಸಿ ದೃಢೀಕರಿಸಿ ಸೂಕ್ತ ಷರಾದೊಂದಿಗೆ ಪರಿಶೀಲನಾ ಶಾಖೆಯ ಶಾಖಾಧಿಕಾರಿಗಳ ವಿಳಾಸಕ್ಕೆ ಹಿಂದಿರುಗಿಸುವುದು.
* CCERF, CCERR, CCEPF & CCEPR ಅಭ್ಯರ್ಥಿಗಳನ್ನು ಸಾಮಾನ್ಯ ಪರೀಕ್ಷಾ ಕೇಂದ್ರಗಳಲ್ಲಿ ಹಂಚಿಕೆ ಮಾಡಲಾಗಿರುತ್ತದೆ. ಶಾಲಾ ಮುಖ್ಯ ಶಿಕ್ಷಕರು ಸಂಬಂಧಿಸಿದ ವಿದ್ಯಾರ್ಥಿಗಳಿಗೆ ಈ ಕುರಿತು ಮಾಹಿತಿಯನ್ನು ನೀಡುವುದು.
* ವಿದ್ಯಾರ್ಥಿಗಳ ಅಂತಿಮ ಪ್ರವೇಶ ಪತ್ರಗಳಲ್ಲಿ ವಿದ್ಯಾಥಿಯ ಹೆಸರು, ತಂದೆ ಹೆಸರು, ತಾಯಿ ಹೆಸರು, ಭಾವಚಿತ್ರ, ಸಹಿ, ಇತರೆ ತಿದ್ದುಪಡಿಗಳಿದ್ದಲ್ಲಿ, CCERF ವಿದ್ಯಾರ್ಥಿಗಳಿಗೆ ಎಸ್.ಎ.ಟಿ.ಎಸ್ ನಲ್ಲಿ ತಿದ್ದುಪಡಿ ಮಾಡಿದ ಪ್ರತಿಯೊಂದಿಗೆ ಮತ್ತು ಇತರೆ ದಾಖಲೆಗಳೊಂದಿಗೆ ಪ್ರತಿ ತಿದ್ದುಪಡಿಗೆ ರೂ.100 ದಂಡ ಶುಲ್ಕ ಹಾಗೂ ಮಾಧ್ಯಮ ಬದಲಾವಣೆ ಇದಲ್ಲಿ ಪ್ರತಿ ತಿದ್ದುಪಡಿಗೆ ಮಂಡಲಿ ನಿಯಮ 1966ರ ನಿಯಮ 24ರಡಿ ರೂ. 500 ದಂಡ ಶುಲ್ಕವನ್ನು ನೆಫ್ಟ್ ಚಲನ್ ಮೂಲಕ ಪಾವತಿಸಿ ದಿನಾಂಕ 17.03.2025ರ ಸಂಜೆ 5 ಗಂಟೆಯೊಳಗೆ ಮಂಡಳಿಗೆ ತಲುಪುವಂತೆ ಪ್ರಸ್ತಾವನೆಯನ್ನು ಸಲ್ಲಿಸುವುದು.
* ಯಾವುದೇ ಅಭ್ಯರ್ಥಿಯು ತಿದ್ದುಪಡಿಗಳಿಗಾಗಿ ಮಂಡಲಿಗೆ ಪ್ರಸ್ತಾವನೆ ಸಲ್ಲಿಸಿದ್ದಲ್ಲಿ (ವಿಷಯ, ಮಾಧ್ಯಮ, ದೈಹಿಕ ಸ್ಥಿತಿ, ಭಾವಚಿತ್ರ ಹಾಗೂ ಸಹಿ) ಅಂತಹ ಅಭ್ಯರ್ಥಿಗಳ Updated Final Admission Ticket Final Admission Ticket for 2025 SSLC Exam- 1 (Student Wise) sub-menu ಬಳಸಿ ಡೌನ್ಲೋಡ್ ಮಾಡಿಕೊಳ್ಳಬೇಕು.
* ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಾಯ್ದೆ - 1966 ನಿಯಮ 36 ಮತ್ತು 37ರನ್ವಯ ಮಾನ್ಯತೆ ಪಡೆದ ಪ್ರೌಢಶಾಲೆಗಳ ವಿದ್ಯಾರ್ಥಿಗಳನ್ನು ಎಸ್ಎಸ್ಎಲ್ಸಿ ಪರೀಕ್ಷೆಗೆ ನೋಂದಾಯಿಸಲು ಅವಕಾಶವಿರುತ್ತದೆ. ಆದರೆ ಈ ದಿನಾಂಕದವರೆವಿಗೂ ಕೆಲವು ಪ್ರೌಢಶಾಲೆಗಳು 2024-25ನೇ ಸಾಲಿಗೆ ಮಾನ್ಯತೆ ನವೀಕರಣವಾಗದಿರುವುದು ಕಂಡುಬಂದಿರುತ್ತದೆ. ದಿನಾಂಕ 28.02.2025ರನ್ವಯ ಶಾಲಾ ಆಡಳಿತ ಮಂಡಲಿಗಳಿಗೆ ಮಾನ್ಯತೆ ನವೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಲು ದಿನಾಂಕ 20.03.2025ರವರೆಗೆ ಅವಕಾಶ ಕಲ್ಪಿಸಲಾಗಿರುತ್ತದೆ.
* ಪರೀಕ್ಷೆ -1 ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗದಂತೆ ಹಾಗೂ ಅವರ ಮುಂದಿನ ಶೈಕ್ಷಣಿಕ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಅಂತಹ ಶಾಲೆಗಳ ವಿದ್ಯಾರ್ಥಿಗಳನ್ನು ಪರೀಕ್ಷೆ-1ಕ್ಕೆ ಅದೇ ಶಾಲೆಯಿಂದ ಪರೀಕ್ಷೆಗೆ ಹಾಜರಾಗಲು ಪ್ರವೇಶ ಪತ್ರಗಳನ್ನು ಸರ್ಕಾರ ಅನುಮತಿಸಿರುವಂತೆ ಅದೇ ಶಾಲೆಗೆ ಬಿಡುಗಡೆ ಮಾಡಲಾಗಿದೆ. ಪರೀಕ್ಷೆ-1ರ ಫಲಿತಾಂಶವನ್ನು ಪಕಟಣೆಮಾಡುವ ದಿನಾಂಕದೊಳಗೆ ಮಾನ್ಯತೆ ನವೀಕರಣವಾಗದ ಶಾಲೆಗಳು 2024-25ನೇ ಸಾಲಿನ ಮಾನ್ಯತೆ ನವೀಕರಣ ಪ್ರತಿಯನ್ನು ಸಂಬಂಧಪಟ್ಟ ಪ್ರಾಧಿಕಾರದಿಂದ ಪಡೆದು ಸಲ್ಲಿಸಿದ್ದಲ್ಲಿ ಫಲಿತಾಂಶವನ್ನು ಅದೇ ಶಾಲೆಗೆ ಬಿಡುಗಡೆ ಮಾಡಲಾಗುವುದು.












Click it and Unblock the Notifications