ದೇವೇಗೌಡರ ಹುಟ್ಟೂರು ಪಕ್ಕದಲ್ಲೇ ದಲಿತರಿಗೆ ಅಪಮಾನ!
ಹೊಳೆನರಸೀಪುರ, ಸೆ.07: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹುಟ್ಟೂರು ಹರದನಹಳ್ಳಿಯ ಸಮೀಪದಲ್ಲಿರುವ
ಸಿಗರನಹಳ್ಳಿ ಗ್ರಾಮದ ದೇವಾಲಯ ವಿವಾದದ ಕೇಂದ್ರ ಬಿಂದುವಾಗಿದೆ. ಈ ದೇಗುಲಕ್ಕೆ ದಲಿತ ಮಹಿಳೆಯೊಬ್ಬರು ಪ್ರವೇಶಿಸಿದ್ದರಿಂದ ಮೈಲಿಗೆಯಾಗಿದೆ ಎಂದು ದೇಗುಲಕ್ಕೆ ಬೀಗ ಜಡಿದಿರುವ ಘಟನೆ ನಡೆದಿದೆ.
ದೇಗುಲಕ್ಕೆ ಬೀಗ ಜಡಿದಿರುವ ಜೊತೆಗೆ ಮಹಿಳೆಯನ್ನು ಕರೆತಂದ ಸ್ತ್ರೀಶಕ್ತಿ ಸಂಘಕ್ಕೆ 1 ಸಾವಿರ ರು ದಂಡ ವಿಧಿಸಲಾಗಿದೆ. ಈ ಬಗ್ಗೆ ಪ್ರಶ್ನಿಸಿದ ಮಹಿಳೆಗೆ ಬೈಗುಳದ ಬಹುಮಾನ ಸಿಕ್ಕಿದೆ. ಸಿಗರನಹಳ್ಳಿಯಲ್ಲಿ ದೇಗುಲದ ಜೊತೆಗೆ ಸಮುದಾಯ ಭವನ, ಶಾಲಾ ಬಿಸಿಯೂಟದ ತಂಡಕ್ಕೂ ದಲಿತರ ಪ್ರವೇಶ ನಿರ್ಬಂಧವಿದೆ.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಸಿಗರನಹಳ್ಳಿ ಗ್ರಾಮದಲ್ಲಿ 20ಕ್ಕೂ ಹೆಚ್ಚು ದಲಿತ ಕುಟುಂಬಗಳು ಮತ್ತು 200ಕ್ಕೂ ಹೆಚ್ಚು ಸವರ್ಣೀಯ ಕುಟುಂಬಗಳಿವೆ.ಗ್ರಾಮದಲ್ಲಿ ಏನೇ ಕೃಷಿ ಚಟುವಟಿಕೆಯಾದರೂ ಒಬ್ಬರ ನೆರವು ಮತ್ತೊಬ್ಬರಿಗೆ ಬೇಕಾಗುತ್ತದೆ. ಆದರೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ಹಬ್ಬ ಹರಿದಿನಗಳಲ್ಲಿ ದಲಿತರಿಗೆ ಅನ್ಯಾಯವಾಗುತ್ತಿದೆ.

ಗ್ರಾಮದಲ್ಲಿರುವ ಬಸವೇಶ್ವರ ದೇಗುಲಕ್ಕೆ ಶಕ್ತ ದಲಿತರು ವಂತಿಗೆ ಕೂಡಾ ನೀಡಿದ್ದಾರೆ. ಅದರೆ, ದಲಿತರ ಪ್ರವೇಶಕ್ಕೆ ಮಾತ್ರ ಸವರ್ಣೀಯರು ಅನುಮತಿ ನೀಡಿಲ್ಲ. ಇದನ್ನು ಖಂಡಿಸಿದ ಸ್ತ್ರೀಶಕ್ತಿ ಸಂಘಟನೆ ಇತ್ತೀಚೆಗೆ ದಲಿತ ಮಹಿಳೆಯರಿಗೆ ದೇಗುಲ ಪ್ರವೇಶ ಕಲ್ಪಿಸಿ, ಅರ್ಚನೆ, ಪೂಜೆ ಪುನಸ್ಕಾರಕ್ಕೆ ಆಸ್ಪದ ಮಾಡಿಕೊಡಲು ಮುಂದಾಯಿತು.
ರೂಢಿಯಿಂದ ಬಂದ ಸಂಪ್ರದಾಯ ಎಂದು ಹೇಳಿ ಮೇಲ್ವರ್ಗದ ಜನರು ದಲಿತರನ್ನು ದೇಗುಲದೊಳಗೆ ಬಿಟ್ಟುಕೊಳ್ಳುತ್ತಿಲ್ಲ. ಜೊತೆಗೆ ದೇಗುಲಕ್ಕೆ ಮೈಲಿಗೆಯಾಗಿದೆ ಎಂದು ದಲಿತರನ್ನು ನಿಂದಿಸಿದ್ದಾರೆ. ಸಂಬಂಧಪಟ್ಟ ಇಲಾಖೆಯವರು, ಅಧಿಕಾರಿಗಳು ಜಾತಿ ನಿಂದನೆ ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ನೊಂದ ದಲಿತರು ಆಗ್ರಹಿಸಿದ್ದಾರೆ.












Click it and Unblock the Notifications