ಬೇರೆ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ ಸಿದ್ದರಾಮಯ್ಯ, ರಾಮುಲು, ಎಚ್ಡಿಕೆ!
ಬೆಂಗಳೂರು, ಮೇ 12: ಊರವರೆಲ್ಲಾ ಮತ ಹಾಕಿದರೂ ತಮ್ಮ ಮತ ತಮಗೇ ಹಾಕಿಕೊಳ್ಳಲಾಗದ ನತದೃಷ್ಟರೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮತ್ತು ಸಂಸದ ಬಿ. ಶ್ರೀರಾಮುಲು.
ಸಿಎಂ, ಎಚ್ಡಿಕೆ ಮತ್ತು ರಾಮುಲು ಮೂವರೂ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದರೂ ಎರಡೂ ಕ್ಷೇತ್ರಗಳಲ್ಲಿ ಮತ ಚಲಾಯಿಸಲು ಸಾಧ್ಯವಾಗಲಿಲ್ಲ. ಕಾರಣ ಮೂವರ ಮತವೂ ತಾವು ಸ್ಪರ್ಧಿಸುವ ಕ್ಷೇತ್ರಗಳಿಂದ ಹೊರಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಮತ್ತು ಬಾದಾಮಿಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಆದರೆ ಅವರ ಮತ ಇರುವುದು ವರುಣಾ ಕ್ಷೇತ್ರದ ಸಿದ್ದರಾಮನ ಹುಂಡಿಯಲ್ಲಿ. ಹಾಗಾಗಿ ಅವರು ಅವರು ತಮಗೆ ಮತ ಹಾಕಿಕೊಳ್ಳಲು ಸಾಧ್ಯವಾಗಲಿಲ್ಲ. ಇಂದು ಮಧ್ಯಾಹ್ನ ಸಿದ್ದರಾಮನಹುಂಡಿಗೆ ತೆರಳಿದ ಅವರು ಪುತ್ರ ಡಾ. ಯತೀಂದ್ರ ಜೊತೆಗೆ ತಮ್ಮ ಹಕ್ಕು ಚಲಾಯಿಸಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿಯವರದ್ದೂ ಇದೇ ಪರಿಸ್ಥಿತಿ. ರಾಮನಗರ ಮತ್ತು ಚನ್ನಪಟ್ಟಣ ಎರಡು ಕ್ಷೇತ್ರಗಳಲ್ಲಿ ಕುಮಾರಸ್ವಾಮಿ ಕಣಕ್ಕಿಳಿದಿದ್ದಾರೆ. ಆದರೆ ಅವರ ಮತ ಇರುವುದು ಮಾಗಡಿ ಕ್ಷೇತ್ರದಲ್ಲಿ. ಅವರು ಮಾಗಡಿಯ ಕೇತಗಾನಹಳ್ಳಿಯಲ್ಲಿ ಇಂದು ಪತ್ನಿ ಅನಿತಾ ಕುಮಾರಸ್ವಾಮಿ ಜೊತೆಗೆ ತೆರಳಿ ಇಂದು ಮಧ್ಯಾಹ್ನ ಮತ ಚಲಾಯಿಸಿದರು.
In Pics: ಕರ್ನಾಟಕದ ಭವ್ಯ ಭವಿತವ್ಯಕ್ಕಾಗಿ ಮತದಾನದ ಯಜ್ಞ
ರಾಮುಲು ಕೂಡ ಇವರಿಗಿಂತ ಭಿನ್ನವಾಗಿರಲಿಲ್ಲ. ಚಿತ್ರದುರ್ಗದ ಮೊಳಕಾಲ್ಮೂರು ಮತ್ತು ಬಾದಾಮಿ ಕ್ಷೇತ್ರದಿಂದ ಶ್ರೀರಾಮುಲು ಕಣಕ್ಕಿಳಿದಿದ್ದಾರೆ. ಆದರೆ ಅವರ ಮತ ಇರುವುದು ಬಳ್ಳಾರಿಯಲ್ಲಿ. ಹೀಗಾಗಿ ಇಂದು ಅವರು ಬಳ್ಳಾರಿಯಲ್ಲೇ ಮತ ಚಲಾಯಿಸಿದರು.
ಈ ಮೂಲಕ ತಮಗೆ ತಾವೇ ಮತ ಹಾಕುವ ಅವಕಾಶವನ್ನು ಈ ಮೂರೂ ಅಭ್ಯರ್ಥಿಗಳು ಕಳೆದುಕೊಂಡರು.












Click it and Unblock the Notifications