ಬಾದಾಮಿಯಲ್ಲಿ ಸ್ಪರ್ಧಿಸಿದ್ದೇಕೆ? ಸಿದ್ದರಾಮಯ್ಯ ಅವರ ಉತ್ತರ ಇಲ್ಲಿದೆ ನೋಡಿ
ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದ ಜೊತೆಗೆ ಬಾದಾಮಿಯಲ್ಲೂ ಸ್ಪರ್ಧಿಸುತ್ತಿರುವುದನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸೋಲಿಗೆ ಹೆದರಿ ಮಾಡಿರುವ ಪಲಾಯನ ಎನ್ನುತ್ತಿವೆ.
ಸುದ್ದಿ ಮಾಧ್ಯಮಗಳಲ್ಲಿ, ಸಾರ್ವಜನಿಕವಾಗಿಯೂ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ನಿರ್ಣಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇವೆ. ಈ ಬಗ್ಗೆ ಸಿದ್ದರಾಮಯ್ಯ ಅವರು ಬಹಿರಂಗವಾಗಿ ಮಾತನಾಡಿದ್ದು ಮಾತ್ರ ಕಡಿಮೆ ಆದರೆ ಈಗ ಬಗ್ಗೆ ಸಿದ್ದರಾಮಯ್ಯ ಅವರೇ ವಿಸ್ತೃತವಾಗಿ ಮಾತನಾಡಿದ್ದಾರೆ.
ಬಾದಾಮಿ ಮತ್ತು ಚಾಮುಂಡೇಶ್ವರಿ ಎರಡು ಕ್ಷೇತ್ರದಿಂದ ಸ್ಪರ್ಧಿಸುವ ತಮ್ಮ ನಿರ್ಣಯದ ಬಗ್ಗೆ ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಸಿದ್ದರಾಮಯ್ಯ ಅವರು ಜನರ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಬಾದಾಮಿಯಲ್ಲಿ ಸ್ಪರ್ಧಿಸುತ್ತಿರುವುದು ನರೇಂದ್ರ ಮೋದಿ ಮಾದರಿ ಎಂದು ಹೇಳಿಕೊಂಡಿರುವ ಸಿದ್ದರಾಮಯ್ಯ ಅವರು, ಈ ಹಿಂದೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ದೇವೇಗೌಡ, ಕುಮಾರಸ್ವಾಮಿ ಬಂಗಾರಪ್ಪ ಅವರ ಉಲ್ಲೇಖಗಳನ್ನೂ ಮಾಡಿದ್ದಾರೆ.
ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸಿದ ಸಿದ್ದರಾಮಯ್ಯ, ಶ್ರೀರಾಮುಲು
ಬಾದಾಮಿಯಿಂದ ಸ್ಪರ್ಧಿಸುವುದು ಆ ಭಾಗದ ಜನರ ಒತ್ತಾಯವೇ ಹೊರತು ಸೋಲಿಗೆ ಅಂಜಿ ಬಾದಾಮಿಗೆ ಹೋದದ್ದಲ್ಲ ಎಂದು ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ. ಉತ್ತರ ಕರ್ನಾಟಕದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬಲ ತುಂಬುವ ಪ್ರಯತ್ನವೂ ಇದರಲ್ಲಿದೆ ಎಂದಿರುವ ಸಿದ್ದರಾಮಯ್ಯ ಅವರು ಬಾದಾಮಿ ಜನರ ಪ್ರೀತಿಯ ಫಲ ಎಂತಹದ್ದು ಎಂಬುದನ್ನು ಚುನಾವಣಾ ಫಲಿತಾಂಶವೇ ಹೇಳಲಿದೆ ಎಂದಿದ್ದಾರೆ.
ಸಿದ್ದರಾಮಯ್ಯ v/s ಶ್ರೀರಾಮುಲು ಕದನ : ಲಾಭ, ನಷ್ಟದ ಲೆಕ್ಕಾಚಾರ!
ಒಬ್ಬ ಅಭ್ಯರ್ಥಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವುದು ಮುಖ್ಯ ಅಲ್ಲ, ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ಪೂರ್ವಾಪರ ಏನು? ಅವರು ಸ್ಪರ್ಧಿಸುತ್ತಿರುವ ರಾಜಕೀಯ ಪಕ್ಷದ ಸಿದ್ಧಾಂತಗಳೇನು, ಅವುಗಳ ಇತಿಹಾಸ ಏನು? ಚುನಾವಣಾ ಕಣದಲ್ಲಿರುವ ಅಭ್ಯರ್ಥಿ ವಿಶ್ವಾಸಕ್ಕೆ ಅರ್ಹರೇ? ಅವರ ಸಾಧನೆಗಳೇನು? ಅವರು ನುಡಿದಂತೆ ನಡೆಯಬಲ್ಲರೇ? ಎಂಬುದನ್ನು ಮತದಾರರು ತಿಳಿದುಕೊಳ್ಳಲು ಬಯಸುತ್ತಾರೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.