ಡಿಸೆಂಬರ್ಗೆ ಸಿದ್ದರಾಮಯ್ಯ ಸಿಎಂ ಆಗಿರಲ್ಲ: ಭವಿಷ್ಯ ನುಡಿದ ಅಶೋಕ್
ರಾಜ್ಯ ಕಾಂಗ್ರೆಸ್ ಸರ್ಕಾರದ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ಮಹತ್ವದ ಭವಿಷ್ಯವೊಂದನ್ನು ನುಡಿದಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ನವೆಂಬರ್ನಲ್ಲಿ ಟೈಂ ಬಾಂಬ್ ಫಿಕ್ಸ್ ಆಗಿದೆ. ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರೋ ಅಥವಾ ಕಾಂಗ್ರೆಸ್ ಪಕ್ಷವೇ ಒಡೆದು ಬ್ಲಾಸ್ಟ್ ಆಗುತ್ತೋ ಕಾದು ನೋಡಬೇಕು ಎಂದು ಅಶೋಕ್ ಹೇಳಿದ್ದಾರೆ. ಬೆಳಗಾವಿಯಲ್ಲಿ ನಡೆದ ಬಿಜೆಪಿ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿರುವ ಅಶೋಕ್, ಮುಂದಿನ ಬೆಳಗಾವಿ ಅಧಿವೇಶನಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಇಲ್ಲಿಗೆ ಬರಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಎರಡೂವರೆ ವರ್ಷದ ಟೈಮ್ ಬಾಂಬ್ ಈಗಾಗಲೇ ಫಿಕ್ಸ್ ಆಗಿದೆ. ಅದು ನವೆಂಬರ್ನಲ್ಲಿ ಸ್ಫೋಟವಾಗುತ್ತೆ. ಅದು ಸ್ಫೋಟಗೊಂಡಾಗ ಕಾಂಗ್ರೆಸ್ ಸರ್ಕಾರವೇ ಉರುಳುತ್ತೋ ಅಥವಾ ಸಿದ್ದರಾಮಯ್ಯ ಮನೆಗೆ ಹೋಗ್ತಾರೋ ಗೊತ್ತಿಲ್ಲ. ಆ ಪರಿಸ್ಥಿತಿ ಇಂದು ಕರ್ನಾಟಕದಲ್ಲಿದೆ. ಅದಕ್ಕಾಗಿಯೇ ಸಿದ್ದರಾಮಯ್ಯ ಅವರು ಎಷ್ಟಾಗುತ್ತೋ ಅಷ್ಟು ಲೂಟಿ ಮಾಡಿಕೊಂಡು ಹೋಗೋಣ ಎಂದುಕೊಂಡಿದ್ದಾರೆ.

ಅದಕ್ಕಾಗೇ ಮಾನ-ಮರ್ಯಾದೆ ಇಲ್ಲದೆ ನಡೆದುಕೊಳ್ತಿದ್ದಾರೆ. ಇವರು ರಾಜ್ಯದಲ್ಲಿ ಮಂಡಿಸಿದ್ದು ಡೂಪ್ಲಿಕೇಟ್ ಬಜೆಟ್. ಮೊದಲೇ ಇವರು ಡೀಸೆಲ್ ಸೇರಿದಂತೆ ಬೆಲೆ ಏರಿಕೆ ಬಗ್ಗೆ ಘೋಷಣೆ ಮಾಡಬೇಕಿತ್ತು. ಆದರೆ ಈ ಬಜೆಟ್ನಲ್ಲಿ ಏನೂ ಇಲ್ಲ. ಸುಮ್ಮನೆ ಓದಿದ್ದಷ್ಟೇ, ಒಳಗಡೆ ಏನೇನೂ ಇಲ್ಲ. ಸಿಎಂ ಸಿದ್ದರಾಮಯ್ಯನವರು ಕರ್ನಾಟಕವನ್ನ ಮಿನಿ ಪಾಕಿಸ್ತಾನ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ. ಇಲ್ಲಿ ಬಹುಸಂಖ್ಯಾತರು ಹಿಂದೂಗಳಿದ್ದಾರಾ? ಮುಸ್ಲಿಮರಿದ್ದಾರಾ ನನಗೆ ಗೊತ್ತಾಗ್ತಿಲ್ಲ. ಇಂದು ಮುಸ್ಲಿಮರ ಓಲೈಕೆ ಮಾಡುವ ಮೂಲಕ ಮಿನಿ ಪಾಕಿಸ್ತಾನಗಳನ್ನು ಉತ್ಪತ್ತಿ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ನಮ್ಮ ರಾಜ್ಯದಲ್ಲಿ ಹೋಂ ಮಿನಿಸ್ಟರ್ ಯಾರು ಅಂದ್ರೆ ಎಷ್ಟೋ ಜನಕ್ಕೆ ಗೊತ್ತೇ ಇಲ್ಲ. ಎರಡು ವರ್ಷದಿಂದ ಹೋಂ ಮಿನಿಸ್ಟರ್ ಸುಮ್ಮನೆ ಎಲ್ಲವನ್ನೂ ಬಿಟ್ಟಿದ್ದಾರೆ. ಕರ್ನಾಟಕದಲ್ಲಿ ನೀವು ಏನಾದ್ರೂ ಮಾಡ್ಕೊಳ್ಳಿ ಎಂದು ಫ್ರೀ ಬಿಟ್ಟಿದ್ದಾರೆ. ಇಲ್ಲಿ ಕಳ್ಳತನ, ಅತ್ಯಾಚಾರ ಸೇರಿ ಏನೇ ಅಪರಾಧಗಳು ನಡೆದರೂ ಪರಿಶೀಲಿಸಲಾಗುವುದು, ನೋಡಲಾಗುವುದು, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದೇ ಹೇಳುತ್ತಾರೆ ಎಂದು ಲೇವಡಿ ಮಾಡಿದ್ದಾರೆ.

ಹೇಳೋರು, ಕೇಳೋರು ಇಲ್ಲದ ಮಂತ್ರಿಗಳು ಇಲ್ಲಿದ್ದಾರೆ. ಸಿದ್ದರಾಮಯ್ಯ ಅವರು ಎಲ್ಲ ಮಂತ್ರಿಗಳಿಗೆ ಪ್ರತಿ ತಿಂಗಳು ಕುಂದುಕೊರತೆ ಸಭೆ ಮಾಡಬೇಕು ಎಂದು ಹೇಳಿದ್ರು. ಆದರೆ ಯಾವ ಮಂತ್ರಿಯೂ ಮಾಡಿಲ್ಲ, ಅವರು ಪತ್ತೆಯೇ ಇಲ್ಲ. ಅವರು ಜನಗಳನ್ನು ಮರೆತಿದ್ದಾರೆ. ನಾವು ಇನ್ನು ಗ್ಯಾರಂಟಿ ಮತ್ತೆ ಅಧಿಕಾರಕ್ಕೆ ಬರೋದಿಲ್ಲ ಅನ್ನೋದು ಅವರಿಗೆ ಗೊತ್ತಾಗಿದೆ. ಕಾಂಗ್ರೆಸ್ನವರು ಮತ್ತೆ ಬರೋಲ್ಲ ಅನ್ನೋದೆ ಆರನೇ ಗ್ಯಾರಂಟಿ ಎಂದು ವ್ಯಂಗ್ಯ ಮಾಡಿದ್ದಾರೆ.
ಬೆಳಗಾವಿಯಲ್ಲಿ ರಾಜ್ಯದ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ನಡೆಸಿ, ಜೀವನಾವಶ್ಯಕ ವಸ್ತುಗಳ ಬೆಲೆ ಏರಿಸುವ ಮೂಲಕ ಜನಸಾಮಾನ್ಯರ ಬದುಕನ್ನು ಯಾತನೆಗೊಳಿಸಿದ ಕಾಂಗ್ರೆಸ್ ಸರ್ಕಾರದ ನಿರ್ಧಾರಗಳು, ಭ್ರಷ್ಟಾಚಾರ ಹಾಗೂ ಓಲೈಕೆ ರಾಜಕಾರಣಕ್ಕಾಗಿ ಸಮಸ್ತ ಹಿಂದೂಗಳಿಗೆ ದ್ರೋಹ ಬಗೆಯುತ್ತಿರುವ ಸರ್ಕಾರದ ನಿಲುವುಗಳನ್ನು ಖಂಡಿಸಿದ್ದೇವೆ ಎಂದು ಅಶೋಕ್ ಹೇಳಿದ್ದಾರೆ.












Click it and Unblock the Notifications