ಭೂಕಬಳಿಕೆ ವಿಚಾರಣೆಗೆ ವಿಶೇಷ ಕೋರ್ಟ್ ಸ್ಥಾಪನೆ
ಬೆಂಗಳೂರು, ಮಾರ್ಚ್ 24 : ಭೂಕಬಳಿಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಎಚ್.ಎನ್.ನಾರಾಯಣ್ ಅವರ ಅಧ್ಯಕ್ಷತೆಯಲ್ಲಿ ವಿಶೇಷ ನ್ಯಾಯಾಲಯವನ್ನು ರಚನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತು ಮಾತನಾಡಿರುವ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು, 'ಒಂದು ತಿಂಗಳವೊಳಗೆ ವಿಶೇಷ ನ್ಯಾಯಾಲಯವನ್ನು ಅಸ್ತಿತ್ವಕ್ಕೆ ತಂದು ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು. ಇದು ಕರ್ನಾಟಕ ಭೂಕಬಳಿಕೆ ತಡೆ ಕಾಯ್ದೆ 2011ರ ಸೆಕ್ಷನ್ 7ರ ಅಡಿ ಬರುವ ಎಲ್ಲ ಪ್ರಕರಣಗಳ ವಿಚಾರಣೆ ನಡೆಸಲಿದೆ' ಎಂದು ಹೇಳಿದ್ದಾರೆ. [ಭೂಗಳ್ಳರ ವಿರುದ್ಧದ ಕಾಯ್ದೆಗೆ ರಾಷ್ಟ್ರಪತಿ ಒಪ್ಪಿಗೆ]

'ಈ ವಿಶೇಷ ನ್ಯಾಯಾಲಯ ಬೆಂಗಳೂರನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು ಕಾರ್ಯನಿರ್ವಹಣೆ ಮಾಡಲಿದೆ. ಇಲ್ಲಿ ದಾಖಲಾಗುವ ಪ್ರಕರಣಗಳ ಸಂಖ್ಯೆ ನೋಡಿಕೊಂಡು, ಅಗತ್ಯ ಬಿದ್ದರೆ ಹೆಚ್ಚುವರಿ ನ್ಯಾಯಾಲಯಗಳನ್ನು ಹಾಗೂ ವಿಭಾಗೀಯ ಪೀಠಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ' ಎಂದು ಸಚಿವರು ಹೇಳಿದರು. [ಭೂ ಒತ್ತುವರಿ ತೆರವಿಗೆ ಕ್ರಮ]
ಈ ವಿಶೇಷ ನ್ಯಾಯಾಲಯದಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ರಾಯಪ್ಪ ಹನುಮಂತಪ್ಪ ರೆಡ್ಡಿ ಮತ್ತು ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಬಾಲಕೃಷ್ಣ ಬಿ ಅವರು ನ್ಯಾಯಿಕ ಸದಸ್ಯರಾಗಿರುತ್ತಾರೆ. ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಆಯುಕ್ತ ಮನೀಶ್ ಮೌದ್ಗಿಲ್, ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಗಳಾದ ಹಪ್ಸಿಬಾರಾಣಿ ಕೊರ್ಲಾಪಾಟಿ ಅವರು ಕಂದಾಯ ಸದಸ್ಯರಾಗಿರುತ್ತಾರೆ.
ವಿಶೇಷ ಕೋರ್ಟ್ ಏಕೆ? : ಭೂಕಬಳಿಕೆ ಎಂದು ಆಪಾದಿಸಲಾದ ಯಾವುದೇ ಕೃತ್ಯದ ಶೀಘ್ರ ವಿಚಾರಣೆಗೆ ಮತ್ತು ಕಬಳಿಸಲಾದ ಭೂಮಿಯ ಒಡೆತನ ಮತ್ತು ಕಬಳಿಸಲಾದ ಹಕ್ಕು ಸ್ವಾಮ್ಯಕ್ಕೆ ಅಥವಾ ಕಾನೂನು ಸಮ್ಮತ ಸ್ವಾಧೀನತೆಗೆ ಸಂಬಂಧಪಟ್ಟ ಮೊಕದ್ದಮೆಗಳ ಮತ್ತು ಕರ್ನಾಟಕ ಭೂಕಂದಾಯ ಅಧಿನಿಯಮ, 1964ರ XIV-ಎ ಅಧ್ಯಾಯದಲ್ಲಿ ನಿರ್ಧಿಷ್ಟಪಡಿಸಲಾದಂಥ ಅಪರಾಧಗಳ ಅಧಿವಿಚಾರಣೆ ನಡೆಸುವುದಕ್ಕೆ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಲಾಗಿದೆ.

ಕರ್ನಾಟಕ ಭೂಕಬಳಿಕೆ ನಿಷೇಧ ಅಧಿನಿಯಮ, 2011ರ ಕಲಂ 7(1)ರಲ್ಲಿ ಅವಕಾಶ ಕಲ್ಪಿಸಲಾದಂತೆ, ಸದರಿ ಅಧಿನಿಯಮದ ಕಲಂ 7ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸರ್ಕಾರ ವಿಶೇಷ ನ್ಯಾಯಾಲಯವನ್ನು ರಚಿಸುವಂತೆ ಆದೇಶ ಹೊರಡಿಸಿದೆ.












Click it and Unblock the Notifications