ಪ್ರಧಾನಿ ಮೋದಿ ಮೌನಕ್ಕೆ ಟ್ವಿಟ್ಟರ್ ನಲ್ಲಿ ಗುದ್ದು ನೀಡಿದ ಸಿದ್ದು!
ಬೆಂಗಳೂರು, ಫೆಬ್ರವರಿ 21: ಪಿಎನ್ ಬಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮೌನವಾಗಿರುವುದಕ್ಕೆ ಕಾರಣವೇನು ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ವಿವರಿಸಿದ್ದಾರೆ.
ಪಂಜಾಬ್ ನ್ಯಾಶನಲ್ ಬ್ಯಾಂಕಿನ ಮುಂಬೈ ಶಾಖೆಯೊಂದರಲ್ಲಿ ಸುಮಾರು 11,000 ಕೋಟಿ ರೂ. ಅವ್ಯವಹಾರ ನಡೆದ ಆರೋಪಕ್ಕೆ ಸಂಬಂಧಿಸಿದಂತೆ ವಜ್ರದ ವ್ಯಾಪಾರಿ ನೀರವ್ ಮೋದಿ ಆರೋಪಿ ಎಂಬುದು ಸಾಬೀತಾಗಿದೆ. ಆದರೆ ಅವರು ಈಗಾಗಲೇ ದೇಶ ಬಿಟ್ಟು ತಲೆಮರೆಸಿಕೊಂಡಿದ್ದಾರೆ.
ಮೋದಿ ಮೌನಕ್ಕೆ ಸಾವಿರ ಅರ್ಥ: ವ್ಯಂಗ್ಯ, ಅಪಹಾಸ್ಯ, ಲೇವಡಿ...
ಈ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಮದ್ರ ಮೋದಿಯವರು ಮಾತ್ರ ತುಟಿಬಿಚ್ಚದೆ ಇರುವುದು ಅಚ್ಚರಿ ಮೂಡಿಸಿದೆ. ನಿನ್ನೆಯಿಂದಲೂ ಟ್ವಿಟ್ಟರ್ ನಲ್ಲಿ ಮೋದಿ ಮೌನಕ್ಕೆ ನೂರಾರು ಅರ್ಥ ಕಲ್ಪಿಸಲಾಗಿತ್ತು. ಆದರೂ ಮೋದಿ ಮೌನವಾಗಿರುವುದಕ್ಕೆ ಕಾರಣವೇನು ಎಂಬುದು ಮಾತ್ರ ತಿಳಿದಿರಲಿಲ್ಲ. ಆದರೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮೋದಿ ಮೌನಕ್ಕೆ ಕಾರಣ ಕಂಡುಹಿಡಿದಿದ್ದಾರೆ!
ಟೀಕಾಪ್ರವೀಣರ ಬಾಯಿ ಮುಚ್ಚಿಸುತ್ತಾರಾ 'ಮೌನಿ'ಮೋದಿ?
|
ಮೋದಿ ಮೌನಕ್ಕೆ ಕಾರಣವೇನು?
"ಹಣಕಾಸು ಸಚಿವ ಅರುಣ್ ಜೇಟ್ಲಿ ನೀರವ್ ಮೋದಿ ಹಗರಣಕ್ಕೆ ಸಂಬಂಧಿಸಿದಂತೆ ಬ್ಯಾಂಕರ್ ಗಳು ಮತ್ತು ಆಡಿಟರ್ ಗಳನ್ನು ದೂರಿದ್ದಾರೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಬಿ ಎಸ್ ಯಡಿಯೂರಪ್ಪನವರು ನನ್ನನ್ನು ದೂರುತ್ತಾರೆ. ಆದರೆ ಪ್ರಧಾನಿ ಮೋದಿ ಮಾತ್ರ ಮೌನವಾಗಿದ್ದಾರೆ. ಯಾಕೆ ಗೊತ್ತಾ? ಬಹುಶಃ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಇಮದಿರಾ ಗಾಂಧಿಯವರನ್ನು ದೂರುವುದಕ್ಕೆ ಯೋಚಿಸುತ್ತಿದ್ದಾರೆ! ಬ್ಯಾಂಕುಗಳನ್ನು ರಾಷ್ಟ್ರೀಕೃತಗೊಳಿಸಿದ್ದಕ್ಕಾಗಿ ಇಂದಿರಾ ಗಾಂಧಿಯವರನ್ನೂ, ಪಿಎನ್ ಬಿ ಸ್ಥಾಪಿಸಿದ್ದಕ್ಕಾಗಿ ಲಾಲಾ ಲಜಪತ್ ರಾಯ್ ಅವರನ್ನೂ ಮೋದಿ ದೂರಬಹುದು!" ಎಂದು ವ್ಯಂಗ್ಯವಾಗಿ ಛೇಡಿಸಿದ್ದಾರೆ ಸಿದ್ದರಾಮಯ್ಯ.
ನೀರವ್ ಮೋದಿ ಯಾರಿಗೆ ಎಷ್ಟು ಕಮಿಶನ್ ಕೊಟ್ಟರು?
ನರೇಂದ್ರ ಮೋದಿಯವರು ರಾಜ್ಯಕ್ಕೆ ಬಂದು ಕಮಿಷನ್ ಬಗ್ಗೆ ಮಾತನಾಡುತ್ತಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕಿನ ರೂ11000 ಕೋಟಿ ಲೂಟಿ ಮಾಡಿರುವ ನೀರವ್ ಮೋದಿ ದೇಶದಿಂದ ಓಡಿಹೋಗಲು ಯಾರಿಗೆ, ಎಷ್ಟು ಕಮಿಷನ್ ನೀಡಿರಬಹುದು? ಎಂದೂ ಪ್ರಶ್ನಿಸಿದ್ದಾರೆ ಸಿದ್ದರಾಮಯ್ಯ!
|
ನರೇಂದ್ರ ಮೋದಿಯವರೇ ಉತ್ತರಿಸಿ...
ನೀವು ಕರ್ನಾಟಕಕ್ಕೆ ಬಂದು ಕಮಿಶನ್ ಬಗ್ಗೆ ಮಾತನಾಡುತ್ತೀರಲ್ಲ, ನಮ್ಮ ಪ್ರಶ್ನೆಗೆ ಮೊದಲು ಉತ್ತರಿಸಿ. ನೀವು ಜನಾಮಾನ್ಯರು ಬ್ಯಾಂಕಿನೆದುರು ಸಾಲು ಸಾಲಾಗಿ ನಿಲ್ಲುವಂತೆ ಮಾಡಿದಿರಿ. ನಂತರ ನೀರವ್ ಮೋದಿ ಜನರ 11,000 ಕೋಟಿ ರೂಗಳನ್ನು ಕೊಳ್ಳೆಹೊಡೆದುಯುವಂತೆ ಮಾಡಿದರಿ. ಈಗ ಹೇಳಿ ಅದು ಜನರ ಹಣವಲ್ಲವೇ? ಎಂದು ಖಡಕ್ ಪ್ರಶ್ನೆ ಎಸೆದಿದ್ದಾರೆ.
|
ಮೋದಿ ಒಬ್ಬ ಚುನಾವಣಾ ಪ್ರಚಾರಕರು ಅಷ್ಟೆ!
ಪ್ರಧಾನಿ ನರೇಂದ್ರ ಮೋದಿ ಎಂದಿಗೂ ಚುನಾವಣಾ ಪ್ರಚಾರ ಮಾಡುತ್ತಿರುತ್ತಾರೆ. ಅವರೊಬ್ಬ ಪ್ರಧಾನಿ ಎಂಬುದಕ್ಕಿಂತ ಒಬ್ಬ ಚುನಾವಣಾ ಪ್ರಚಾರಕರು ಅಷ್ಟೆ. ಆದ್ದರಿಂದ ಇಂಥ ಹಗರಣಗಳ ವಿಷಯ ಬಂದಾಗ ಅವರು ಮೌನವಾಗುತ್ತಾರೆ ಎಂದು ಲೇವಡಿ ಮಾಡಿದೆ ಪಂಜಾಬ್ ಕಾಂಗ್ರೆಸ್!