ಗೌರಿ ಲಂಕೇಶ್ ಹತ್ಯೆ ಬಗ್ಗೆ ಎಸ್ಐಟಿ ತನಿಖೆ, ಎಚ್ಡಿಕೆ ಹೇಳುವುದೇನು?
ಬೆಂಗಳೂರು, ಸೆಪ್ಟೆಂಬರ್ 08 : 'ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ಮಾಡಿದ್ದು ಕೆಂಪಯ್ಯ ಅವರ ಸಲಹೆಯಂತೆಯೇ? ಎಂದು ಜನರಿಗೆ ತಿಳಿಸಿ' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಆಗ್ರಹಿಸಿದರು.
ಶುಕ್ರವಾರ ಶೇಷಾದ್ರಿಪುರಂನಲ್ಲಿನ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ ಅವರು, 'ಗೃಹ ಸಚಿವ ರಾಮಲಿಂಗಾ ರೆಡ್ಡಿ ಗಮನಕ್ಕೆ ತಂದು ಎಸ್ಐಟಿ ರಚನೆ ಮಾಡಿದ್ದಾರೋ?. ಕೆಂಪಯ್ಯ ಸಲಹೆಯಂತೆ ರಚನೆ ಮಾಡಲಾಗಿದೆಯೋ? ಎಂದು ಜನರಿಗೆ ತಿಳಿಸಬೇಕು' ಎಂದು ಒತ್ತಾಯಿಸಿದರು.
ಗೌರಿ ಹತ್ಯೆ ತನಿಖೆಗೆ ಬಿಕೆ ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡ ರಚನೆ
'ಸೀಜ್ ಮಾಡಿದ ಚಿನ್ನ ಮಾರಿಕೊಂಡ ಅಧಿಕಾರಿಗಳಿಂದ ಯಾವ ತನಿಖೆ ನಿರೀಕ್ಷೆ ಮಾಡಲು ಸಾಧ್ಯ?. ಅಧಿಕಾರಿಗಳು ಮೂರು ದಿನದಿಂದ ಸಿಸಿಟಿವಿ ನೋಡುತ್ತಾ ಕುಳಿತಿದ್ದಾರೆ' ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಗೌರಿ ಲಂಕೇಶ್ ಹತ್ಯೆಯ ಕಡೆಯ ಕ್ಷಣಗಳು ಹೇಗಿದ್ದವು?
'ಹಿಂದೆ ಏಳೂವರೆ ಕೆಜಿ ಚಿನ್ನ ಸೀಜ್ ಮಾಡಿ ಶೇ 50ರಷ್ಟನ್ನು ಮಾರಾಟ ಮಾಡಿ, ಬಾಣಸವಾಡಿಯಲ್ಲಿ ಜಮೀನು ಖರೀದಿ ಮಾಡಿದವರಿಗೆ ತನಿಖೆ ನೇತೃತ್ವ ವಹಿಸಲಾಗಿದೆ. ಇವರಿಂದ ತನಿಖೆ ನಡೆಸುವುದು ಸರಿಯೇ?' ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಕರ್ನಾಟಕ ಸರ್ಕಾರ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ಮಾಡಿದೆ. ಐಪಿಎಸ್ ಅಧಿಕಾರಿ ಬಿ.ಕೆ.ಸಿಂಗ್ ನೇತೃತ್ವದ ಎಸ್ಐಟಿ ರಚನೆ ಮಾಡಲಾಗಿದೆ. ಸೆ.5ರ ಮಂಗಳವಾರ ಬೆಂಗಳೂರಿನ ಆರ್.ಆರ್.ನಗರದಲ್ಲಿ ಗೌರಿ ಲಂಕೇಶ್ ಹತ್ಯೆ ನಡೆದಿತ್ತು.