ಅಧಿವೇಶನಕ್ಕೆ ಆರು 'ಕೈ' ಶಾಸಕರು ಗೈರು? ಬಿಜೆಪಿಯ ಭಾರಿ ರಣತಂತ್ರ
Recommended Video

ಬೆಂಗಳೂರು, ಫೆಬ್ರವರಿ 05: ನಾಳೆಯಿಂದ ಪ್ರಾರಂಭವಾಗುವ ರಾಜ್ಯ ಬಜೆಟ್ ಅಧಿವೇಶನದತ್ತ ರಾಷ್ಟ್ರ ರಾಜಕಾರಣದ ಕಣ್ಣೂ ಸಹ ನೆಟ್ಟಿದೆ. ನಾಳಿನ ಅಧಿವೇಶನಕ್ಕೆ ಆರು ಜನ ಆಡಳಿತ ಪಕ್ಷದ ಶಾಸಕರು ಗೈರಾಗುತ್ತಾರೆ ಎನ್ನಲಾಗಿದ್ದು, ಸರ್ಕಾರವನ್ನು ಮತ್ತೊಮ್ಮೆ ಬಿಜೆಪಿ ಅಡಕತ್ತರಿಗೆ ಸಿಲುಕಿಸಲಿದೆ ಎನ್ನಲಾಗುತ್ತಿದೆ.
ನಾಳೆ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಬಜೆಟ್ ಮಂಡನೆಯು ಫೆಬ್ರವರಿ 8 ನೇ ತಾರೀಖಿನಂದು ನಡೆಯಲಿದೆ. ನಾಳಿನ ಅಧಿವೇಶನಕ್ಕೆ ಆರು ಮಂದಿ ಕಾಂಗ್ರೆಸ್ ಶಾಸಕರನ್ನು ಗೈರು ಮಾಡುವ ಮೂಲಕ ಬಿಜೆಪಿಯು ಸರ್ಕಾರಕ್ಕೆ ನಡುಕ ಹುಟ್ಟಿಸಲಿದೆ.
ನಾಳಿನ ಅಧಿವೇಶನದಲ್ಲಿ ಆರು ಜನ ಕಾಂಗ್ರೆಸ್ ಶಾಸಕರನ್ನು ಗೈರಾಗಿಸಿ ಅಧಿವೇಶನದಲ್ಲಿ ಮೈತ್ರಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡುವ ಸಾಧ್ಯತೆಯೂ ಇದೆ. ಹಾಗೊಮ್ಮೆ ಆದಲ್ಲಿ ಕುಮಾರಸ್ವಾಮಿ ಅವರು ಬಜೆಟ್ ಮಂಡನೆ ಮಾಡುವುದೇ ಅನುಮಾನ ಆಗಿಬಿಡುವ ಸಾಧ್ಯತೆಯೂ ಇದೆ.

ಅವಿಶ್ವಾಸ ನಿರ್ಣಯ ಮಂಡನೆ ಸಾಧ್ಯತೆ
ಅಥವ, ಬಜೆಟ್ ಮಂಡನೆಗೆ ಬಿಟ್ಟು, ಅನುಮೋದನೆ ಮಾಡದೆ, ತಮ್ಮ ಹಿಡಿತದಲ್ಲಿರುವ ಶಾಸಕರಿಂದಲೂ ಬಜೆಟ್ಗೆ ವಿರುದ್ಧವಾಗಿ ಮತಚಲಾವಣೆ ಮಾಡಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ ವಿಶ್ವಾಸ ಮತ ಎಣಿಕೆಗೆ ಬಿಜೆಪಿ ಒತ್ತಾಯಿಸುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ನಾಳಿನ ಅಧಿವೇಶನದಲ್ಲಿ ಬಿಜೆಪಿ ಹಾಗೂ ಮೈತ್ರಿ ಸರ್ಕಾರದ ನಡುವಿನ ಸರ್ಕಾರ ಉರುಳಿಸು-ಉಳಿಸು ಆಟಕ್ಕೆ ಅಂತ್ಯ ಸಿಗುವ ಸಾಧ್ಯತೆ ಇದೆ. ನಾಳೆ ಇಲ್ಲವಾದರೂ ಬಜೆಟ್ ಅಧಿವೇಶನ ಮುಗಿವಷ್ಟರಲ್ಲಿ ಇದು ಸ್ಪಷ್ಟವಾಗುತ್ತದೆ.

118 ಕ್ಕೆ ಬಂದು ನಿಂತಿರುವ ಆಡಳಿತ ಶಾಸಕರ ಸಂಖ್ಯೆ
ಆಡಳಿತ ಪಕ್ಷದ ಪರ ಇದ್ದ ಇಬ್ಬರು ಪಕ್ಷೇತರ ಶಾಸಕರನ್ನು ಬಿಜೆಪಿ ಈಗಾಗಲೇ ತನ್ನ ಕಡೆ ಸೆಳೆದುಕೊಂಡಿದೆ. 120 ಶಾಸಕರ ಬಲವನ್ನು 118 ಕ್ಕೆ ತಂದಿದೆ. ಒಂದೊಮ್ಮೆ ಆರು ಜನ ಆಡಳಿತ ಪಕ್ಷದ ಶಾಸಕರನ್ನು ತನ್ನತ್ತ ಸೆಳೆಯಲು ಯಶಸ್ವಿ ಆದರೆ ಸ್ಪಷ್ಟ ಬಹುಮತಕ್ಕಿಂತಲೂ ಒಂದು ಸಂಖ್ಯೆ ಕಡಿಮೆ (112) ಆಗುತ್ತದೆ. ಆಗ ಅವಿಶ್ವಾಸ ಗೊತ್ತುವಳಿ ಮಂಡಿಸುವುದು ಬಹು ಸುಲಭವಾಗುತ್ತದೆ.

ಹಲವು ಶಾಸಕರ ಸಂಪರ್ಕಿಸಿರುವ ಬಿಜೆಪಿ?
ಈಗಾಗಲೇ ರಮೇಶ್ ಜಾರಕಿಹೊಳಿ, ಉಮೇಶ್ ಜಾಧವ್, ಮಹೇಶ್ ಕಮಟಹಳ್ಳಿ ಅವರುಗಳು ಸರ್ಕಾರದ ವಿರುದ್ಧ ಬಹಿರಂಗವಾಗಿ ಅತೃಪ್ತಿ ಹೊರಹಾಕಿದ್ದಾರೆ. ಅವರ ಜೊತೆ ಬಿ.ನಾಗೇಂದ್ರ ಮತ್ತು ಆನಂದ್ ಸಿಂಗ್ ಅವರನ್ನೂ ಸಹ ಬಿಜೆಪಿ ಸಂಪರ್ಕಿಸಿದೆ ಎನ್ನಲಾಗಿದೆ. ಜೊತೆಗೆ ಕಾಂಗ್ರೆಸ್ನಿಂದ ಉಚ್ಛಾಟಿತವಾಗಿರುವ ಕಂಪ್ಲಿ ಶಾಸಕ ಗಣೇಶ್ ಅವರು ಬಂಧನ ಭೀತಿಯಿಂದಾಗಿ ಅಧಿವೇಶನಕ್ಕೆ ಗೈರಾಗಲಿದ್ದಾರೆ ಎನ್ನಲಾಗಿದೆ.

ಸದನವನ್ನು ರಣರಂಗವಾಗಿಸಲಿದೆ ಬಿಜೆಪಿ
ನಾಳಿನ ಅಧಿವೇಶನದಲ್ಲಿ ಬಿಜೆಪಿಯು ಸದನವನ್ನು ರಣರಂಗವಾಗಿಸುವ ಎಲ್ಲ ತಯಾರಿಗಳನ್ನು ಮಾಡಿಕೊಂಡಿದೆ. ಬರಗಾಲ, ಶಾಸಕರ ಗಲಾಟೆ, ಕುಮಾರಸ್ವಾಮಿ ಅವರ ಕಾಂಗ್ರೆಸ್ ವಿರೋಧಿ ಹೇಳಿಕೆಗಳು, ಶಾಸಕ ಗಣೇಶ್ ಬಂಧನ ಆಗಿಲ್ಲದಿರುವುದು, ಅಧಿಕಾರಿಗಳ ವರ್ಗಾವಣೆ, ಸಿದ್ದರಾಮಯ್ಯ ಅವರ ಹೇಳಿಕೆಗಳು, ಮದ್ಯ ನಿಷೇಧದ ಪ್ರತಿಭಟನೆ ಇನ್ನೂ ಹಲವು ವಿಷಯಗಳನ್ನು ಇಟ್ಟುಕೊಂಡು ಬಿಜೆಪಿಯು ಮೈತ್ರಿ ಸರ್ಕಾರದ ಮೇಲೆ ಏರಿ ಹೋಗಲಿದೆ.












Click it and Unblock the Notifications