ಸಾಮಾಜಿಕ ಜಾಲತಾಣಗಳಿಂದ ಭಾರತದ ಬದಲಾವಣೆ : ನಿರ್ಮಲಾ ಸೀತಾರಾಮನ್
ಬೆಂಗಳೂರು, ಆಗಸ್ಟ್ 6: "ಸಾಮಾಜಿಕ ಜಾಲತಾಣಗಳು ಮುಖ್ಯವಾಹಿನಿ ಮಾಧ್ಯಮಗಳ ಅಜೆಂಡಾ ನಿರ್ಧರಿಸಬೇಕು. ಭಾರತದ ಬದಲಾವಣೆಯಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರ ಪ್ರಮುಖವಾದುದು," ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಅರಮನೆ ಮೈದಾನದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಆರಂಭ
ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿಯ ಸಾಮಾಜಿಕ ಜಾಲತಾಣಗಳ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಉಸ್ತುವಾರಿ ಬಿ ಮುರಳೀಧರ್ ರಾವ್, "ನವ ಭಾರತ ನಿರ್ಮಾಣಕ್ಕೆ ಸಾಮಾಜಿಕ ಜಾಲತಾಣಗಳು ಪ್ರಮುಖ ಉಪಕರಣಗಳಾಗಿವೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಈ ಸಾಮಾಜಿಕ ಜಾಲತಾಣಗಳನ್ನು ಸೂಕ್ತವಾಗಿ ಬಳಸೋಣ," ಎಂದರು.
"ಕರ್ನಾಟಕದಲ್ಲಿ ಬಿಜೆಪಿ ಸರಕಾರ ರಚಿಸಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ. ಭ್ರಷ್ಟಾಚಾರ ಮತ್ತು ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ವಿರುದ್ಧ ಸಂಘಟಿತವಾಗಿ ಹೋರಾಡೋಣ," ಎಂದು ಇದೇ ವೇಳೆ ಮುರಳೀಧರ್ ರಾವ್ ಕಾರ್ಯಕರ್ತರಿಗೆ ಕರೆ ನೀಡಿದರು.
ನಂತರ ಮಾತನಾಡಿದ ಕೇಂದ್ರ ಸಚಿವ ಅನಂತ್ ಕುಮಾರ್, "ದೊಡ್ಡ ಮಟ್ಟಕ್ಕೆ ಸಾಮಾಜಿಕ ಜಾಲತಾಣಗಳ ಸೈನಿಕರು ಬಂದು ಸೇರಿದ್ದೀರಿ. ನಿಮ್ಮನ್ನು ನೋಡುವಾಗ ಖುಷಿಯಾಗುತ್ತದೆ. ಸೂಕ್ತ ವಿಷಯಗಳ ಜತೆ ಜನರನ್ನು ತಲುಪಿ," ಎಂದು ಕಾರ್ಯಕರ್ತರಿಗೆ ಸೂಚನೆ ನೀಡಿದರು.
ಇನ್ನು ಸಮಾರಂಭದಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ"ನಮ್ಮ ಗುರಿ ಸ್ಪಷ್ಟವಾಗಿದೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಎಲ್ಲಾ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳೋಣ. ಆದರೆ ಬಳಸಿಕೊಳ್ಳುವ ವಸ್ತುಗಳಲ್ಲಿ ಪಾರದರ್ಶಕವಾಗಿರಲಿ," ಎಂದು ಹೇಳಿದರು.
"ಇವತ್ತು ಚುನಾವಣಾ ಯುದ್ಧ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲೇ ನಡೆಯುತ್ತಿದೆ. ಇವತ್ತು ಇಲ್ಲಿ ಸೇರಿರುವ ಅಪಾರ ಜನಸ್ತೋಮ ರಾಜ್ಯದಲ್ಲಿ ಬಿಜೆಪಿಯ ಶಕ್ತಿಯನ್ನು ತೋರಿಸುತ್ತಿದೆ," ಎಂದು ಬಿಜೆಪಿ ರಾಷ್ಟ್ರೀಯ ಐಟಿ ಘಟಕದ ಮುಖ್ಯಸ್ಥೆ ಅಮಿತ್ ಮಾಲ್ವಿಯಾ ಹೇಳಿದರು.
ಇದಾದ ನಂತರ ಅತಿಥಿಗಳ ಜತೆ ಪ್ಯಾನಲ್ ಡಿಸ್ಕಷನ್ ನಡೆಯಿತು. ಸಾವಿರಾರು ಬಿಜೆಪಿ ಕಾರ್ಯಕರ್ತರು ಈ ಸಂದರ್ಭ ಉಪಸ್ಥಿತರಿದ್ದರು.