ಜೂನ್ 3ರಂದು ಶಿಕ್ಷಕರಿಗೆ ವಿಶೇಷ ಸಾಂದರ್ಭಿಕ ರಜೆ, ಷರತ್ತುಗಳು
ಬೆಂಗಳೂರು, ಮೇ 30: ಕರ್ನಾಟಕ ವಿಧಾನ ಪರಿಷತ್ನ 6 ಸ್ಥಾನಗಳಿಗೆ ಜೂನ್ 3ರಂದು ಮತದಾನ ನಡೆಯುತ್ತಿದೆ. 3 ಶಿಕ್ಷಕ, 3 ಪದವೀಧರ ಕ್ಷೇತ್ರದ ಮತದಾನ ನಡೆಯಲಿದ್ದು, ಜೂನ್ 6ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಕರ್ನಾಟಕ ಸರ್ಕಾರ ಜೂನ್ 3ರ ಸೋಮವಾರ ವಿಧಾನ ಪರಿಷತ್ ಚುನಾವಣೆಗೆ ಮತದಾನ ಮಾಡಲು ಅನುಕೂಲವಾಗುವಂತೆ ಶಿಕ್ಷಕರಿಗೆ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿದೆ. ಅರ್ಹ ಮತದಾರರಿಗೆ ಸೀಮಿತವಾಗುವಂತೆ ಈ ರಜೆ ಅನ್ವಯವಾಗುತ್ತದೆ.

ಈ ಕುರಿತು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ವಿಜಯ್ ಕುಮಾರ್ ಹೆಚ್. ಬಿ. ಸರ್ಕಾರದ ಅಧೀನ ಕಾರ್ಯದರ್ಶಿ-1 ಸಿಆಸು ಇಲಾಖೆ (ರಾಜ್ಯ ಶಿಷ್ಟಾಚಾರ) ಆದೇಶ ಹೊರಡಿಸಿದ್ದಾರೆ.
ಆದೇಶದ ವಿವರ: ಆದೇಶದಲ್ಲಿ ದಿನಾಂಕ 3/06/2024ರ ಸೋಮವಾರದಂದು ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ದೈವಾರ್ಷಿಕ ಚುನಾವಣೆಯನ್ನು ಘೋಷಿಸಲಾಗಿರುತ್ತದೆ.
ಈ ಹಿನ್ನಲೆಯಲ್ಲಿ ವಿಧಾನ ಪರಿಷತ್ ಮತ ಕ್ಷೇತ್ರಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಹಾಗೂ ಅನುದಾನ ರಹಿತ ವಿದ್ಯಾ ಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಛೇರಿಗಳು, ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕುಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳು, ಉಳಿದ ಕೈಗಾರಿಕೆ ಸಂಸ್ಥೆಗಳು ಹಾಗೂ ಸಹಕಾರ ರಂಗದ ಸಂಘ ಸಂಸ್ಥೆಗಳಲ್ಲಿ ಎಲ್ಲಾ ವ್ಯವಹಾರಿಕ ಸಂಸ್ಥೆಗಳಲ್ಲಿ, ಔದ್ಯಮಿಕ ಸಂಸ್ಥೆಗಳಲ್ಲಿ ಮತ್ತು ಇತರ Establishmentಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುವ ಪದವೀಧರರು ಹಾಗೂ ಶಿಕ್ಷಕರು ಮತದಾನ ಮಾಡಲು ಅನುಕೂಲವಾಗುವಂತೆ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲಾಗಿದೆ.
ಅಂತಹ ಅರ್ಹ ಮತದಾರರಿಗೆ ಸೀಮಿತವಾದಂತೆ ಮತ ಚಲಾಯಿಸಲಿರುವ ಮತದಾರರಿಗೆ ದಿನಾಂಕ 3/6/2024ರ ಸೋಮವಾರದಂದು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಆದೇಶಿಸಿದೆ ಎಂದು ಆದೇಶ ಹೇಳಿದೆ. ಪರಿಷತ್ ಚುನಾವಣೆ ನಡೆಯುವ ಕ್ಷೇತ್ರ, ಜಿಲ್ಲೆಗಳ ವಿವರ ಹೀಗಿದೆ.
* ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರ. ಬೀದರ್, ಗುಲ್ಬರ್ಗ, ರಾಯಚೂರು, ಕೊಪ್ಪಳ, ಬಳ್ಳಾರಿ (ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕು ಒಳಗೊಂಡಂತೆ)
* ಕರ್ನಾಟಕ ನೈಋತ್ಯ ಪದವೀಧರ ಕ್ಷೆತ್ರ. ಶಿವಮೊಗ್ಗ (ದಾವಣಗೆರೆ ಜಿಲ್ಲೆಯ ಚನ್ನಗಿರಿ & ಹೊನ್ನಾಳಿ ತಾಲೂಕು ಒಳಗೊಂಡಂತೆ), ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಕೊಡಗು.
* ಬೆಂಗಳೂರು ಪದವೀಧರ ಕ್ಷೇತ್ರ. ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ.
* ಆಗ್ನೇಯ ಶಿಕ್ಷಕರ ಕ್ಷೇತ್ರ. ಚಿತ್ರದುರ್ಗ, ದಾವಣಗೆರೆ (ಚನ್ನಗಿರಿ, ಹೊನ್ನಾಳಿ & ಹರಪನಹಳ್ಳಿ ತಾಲೂಕುಗಳನ್ನು ಹೊರತುಪಡಿಸಿ), ತುಮಕೂರು, ಕೋಲಾರ.
* ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರ. ಶಿವಮೊಗ್ಗ (ದಾವಣಗೆರೆ ಜಿಲ್ಲೆಯ ಚನ್ನಗಿರಿ & ಹೊನ್ನಾಳಿ ತಾಲೂಕು ಒಳಗೊಂಡಂತೆ), ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಕೊಡಗು.
* ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ. ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ.
ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
* ನೈಋತ್ಯ ಪದವೀಧರ - ಆಯನೂರು ಮಂಜುನಾಥ (ಕಾಂಗ್ರೆಸ್), ಧನಂಜಯ ಸರ್ಜಿ (ಬಿಜೆಪಿ-ಜೆಡಿಎಸ್)
* ನೈಋತ್ಯ ಶಿಕ್ಷಕರ - ಕೆ. ಕೆ. ಮಂಜುನಾಥ (ಕಾಂಗ್ರೆಸ್), ಎಲ್. ಭೋಜೇಗೌಡ (ಜೆಡಿಎಸ್-ಬಿಜೆಪಿ)
* ಆಗ್ನೇಯ ಶಿಕ್ಷಕರ - ವೈ. ಎ. ನಾರಾಯಣ ಸ್ವಾಮಿ (ಬಿಜೆಪಿ-ಜೆಡಿಎಸ್), ಡಿ. ಟಿ. ಶ್ರೀನಿವಾಸ್ (ಕಾಂಗ್ರೆಸ್)
* ಈಶಾನ್ಯ ಪದವೀಧರ - ಚಂದ್ರಶೇಖರ ಬಸವರಾಜ (ಕಾಂಗ್ರೆಸ್), ಅಮರನಾಥ ಪಾಟೀಲ (ಬಿಜೆಪಿ-ಜೆಡಿಎಸ್)
* ಬೆಂಗಳೂರು ಪದವೀಧರ - ರಾಮೋಜಿ ಗೌಡ (ಕಾಂಗ್ರೆಸ್), ಅ. ದೇವೇಗೌಡ (ಬಿಜೆಪಿ-ಜೆಡಿಎಸ್)
* ದಕ್ಷಿಣ ಶಿಕ್ಷಕ - ಮರಿತಿಬ್ಬೇಗೌಡ (ಕಾಂಗ್ರೆಸ್), ಕೆ. ವಿವೇಕಾನಂದ (ಜೆಡಿಎಸ್-ಬಿಜೆಪಿ)












Click it and Unblock the Notifications