ಸ್ನೇಕ್ ಆರೀಫ್ ಮಾತು ಕೇಳಿ ಮೊಟ್ಟೆ ಹೊರತೆಗೆಯಿತೇ ಹಾವು?
ಚಿಕ್ಕಮಗಳೂರು, ಮಾರ್ಚ್ 12: ಹಾವು ಹಿಡಿಯಲು ಬಂದಾತ ಹಾಕು ಮೊಟ್ಟೆ ಹೊರಕ್ಕೆ ಎಂದಂತೆಲ್ಲಾ ಮೊಟ್ಟೆ ನುಂಗಿದ್ದ ಹಾವು ಒಂದೊಂದಾಗಿ ಮೂರು ಮೊಟ್ಟೆಯನ್ನು ವಾಂತಿ ಮಾಡಿದ ದೃಶ್ಯದ ವಿಡಿಯೋ ಇದೀಗ ವೈರಲ್ ಆಗಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕುಂದೂರು ಗ್ರಾಮದ ಚಂದ್ರು ಅವರ ಮನೆಗೆ ನಾಗರ ಹಾವೊಂದು ಬಂದು ಅಡಿಗೆಗೆಂದು ತಂದಿಟ್ಟಿದ್ದ ಮೂರು ಕೋಳಿ ಮೊಟ್ಟೆಗಳನ್ನು ನುಂಗಿ ಬಿಟ್ಟಿದೆ.
ಮೊಟ್ಟೆ ನುಂಗಿದ ಹಾವು ತೆವಳಲಾರದೆ ಸುಸ್ತಾಗಿ ಅಲ್ಲಿಯೆ ಮಲಗಿ ಬಿಟ್ಟಿತ್ತು, ಇದನ್ನು ಕಂಡ ಮನೆಯವರು ಉರಗ ರಕ್ಷಕ ಸ್ನೇಕ್ ಆರೀಫ್ಗೆ ಕರೆ ಮಾಡಿ ಕರೆಸಿದ್ದಾರೆ. ಆರೀಫ್ ಅವರು ನಾಗರ ಹಾವನ್ನು ಮನೆಯಿಂದ ಹೊರಗೆ ತಂದು ಕೆಲ ಕಾಲ ಆಟವಾಡಿಸಿದ್ದಾರೆ.
ಹೊಟ್ಟೆ ಸೇರಿದ್ದ ಮೊಟ್ಟೆಗಳಿಂದಾಗಿ ಅಲ್ಲಿಂದಲೂ ಕದಲಾಗದ ಹಾವು ಕೊನೆಗೆ ತಿಂದ ಮೊಟ್ಟೆಗಳನ್ನು ಅಲ್ಲಿಯೇ ವಾಂತಿ ಮಾಡಿ ತಪ್ಪಿಕೊಳ್ಳಲು ಪ್ರಯತ್ನಿಸಿದೆ ಆದರೆ ಉರಗ ಪ್ರೇಮಿ ಆರೀಫ್ ಹಾವನ್ನು ಸಂರಕ್ಷಿಸಿ ಸುರಕ್ಷಿತವಾಗಿ ಚಾರ್ಮಾಡಿ ಕಾಡಿಗೆ ಬಿಟ್ಟಿದ್ದಾರೆ.
ಸ್ನೇಕ್ ಆರೀಫ್ ಅವರು ಮೊಟ್ಟೆ ಹೊರ ಹಾಕು ಎಂದು ಹೇಳುವುದಕ್ಕೂ ಹಾವು ಮೊಟ್ಟೆಗಳನ್ನು ವಾಂತಿ ಮಾಡುವುದಕ್ಕೂ ಒಂದೇ ಆಗಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.