ತೌಕ್ತೆ ಅಬ್ಬರ; ಕರ್ನಾಟಕದಲ್ಲಿ 6 ಸಾವು, 121 ಗ್ರಾಮಗಳಲ್ಲಿ ಹಾನಿ
ಬೆಂಗಳೂರು, ಮೇ 18; ಕರ್ನಾಟಕದಲ್ಲಿ ತೌಕ್ತೆ ಚಂಡಮಾರುತದ ಅಬ್ಬರ ಕಡಿಮೆಯಾಗಿದೆ. ಚಂಡಮಾರುತದ ಅಬ್ಬರಕ್ಕೆ ಕರ್ನಾಟಕದಲ್ಲಿ 121 ಗ್ರಾಮಗಳಲ್ಲಿ ಹಾನಿಯಾಗಿದ್ದು, 6 ಜನರು ಮೃತಪಟ್ಟಿದ್ದಾರೆ.
ತೌಕ್ತೆ ಚಂಡಮಾರುತದ ಅಬ್ಬರದಿದಾಗಿ ಕರಾವಳಿ, ಮಲೆನಾಡು ಭಾಗದ ವಿವಿಧ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಮಳೆಯಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್ಡಿಎಂಎ) ರಾಜ್ಯದಲ್ಲಿ ಆಗಿರುವ ಹಾನಿಯ ವಿವರಗಳನ್ನು ನೀಡಿದೆ.
ಸೋಮವಾರ ಸಂಜೆಯ ತನಕ 121 ಹಳ್ಳಿಗಳಲ್ಲಿ ಚಂಡಮಾರುತದಿಂದಾಗಿ ಹಾನಿಯಾಗಿದೆ. ಇದುವರೆಗೂ 547 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. 290 ಜನರು ಇನ್ನೂ ಸಹ 13 ಕಾಳಜಿ ಕೇಂದ್ರದಲ್ಲಿ ವಾಸ್ತವ್ಯ ಪಡೆದಿದ್ದಾರೆ.

333 ಮನೆ, 644 ವಿದ್ಯುತ್ ಕಂಬ, 147 ಟ್ರಾನ್ಸ್ಫರ್ಮರ್, 3,0004.3 ಮೀಟರ್ ಲೈನ್, 57 ಕಿ. ಮೀ. ರಸ್ತೆ, 104 ದೋಣಿಗಳಿಗೆ ಇದುವರೆಗೂ ಹಾನಿಯಾಗಿದೆ. 30 ಹೆಕ್ಟೇರ್ ಕೃಷಿ ಬೆಳೆಗಳು, 2.87 ಹೆಕ್ಟೇರ್ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಯಾವ-ಯಾವ ಜಿಲ್ಲೆ; ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಹಾವೇರಿ, ಧಾರವಾಡ, ಚಾಮರಾಜನಗರ, ಮೈಸೂರು, ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಚಂಡಮಾರುತದಿಂದ ಹಾನಿಯಾಗಿದೆ.
ಸೋಮವಾರ ಚಂಡಮಾರುತ ಮಹಾರಾಷ್ಟ್ರ, ಗುಜರಾತ್ ಕಡೆಗೆ ಸಾಗಿದ್ದರಿಂದ ಕರ್ನಾಟಕದಲ್ಲಿ ಹಾನಿಯ ಪ್ರಮಾಣ ಕಡಿಮೆಯಾಗಿದೆ. ಮಂಗಳೂರಿನಲ್ಲಿ ಟಗ್ನಲ್ಲಿ ಸಿಲುಕಿದ್ದ 9 ಸಿಬ್ಬಂದಿಯನ್ನು ಸೋಮವಾರ ರಕ್ಷಣೆ ಮಾಡಲಾಗಿದೆ.
ನೌಕಾಪಡೆ ಟಗ್ನಲ್ಲಿ ಸಿಲುಕಿದ್ದ ಸಿಬ್ಬಂದಿಯನ್ನು ರಕ್ಷಣೆ ಮಾಡಿದ್ದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಈ ಕುರಿತು ಟ್ವೀಟ್ ಮಾಡಿದ್ದಾರೆ. "ಅರಬ್ಬೀ ಸಮುದ್ರದಲ್ಲಿ ಟಗ್ ನಲ್ಲಿ ಸಿಲುಕಿದ್ದ 9 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಕಾರ್ಯಾಚರಣೆ ನಡೆಸಿದ ಕೋಸ್ಟ್ ಗಾರ್ಡ್ ಹಾಗೂ ನೌಕಾಪಡೆಗೆ ಧನ್ಯವಾದಗಳು. ಇಂದು ಮುಂಜಾನೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ರಕ್ಷಿಸಲಾಗಿದೆ. ಕಾರ್ಮಿಕರ ಆರೋಗ್ಯದ ತಪಾಸಣೆ ಸೇರಿದಂತೆ ಎಲ್ಲ ಅಗತ್ಯ ನೆರವು ಒದಗಿಸಲಾಗುತ್ತಿದೆ" ಎಂದು ಅವರು ಹೇಳಿದ್ದಾರೆ.












Click it and Unblock the Notifications