Karnataka SSLC Result 2022 : ಎಸ್ಎಸ್ಎಲ್ಸಿ ಪರೀಕ್ಷೆ ಮುಕ್ತಾಯ; ಮೇ 2ನೇ ವಾರ ಫಲಿತಾಂಶ
ಬೆಂಗಳೂರು, ಏಪ್ರಿಲ್ 11; ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಮುಕ್ತಾಯಗೊಂಡಿದೆ. ಮಂಗಳವಾರದಿಂದ ಕೀ ಉತ್ತರಗಳನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ.
ಸೋಮವಾರ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಈ ಕುರಿತು ಟ್ವೀಟ್ ಮಾಡಿದ್ದಾರೆ. "ಎಸ್ಎಸ್ಎಲ್ಸಿ ಪರೀಕ್ಷೆ ಸುಸೂತ್ರವಾಗಿ ಮುಕ್ತಾಯಗೊಂಡಿದೆ. ನಾಳೆಯಿಂದ ಕೀ ಉತ್ತರಗಳನ್ನು ಎಸ್ಎಸ್ಎಲ್ಸಿ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ" ಎಂದು ಹೇಳಿದ್ದಾರೆ.
"ಮೇ 2ನೇ ವಾರದಲ್ಲಿ ಫಲಿತಾಂಶ ಪ್ರಕಟಿಸುವ ಗುರಿ ಹೊಂದಲಾಗಿದೆ. ಜೂನ್ ಕೊನೆ ವಾರದಲ್ಲಿ ಪೂರಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ" ಎಂದು ಸಚಿವ ಬಿ. ಸಿ. ನಾಗೇಶ್ ಟ್ವೀಟ್ನಲ್ಲಿ ಮಾಹಿತಿ ನೀಡಿದ್ದಾರೆ.

ಮಾರ್ಚ್ 28ರಿಂದ ಏಪ್ರಿಲ್ 11ರ ತನಕ ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆ ನಡೆದಿತ್ತು. ಕಳೆದ ಎರಡು ವರ್ಷಗಳ ಕಾಲ ಎಸ್ಎಸ್ಎಲ್ಸಿ ಪರೀಕ್ಷೆಗೆ ಕೋವಿಡ್ ಇನ್ನಿಲ್ಲದಂತೆ ಕಾಡಿತ್ತು. ಈ ವರ್ಷ ಪರೀಕ್ಷೆ ಅವಧಿಯಲ್ಲಿ ಯಾವುದೇ ವಿದ್ಯಾರ್ಥಿಗೆ ಕೋವಿಡ್ ಸೋಂಕು ಕಂಡು ಬಂದಿಲ್ಲ.
ಉಡುಪಿಯಲ್ಲಿ ಆರಂಭವಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಹಿಬಾಜ್ ವಿವಾದ ಸಹ ಪರೀಕ್ಷೆಗೆ ಯಾವುದೇ ರೀತಿಯ ಅಡ್ಡಿ ಉಂಟು ಮಾಡಿಲ್ಲ. ಸಮವಸ್ತ್ರ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದು, ವಿದ್ಯಾರ್ಥಿಗಳು ಆ ನಿಯಮಗಳನ್ನು ಪಾಲನೆ ಮಾಡಿದ್ದಾರೆ.
✅ ಎಸ್ಎಸ್ಎಲ್ಸಿ ಪರೀಕ್ಷೆ ಸುಸೂತ್ರವಾಗಿ ಮುಕ್ತಾಯಗೊಂಡಿದೆ.
— B.C Nagesh (@BCNagesh_bjp) April 11, 2022
✅ ನಾಳೆಯಿಂದ ಕೀ ಉತ್ತರಗಳನ್ನು ಎಸ್ಎಸ್ಎಲ್ಸಿ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ.
✅ ಮೇ 2ನೇ ವಾರದಲ್ಲಿ ಫಲಿತಾಂಶ ಪ್ರಕಟಿಸುವ ಗುರಿ ಹೊಂದಲಾಗಿದೆ.
✅ ಜೂನ್ ಕೊನೆ ವಾರದಲ್ಲಿ ಪೂರಕ ಪರೀಕ್ಷೆ ನಡೆಸಲಾಗುತ್ತದೆ.
ವಿಜಯಪುರದಲ್ಲಿ ಸೋಮವಾರ ಮಾತನಾಡಿದ ಸಚಿವ ಬಿ. ಸಿ. ನಾಗೇಶ್, "ಮಾರ್ಚ್ 28ರಂದು ಆರಂಭವಾದ ಎಸ್ಎಸ್ಎಲ್ಸಿ ಪರೀಕ್ಷೆ ರಾಜ್ಯಾದ್ಯಂತ ಸುಸೂತ್ರವಾಗಿ ಮುಕ್ತಾಯವಾಗಿದೆ. ಒಂದು ಪರೀಕ್ಷಾ ಕೇಂದ್ರದಲ್ಲಿ ಮಾತ್ರ ಅಕ್ರಮ ವರದಿಯಾಗಿದೆ" ಎಂದರು.
"ಅಕ್ರಮ ವರದಿಯಾದ ಕಡೆ ಕ್ರಮ ಕೈಗೊಳ್ಳಲಾಗಿದೆ. ಮೊದಲ ಬಾರಿಗೆ ಪರೀಕ್ಷಾ ಹಾಜರಾತಿ ಪ್ರಮಾಣ ಶೇ 98ಕ್ಕಿಂತ ಹೆಚ್ಚಿದೆ. ಏಪ್ರಿಲ್ 12ರಿಂದ ಕೀ ಉತ್ತರ, ಆಕ್ಷೇಪಣೆ ಕರೆಯುವುದು ಸೇರಿದಂತೆ ಇತರ ಪ್ರಕ್ರಿಯೆ ಆರಂಭವಾಗಲಿದೆ" ಎಂದು ಸಚಿವರು ತಿಳಿಸಿದರು.
ಮೌಲ್ಯ ಮಾಪನದ ಕುರಿತು; ಮಾರ್ಚ್/ ಏಪ್ರಿಲ್ ತಿಂಗಳಿನಲ್ಲಿ ನಡೆದ ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆ ಮೌಲ್ಯ ಮಾಪನದ ಕುರಿತು ಈಗಾಗಲೇ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಮೌಲ್ಯ ಮಾಪನ ಕೇಂದ್ರಗಳಲ್ಲಿ ಜಿಲ್ಲಾ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಮೌಲ್ಯ ಮಾಪನ ಕೇಂದ್ರದ ವ್ಯವಸ್ಥಾಪಕರು ನಿರ್ವಹಣೆ ಮಾಡಬೇಕಾದ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ತಿಳಿಸಲಾಗಿದೆ.
ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆಗಳ ಮೌಲ್ಯ ಮಾಪನ ಕಾರ್ಯವು ಜಿಲ್ಲಾ ಕೇಂದ್ರಗಳಲ್ಲಿ 22/4/2022ರಿಂದ ಆರಂಭವಾಗಲಿದೆ. ಮೌಲ್ಯ ಮಾಪನ ಕೇಂದ್ರಕ್ಕೆ ವ್ಯವಸ್ಥಾಪಕರು ಏಪ್ರಿಲ್ 18ರಂದು ಹಾಜರಾಗಬೇಕು.
ಜಂಟಿ ಮುಖ್ಯ ಮೌಲ್ಯ ಮಾಪಕರ ಸಭೆ ಏಪ್ರಿಲ್ 21ರಂದು ನಡೆಯಲಿದೆ. ಮೌಲ್ಯ ಮಾಪನ ಕೇಂದ್ರಕ್ಕೆ ಜಂಟಿ ಮುಖ್ಯ ಮೌಲ್ಯ ಮಾಪಕರು ಮತ್ತು ಉಪ ಮುಖ್ಯ ಮೌಲ್ಯ ಮಾಪಕರು ಏಪ್ರಿಲ್ 22ರಂದು ಹಾಜರಾಗಬೇಕಿದೆ. ಮೌಲ್ಯ ಮಾಪನ ಕೇಂದ್ರಕ್ಕೆ ಸಹಾಯಕ ಮೌಲ್ಯ ಮಾಪಕರು ಏಪ್ರಿಲ್ 23ರಂದು ಹಾಜರಾಗಬೇಕಿದೆ.
ಜಂಟಿ ಮೌಲ್ಯಮಾಪಕರ ಕರ್ತವ್ಯ ಮೌಲ್ಯಮಾಪನ ಮಾಡಿಸುವುದಕ್ಕೆ ಮಾತ್ರ ಸೀಮಿತವಾಗಿರುತ್ತದೆ. ವ್ಯವಸ್ಥಾಪಕರೇ ಕೇಂದ್ರದ ಹಾಗೂ ಭದ್ರತಾ ಕೊಠಡಿಯ ಬೀಗ ಮತ್ತು ಬೀಗದ ಕೀಗಳನ್ನು ತಮ್ಮ ನಿಯಂತ್ರಣಲ್ಲಿ ಇಟ್ಟುಕೊಳ್ಳಬೇಕು. ಮೌಲ್ಯಮಾಪನ ಕೇಂದ್ರಗಳ ಶಾಲಾ ಮುಖ್ಯಸ್ಥರಿಗೆ ಶಾಲಾ ಕಟ್ಟಡ, ಅಗತ್ಯ ಪಿಠೋಪಕರಣ ಹಾಗೂ ಭೌತಿಕ ಸೌಲಭ್ಯಗಳೊಂದಿಗೆ ಒಬ್ಬ ಶಾಲಾ ಗ್ರೂಪ್-ಡಿ ನೌಕರನನ್ನು ಮೌಲ್ಯಮಾಪನ ಕಾರ್ಯಕ್ಕೆ ಬಿಟ್ಟುಕೊಡಲು ಜಿಲ್ಲಾ ಉಪ ನಿರ್ದೇಶಕರು ಈಗಾಗಲೇ ಪತ್ರ ವ್ಯವಹಾರ ಮಾಡಿದ್ದಾರೆ.
ಅತ್ಯಂತ ತುರ್ತು ಸಂದರ್ಭದಲ್ಲಿ ಮಾತ್ರ ಮೌಲ್ಯ ಮಾಪನ ಕೇಂದ್ರದ ಬದಲಾವಣೆಗೆ ಉಪ ನಿರ್ದೇಶಕರ ಹಂತದಲ್ಲಿ ಕ್ರಮ ಕೈಗೊಂಡು ಬದಲು ಕೇಂದ್ರ ರಚಿಸಿ ಮಂಡಳಿಗೆ ತಕ್ಷಣವೇ ನೀಡಬೇಕು.












Click it and Unblock the Notifications