ದುರ್ಬಲಗೊಂಡ ಮುಂಗಾರು, ಆಗುಂಬೆಯಲ್ಲಿ ಮಾತ್ರ ಭಾರೀ ಮಳೆ
ಬೆಂಗಳೂರು, ಜುಲೈ 28: ಅಬ್ಬರಿಸಿ ಬೊಬ್ಬಿರಿದಿದ್ದ ನೈರುತ್ಯ ಮುಂಗಾರು ಮಾರುತಗಳು ಮತ್ತೆ ಕರಾವಳಿ ಕರ್ನಾಟಕ ಮತ್ತು ಉತ್ತರ ಒಳನಾಡು ಕರ್ನಾಟಕ ಭಾಗದಲ್ಲಿ ದುರ್ಬಲವಾಗಿವೆ. ಆದರೆ ದಕ್ಷಿಣ ಒಳನಾಡಿನಲ್ಲಿ ಮಳೆ ಸುರಿಯುತ್ತಿದ್ದು ದಕ್ಷಿಣದ ಚಿರಾಪುಂಜಿ ಆಗುಂಬೆಯಲ್ಲಿ ಧಾರಾಕಾರ ಮಳೆಯಾಗಿದೆ.
ಕಳೆದ 24 ಗಂಟೆಗಳಲ್ಲಿ ಆಗುಂಬೆಯಲ್ಲಿ 9 ಸೆಂಟಿ ಮೀಟರ್ ಮಳೆಯಾಗಿದೆ. ಇನ್ನು ದಕ್ಷಿಣ ಕನ್ನಡದ ಮೂಡಬಿದಿರೆ, ಕೊಡಗಿನ ಭಾಗಮಂಡಲದಲ್ಲಿ ತಲಾ 5 ಸೆಂಟಿ ಮೀಟರ್ ಮಳೆ ಬಿದ್ದಿದ್ದರೆ, ದಕ್ಷಿಣ ಕನ್ನಡದ ಸುಳ್ಯ, ಉತ್ತರ ಕನ್ನಡದ ಗೇರುಸೊಪ್ಪಾದಲ್ಲಿ ತಲಾ 4 ಸೆಂಟಿ ಮೀಟರ್ ಮಳೆ ಬಿದ್ದಿದೆ.

ಕೊಡಗಿನ ಮಡಿಕೇರಿ, ಸೋಮವಾರಪೇಟೆ, ಶಿವಮೊಗ್ಗದ ತಳಗುಪ್ಪ, ಚಿಕ್ಕಮಗಳೂರಿನ ಶೃಂಗೇರಿ, ಜಯಪುರಿ, ಕಮ್ಮಾರಡಿಯಲ್ಲಿ 3 ಸೆಂ.ಮೀ, ದಕ್ಷಿಣ ಕನ್ನಡದ ಧರ್ಮಸ್ಥಳ, ಪುತ್ತೂರು, ಉಡುಪಿಯ ಕುಂದಾಪುರ, ಕೊಲ್ಲೂರು, ಉತ್ತರ ಕನ್ನಡದ ಮಂಕಿ, ಕೊಡಗಿನ ನಾಪೋಕ್ಲು, ಚಿಕ್ಕಮಗಳೂರಿನ ಕೊಪ್ಪ, ಕೋಲಾರ, ಬೆಂಗಳೂರಿನ ಕೆಎಎಲ್ ನಲ್ಲಿ ತಲಾ 2 ಸೆಂ.ಮೀ ಮಳೆ ಬಿದ್ದಿದೆ.
ಇನ್ನು ದಕ್ಷಿಣ ಕನ್ನಡದ ಪಣಂಬೂರು, ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಉಡುಪಿಯ ಕೋಟ, ಉತ್ತರ ಕನ್ನಡದ ಹೊನ್ನಾವರ, ಶಿರಾಲಿ, ಕದ್ರ, ಕೊಡಗಿನ ವಿರಾಜಪೇಟೆ, ಶಿವಮೊಗ್ಗದ ಲಿಂಗನಮಕ್ಕಿ, ಹೊಸನಗರ, ಚಿಕ್ಕಮಗಳೂರಿನ ಕೊಟ್ಟಿಗೆಹಾರ, ಬಾಳೆ ಹೊನ್ನೂರು, ಹಾಸನದ ಅರಕಲಗೂಡು, ಕೋಣನೂರು, ಹಳ್ಳಿಮೈಸೂರು ಮತ್ತು ಬೆಂಗಳೂರು ನಗರದಲ್ಲಿ ತಲಾ 1 ಸೆಂಟಿ ಮೀಟರ್ ಮಳೆಯಾಗಿದೆ.












Click it and Unblock the Notifications