ಮಂಡ್ಯ ಜಿಲ್ಲೆಗೂ ಕೋಮು ಹಿಂಸೆ ನಿಗ್ರಹ ವಿಶೇಷ ಕಾರ್ಯಪಡೆ: ಸರ್ಕಾರ
ಪೊಲೀಸ್ ಇಲಾಖೆಯು ಜನಸ್ನೇಹಿಯಾಗಿ, ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಜನರಿಗೆ ಕೇಂದ್ರಿಕೃತವಾಗಿ ಕೆಲಸ ಮಾಡುತ್ತಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ತಿಳಿಸಿದ್ದಾರೆ. ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಹಾಗೂ ರೆನಾಲ್ಟ್ ನಿಸ್ಸಾನ್ ಟೆಕ್ನಾಲಜಿ ಮತ್ತು ಬಿಸಿನೆಸ್ ಸೆಂಟರ್ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ಬೆಂಗಳೂರು ನಗರ ಪೊಲೀಸ್ ಘಟಕಕ್ಕೆ 'ಹೈಜಿನ್ ಆನ್ ಗೋ' ವಾಹನಗಳ ಹಸ್ತಾಂತರ ಹಾಗೂ ಪೊಲೀಸ್ ಇಲಾಖೆಯ 'ಪ್ರಗತಿಯ ಸ್ತಂಭಗಳು' ಪುಸ್ತಕವನ್ನು ಬಿಡುಗಡೆಗೊಳಿಸಿದರು. ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು.
ಕಳೆದ ಎರಡು ವರ್ಷದಲ್ಲಿ ನಮ್ಮ ಸರ್ಕಾರ ಹಾಗೂ ಪೊಲೀಸ್ ಅನೇಕ ಸವಾಲುಗಳನ್ನು ಎದುರಿಸಿಕೊಂಡು ಬಂದಿದೆ. ಜನಸ್ನೇಹಿಯಾಗಿ ಕೆಲಸ ಮಾಡಬೇಕು ಎಂಬುದು ಪೊಲೀಸ್ ಇಲಾಖೆಯ ಉದ್ದೇಶ. ಯಾವುದೇ ಅಹಿತಕರ ಘಟನೆ ಆಗಬಾರದು. ಕಳೆದ ಎರಡು ವರ್ಷ ದ ಅವಧಿಯಲ್ಲಿ ಈ ನಿಟ್ಟಿನಲ್ಲೇ ಕೆಲಸ ಇಲಾಖೆ ಮಾಡಿದೆ ಎಂದು ಹೇಳಿದರು.

ಇಲಾಖೆಯಲ್ಲಿ ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಬದಲಾವಣೆಗಳನ್ನು ತಂದಿದ್ದೇವೆ. ರಾಜ್ಯದ ಪೊಲೀಸ್ ಇಲಾಖೆ ಸ್ನೇಹತ್ವದಿಂದ ಜನಗಳ ಕೆಲಸಗಳಾಗಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಲ್ಲಿ ಅನ್ಯರಿಗೆ ತೊಂದರೆಯಾಗಬಾರದು. ಬದಲಾದ ಪರಿಸ್ಥಿತಿಯಲ್ಲಿ ತಂತ್ರಜ್ಞಾನವನ್ನು ಉಪಯೋಗದಿಂದ ಅಪರಾಧಗಳನ್ನು ಕಂಡು ಹಿಡಿಯುವ ರೀತಿಯಲ್ಲಿ ಕೆಲಸ ಮಾಡಲಾಗಿದೆ ಎಂದರು.
ಕರ್ನಾಟಕ ಪೊಲೀಸ್ ನಾಗರಿಕರಿಗೆ ನ್ಯಾಯವನ್ನು ಒದಗಿಸುವುದರಲ್ಲಿ ಇಡೀ ದೇಶದಲ್ಲಿ ಮೊದಲನೇ ಸ್ಥಾನದಲ್ಲಿದೆ. ವಿವಿಧ ಮಾನದಂಡಗಳನ್ನು ಇಟ್ಟುಕೊಂಡು ಇಂಡಿಯಾ ಜಸ್ಟೀಸ್ ರಿಪೋರ್ಟ್ ಸಮೀಕ್ಷಾ ವರದಿ ನೀಡಿದೆ. 10 ಅಂಕಗಳಲ್ಲಿ ಕರ್ನಾಟಕಕ್ಕೆ 6.78 ಅಂಕಗಳನ್ನು ಪಡೆದು ಮೊದಲನೆಯ ಸ್ಥಾನ ಗಳಿಸಿದೆ. ಪೊಲೀಸ್ ಮತ್ತು ನ್ಯಾಯಾಂಗ ಎರಡು ಸಾಮ್ಯತೆಯಿಂದ ಕೆಲಸ ಮಾಡಿ, ವಿಶೇಷವಾಗಿ ಶೋಷಿತ ಸಮುದಾಯಗಳಿಗೆ ನ್ಯಾಯ ಕೊಡಿಸುವುದರಲ್ಲಿ ಮೊದಲನೇ ಸ್ಥಾನದಲ್ಲಿದೆ.
ನಮ್ಮ ಸರ್ಕಾರವು ಅನೇಕ ಬದಲಾವಣೆಗಳನ್ನು ತಂದಿದೆ. ದೇಶದಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ 33 ಡಿಸಿಆರ್ಇ ಠಾಣೆಗಳನ್ನು ಸ್ಥಾಪಿಸಲಾಗಿದೆ. ಡಿಸಿಆರ್ಇ ಅಧಿಕಾರಿಗಳು ಪ್ರತಿ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಈಗ ಪ್ರತ್ಯೇಕಗೊಳಿಸಿ ಎಸ್ಸಿ, ಎಸ್ಟಿ ಸಮುದಾಯಗಳ ಜನರ ಮೇಲಿನ ದೌರ್ಜನ್ಯ ತಡೆ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಲು ಅಧಿಕಾರ ನೀಡಲಾಗಿದೆ.
ದೇಶದಲ್ಲಿ ಬೇರೆ ಯಾವ ರಾಜ್ಯದಲ್ಲಿಯೂ ಡಿಸಿಆರ್ಇ ಪ್ರತ್ಯೇಕ ಪೊಲೀಸ್ ಠಾಣೆಗಳನ್ನು ಸ್ಥಾಪಿಸಿಲ್ಲ. ಜಿಲ್ಲೆಗಳ ಪೊಲೀಸ್ ಪ್ರಗತಿ ಪರಿಶೀಲನೆ ವೇಳೆ ಎಸ್ಸಿ, ಎಸ್ಟಿ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸುವುದಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದನ್ನು ಆದರಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು. ಎರಡು ಐಆರ್ಬಿ ಬೆಟಾಲಿಯನ್ ಸ್ಥಾಪಿಸಲಾಗುತ್ತಿದೆ. ಕೆಜಿಎಫ್ ಮತ್ತು ಆಹುತಿಯಲ್ಲಿ ಎರಡು ಐಆರ್ಬಿ ಬೆಟಾಲಿಯನ್ ಆರಂಭಿಸಿಲಾಗುವುದು ಎಂದಿದ್ದಾರೆ.
ಮಂಡ್ಯ ಜಿಲ್ಲೆಗೂ ಕಾರ್ಯಪಡೆ
ಕರಾವಳಿ ಭಾಗದಲ್ಲಿ ಕೊಲೆ, ಕೋಮು ಗಲಭೆಗಳು ನಡೆದವು. ಶಾಂತಿ ಇಲ್ಲದಂತಾಗಿತ್ತು. ಸಮಾಜದಲ್ಲಿ ದ್ವೇಷದ ಭಾವನೆ ಮೂಡುತ್ತಿರುವುದನ್ನು ಗಮನಿಸಿ, ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ವಿಶೇಷ ಕಾರ್ಯಪಡೆ (ಸ್ಪೆಷಲ್ ಆ್ಯಕ್ಷನ್ ಫೋರ್ಸ್) ಸ್ಥಾಪನೆ ಮಾಡಲಾಗಿದೆ. 300ಕ್ಕೂ ಹೆಚ್ಚು ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗಿದೆ.
ನಮಗೆ ಸಿಕ್ಕ ಮಾಹಿತಿ ಆಧರಿಸಿ ಮಂಡ್ಯ ಜಿಲ್ಲೆಗೂ ಸ್ಪೆಷಲ್ ಆ್ಯಕ್ಷನ್ ಫೋರ್ಸ್ ನೇಮಕ ಮಾಡಲಾಗಿದೆ. ಸ್ಪೆಷಲ್ ಆ್ಯಕ್ಷನ್ ಫೋರ್ಸ್ ನೇಮಕ ಮಾಡಿದ ಬಳಿಕ ಕರಾವಳಿ ಭಾಗದಲ್ಲಿ ಯಾವುದೇ ರೀತಿಯ ಕೊಲೆ, ಗಲಭೆಗಳಾಗಿಲ್ಲ. ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ. ಮೂರು ದಿನಗಳ ಹಿಂದೆ ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ಸರ್ಕಾರದ ಕಾರ್ಯವೈಖರಿ ಬಗ್ಗೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಯಿತು ಎಂದು ಹೇಳಿದ್ದಾರೆ.












Click it and Unblock the Notifications