SM Krishna Death: ಮಂಡ್ಯದಲ್ಲಿ ಶಾಲೆಗಳು ಬಂದ್, ನಾಳೆ ರಾಜ್ಯಾದ್ಯಂತ ರಜೆ ಘೋಷಣೆ
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ರಾಜಕಾರಣಿ ಎಸ್ಎಂ ಕೃಷ್ಣ ಅವರು ಇಂದು (ಡಿಸೆಂಬರ್ 10) ಮುಂಜಾನೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾದರು. ಎಸ್ಎಂ ಕೃಷ್ಣ(92) ಅವರು ವಯೋಸಹಜ ಕಾಯಿಲೆಯಿಂದ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಕರ್ನಾಟಕದ ಧೀಮಂತ ದಿವಂಗತ ರಾಜಕಾರಣಿಗೆ ಗೌರವಾರ್ಥವಾಗಿ ನಾಳೆ ರಾಜ್ಯಾದ್ಯಂತ ರಜೆ ಘೋಷಣೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, 'ಎಸ್ಎಂ ಕೃಷ್ಣ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ನಾಳೆ ರಾಜ್ಯಾದ್ಯಂತ ರಜೆ ಘೋಷಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ನಾಳೆ 8 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ನಂತರ ಮದ್ದೂರಿಗೆ ಬೆಳಗ್ಗೆ 10ಗಂಟೆಗೆ ಕರೆದುಕೊಂಡು ಹೋಗಲಾಗುತ್ತದೆ. ಮಧ್ಯಾಹ್ನ 3ಗಂಟೆವರೆಗೂ ದರ್ಶನಕ್ಕೆ ಅವರ ಪಾರ್ಥೀವ ಶರೀರವನ್ನು ಇಡಲಾಗುತ್ತದೆ. ನಂತರ ಸರ್ಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರ ಮಾಡಲಾಗುತ್ತದೆ. ಮಂಡ್ಯ, ಮೈಸೂರು ಹಾಗೂ ಸುತ್ತಮುತ್ತಲಿನ ಜನ ಬಂದು ದರ್ಶನ ಪಡೆಯಬಹುದು. ಇದನ್ನು ನಾನು ಕುಟುಂಬದ ಪರವಾಗಿ ಹಾಗೂ ಸರ್ಕಾರದ ಪರವಾಗಿ ಹೇಳುತ್ತಿದ್ದೇನೆ' ಎಂದು ಹೇಳಿದರು.

ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೂ ರಜೆ ಘೋಷನೆ ಮಾಡಲಾಗಿದೆ. ಇನ್ನೂ ಮಧ್ಯಾಹ್ನ ಒಂದು ಗಂಟೆವರೆಗೂ ಮಾತ್ರ ಬೆಳಗಾವಿ ಕಲಾಪ ಇರುತ್ತದೆ. ಗುರುವಾರಕ್ಕೆ ಮುಂದೂಡಿಕೆ ಮಾಡಲಾಗಿದೆ.
ಮಂಡ್ಯದಲ್ಲಿ ಇಂದು ಶಾಲೆಗಳಿಗೆ ರಜೆ ಘೋಷಣೆ
ಮಂಡ್ಯ ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ಕೃಷ್ಣ ಅವರ ಜನ್ಮಸ್ಥಳವಾದ ಮಂಡ್ಯದಲ್ಲಿ ಶಾಲಾ-ಕಾಲೇಜುಗಳು ಬಂದ್ ಆಗಿರುವುದು ನಾಯಕರಿಗೂ ಜಿಲ್ಲೆಗೂ ಇರುವ ಗಾಢ ಸಂಬಂಧಕ್ಕೆ ಹಿಡಿದ ಕನ್ನಡಿಯಾಗಿದೆ. ಪ್ರಸ್ತುತ ಸ್ಥಳೀಯರು ಮತ್ತು ಸ್ಥಳೀಯ ಮುಖಂಡರು ತಮ್ಮ ಗೌರವವನ್ನು ಸಲ್ಲಿಸಲು ಬೆಂಗಳೂರಿನ ಕಡೆಗೆ ಆಗಮಿಸುತ್ತಿದ್ದಾರೆ.
ಇನ್ನೂ ರಾಜ್ಯದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ಇರುತ್ತದೆ. ಈ ಸಮಯದಲ್ಲಿ ಯಾವುದೇ ಸರ್ಕಾರಿ ಕಾರ್ಯಕ್ರಮಗಳು ಇರುವುದಿಲ್ಲ. ಜೊತೆಗೆ ಸರ್ಕಾರಿ ಕಚೇರಿಗಳಲ್ಲಿ ಅರ್ಧ ಧ್ವಜ ಹಾರಿಸಲಾಗುತ್ತದೆ. ರಾಜ್ಯ ಮತ್ತು ರಾಷ್ಟ್ರಕ್ಕೆ ಎಸ್ಎಂ ಕೃಷ್ಣ ಅವರ ಕೊಡುಗೆಗಳನ್ನು ಗೌರವಿಸಲು ಕರ್ನಾಟಕ ಸರ್ಕಾರ ನಾಳೆ ರಾಜ್ಯಾದ್ಯಂತ ರಜೆ ಘೋಷಿಸಿದೆ.
ಕರ್ನಾಟಕ ರಾಜಕೀಯದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದ ಎಸ್ಎಂ ಕೃಷ್ಣ ಅವರು 1999 ರಿಂದ 2004 ರವರೆಗೆ ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರಿನ ಆಧುನೀಕರಣ ಮತ್ತು ಜಾಗತಿಕ ಹೂಡಿಕೆಗಳನ್ನು ಆಕರ್ಷಿಸುವ ಪ್ರಯತ್ನಗಳಿಗೆ ಹೆಸರುವಾಸಿಯಾದ ಕೃಷ್ಣ ಅವರು ರಾಜ್ಯದ ಅಭಿವೃದ್ಧಿಯಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಅವರ ನಿಧನಕ್ಕೆ ದೇಶಾದ್ಯಂತ ರಾಜಕೀಯ ನಾಯಕರು, ಸಹೋದ್ಯೋಗಿಗಳು ಹಾಗೂ ನಾಗರಿಕರು ಸಂತಾಪ ಸೂಚಿಸುತ್ತಿದ್ದಾರೆ.
ಬುಧವಾರ ಮಂಡ್ಯದ ಕೃಷ್ಣ ಅವರ ಹಳ್ಳಿ ಸೋಮನಹಳ್ಳಿಯಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಹೇಳಲಾಗುತ್ತಿದೆ. ಅಂತ್ಯ ಸಂಸ್ಕಾರದ ಸ್ಥಳವನ್ನು ಸ್ವಚ್ಚಗೊಳಿಸುವ ಕಾರ್ಯ ನಡೆಯುತ್ತಿದೆ. ಇನ್ನೂ ಕರ್ನಾಟಕ ಸರ್ಕಾರ ಅತ್ಯಂತ ಗೌರವಾನ್ವಿತ ರಾಜಕಾರಣಿಗೆ ವಿದಾಯ ಹೇಳಲು ಸಿದ್ಧವಾಗುತ್ತಿದೆ. ಜೊತೆಗೆ ರಾಜ್ಯದ ಹಿರಿಯ ಗಣ್ಯರು ಕೃಷ್ಣ ಅವರ ಅಂತಿಮ ದರ್ಶನ್ ಪಡೆದು ಸಂತಾಪ ಸೂಚಿಸುತ್ತಿದ್ದಾರೆ.












Click it and Unblock the Notifications