BREAKING: ಹೈಕಮಾಂಡ್ ಬುಲಾವ್ ಬುಲಾವ್ ಹಿನ್ನೆಲೆ ದಿಢೀರ್ ದೆಹಲಿಗೆ ತೆರಳಿದ ಸಚಿವ ಶ್ರೀರಾಮುಲು!
ಬೆಂಗಳೂರು, ಜು. 21: ಮಹತ್ವದ ಬೆಳವಣಿಗೆಯಲ್ಲಿ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರಿಗೆ ಹೈಕಮಾಂಡ್ ಬುಲಾವ್ ಮಾಡಿದೆ. ದೆಹಲಿಗೆ ಬರುವಂತೆ ಬಿಜೆಪಿ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸಚಿವ ಶ್ರೀರಾಮುಲು ಅವರು ದೆಹಲಿಗೆ ತೆರಳಿದ್ದಾರೆ. ನಿನ್ನೆ ತಡರಾತ್ರಿ ಹೈಕಮಾಂಡ್ ದೂರವಾಣಿ ಕರೆಮಾಡಿ ದೆಹಲಿಗೆ ಬರುವಂತೆ ಶ್ರೀರಾಮುಲು ಅವರಿಗೆ ಸೂಚಿಸಿತ್ತು ಎಂಬ ಖಚಿತ ಮಾಹಿತಿ 'ಒನ್ಇಂಡಿಯಾ ಕನ್ನಡ'ಕ್ಕೆ ಸಿಕ್ಕಿದೆ.
ಹೈಕಮಾಂಡ್ ಸೂಚನೆಯಂತೆ ಇಂದು ಬೆಳಗ್ಗೆ 5.30ರ ವಿಮಾನದಲ್ಲಿ ಶ್ರೀರಾಮುಲು ಅವರು ದೆಹಲಿಗೆ ತೆರಳಿದ್ದಾರೆ. ಬಳಿಕ ಹೈಕಮಾಂಡ್ ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ ದೆಹಲಿಯಲ್ಲಿ ಶ್ರೀರಾಮುಲು ಅವರು ಯಾರ್ಯಾರನ್ನು ಭೇಟಿ ಮಾಡಿದ್ದಾರೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಶ್ರೀರಾಮುಲು ಭೇಟಿ ಮಾಡಿರಬಹುದು ಎನ್ನಲಾಗುತ್ತಿದೆ.
ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ವಿಚಾರ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ದೆಹಲಿ ಭೇಟಿ ಸಂದರ್ಭದಲ್ಲಿ ನನಗೇ ಯಾರೂ ರಾಜೀನಾಮೆ ಕೊಡುವಂತೆ ಹೇಳಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಖಡಕ್ ಹೇಳಿದ್ದರು. ಆದರೆ ನಿನ್ನೆ ವಿವಿಧ ಮಠಾಧೀಶರ ಭೇಟಿ ಸಂದರ್ಭದಲ್ಲಿ ಹೈಕಮಾಂಡ್ ತೀರ್ಮಾನದಂತೆ ನಡೆದುಕೊಳ್ಳುತ್ತೇನೆ ಎಂಬ ಅಚ್ಚರಿಯ ಮಾತುಗಳನ್ನು ಆಡಿದ್ದಾರೆ. ಹೀಗಾಗಿ ಜುಲೈ 26ರಂದು ರಾಜ್ಯ ಬಿಜೆಪಿ ನಾಯಕತ್ವದ ಬದಲಾವಣೆ ಖಚಿತವಾಗುತ್ತಿದೆ. ಇದೇ ಸಂದರ್ಭದಲ್ಲಿ ಶ್ರೀರಾಮುಲು ಅವರನ್ನು ದೆಹಲಿಗೆ ಕರೆಯಿಸಿಕೊಂಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಈಗಾಗಲೇ ಬಿಜೆಪಿ ಹೈಕಮಾಂಡ್ಗೆ ರವಾನೆಯಾಗಿರುವ ಐವರು ಸಂಭವನೀಯ ನಾಯಕರ ಪಟ್ಟಿಯಲ್ಲಿ ಸಚಿವ ಶ್ರೀರಾಮುಲು ಅವರ ಹೆಸರೂ ಇದೆ ಎನ್ನಲಾಗಿದೆ. ಹೀಗಾಗಿ ಯಾವ ಕಾರಣಕ್ಕಾಗಿ ಬಿಜೆಪಿ ಹೈಕಮಾಂಡ್ ಶ್ರೀರಾಮುಲು ಅವರಿಗೆ ಬುಲಾವ್ ಮಾಡಿತ್ತು ಎಂಬುದು ನಿಗೂಢವಾಗಿದೆ.












Click it and Unblock the Notifications