ವರುಣ ಈ ಬಾರಿ ಬೇಗನೆ ಬರುತ್ತಿದ್ದಾನೆ, ಸ್ವಾಗತ ಕೋರಿರಿ
ನವದೆಹಲಿ, ಮೇ 13: ಈ ಬಾರಿ ನೈರುತ್ಯ ಮಾನ್ಸೂನ್ ಮಾರುತಗಳು ಕೊಂಚ ಮುಂಚಿತವಾಗಿಯೇ ಆಗಮಿಸಲಿದ್ದು ಸ್ವಾಗತ ಮಾಡಲು ಸಿದ್ಧತೆ ಮಾಡಿಕೊಳ್ಳಬೇಕಿದೆ. ಸ್ಕೈ ಮೆಟ್ ವೆದರ್ ಹೇಳಿರುವಂತೆ ಮಾನ್ಸೂನ್ ಮಾರುತಗಳು ಮೇ 28 ಅಥವಾ 30ಕ್ಕೆ ಕೇರಳವನ್ನು ಪ್ರವೇಶ ಮಾಡಲಿವೆ.[ಈ ಬಾರಿ ವಾಡಿಕೆಗಿಂತ ಹೆಚ್ಚು ಸುರಿಯಲಿದೆ ಮುಂಗಾರು ಮಳೆ]
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕ್ಕೆ ಮಾನ್ಸೂನ್ ಮಾರುತಗಳು ಮೇ 15 ಕ್ಕೆ ಪ್ರವೇಶ ಪಡೆದುಕೊಳ್ಳಲಿವೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ನಿಗದಿಯಂತೆ ಮಾನ್ಸೂನ್ ಕೇರಳಕ್ಕೆ ಮೇ 28 ರಂದು ಆಗಮನ ಪಡೆದುಕೊಳ್ಳಲಿದೆ. ನಂತರ ದಕ್ಷಿಣ ಭಾರತದ ಕಡೆ ಆಗಮಿಸಲಿದ್ದು ಮಳೆ ಆರ್ಭಟಿಸಲಿದೆ.
ಕಳೆದ ಎರಡು ವರ್ಷಗಳಿಂದ ಮುಂಗಾರು ಮಳೆ ಕೈ ಕೊಡುತ್ತಿದೆ. ಆದರೆ ಈ ಬಾರಿ ಉತ್ತಮ ಮಳೆಯಾಗಲಿದ್ದು ಶೇ. 94 ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.[ಚಿತ್ರಗಳು : ಮುಂಗಾರು ಮಳೆ ತಂದ ಸಂತಸ, ಸಂಕಷ್ಟ]
ಕಳೆದ ಕೆಲ ದಿನಗಳಿಂದ ರಾಜ್ಯದ ವಿವಿಧೆಡೆ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದೆ. ಉತ್ತರ ಕರ್ನಾಟಕದ ಹಲವೆಡೆಯೂ ಮಳೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಕಳೆದ ವಾರ ಮಳೆಯಾಗಿತ್ತು.