ಯಡಿಯೂರಪ್ಪ 100 ದಿನದ ಸಾಧನೆ; ಸಿದ್ದರಾಮಯ್ಯ ಟ್ವೀಟ್
Recommended Video
ಬೆಂಗಳೂರು, ನವೆಂಬರ್ 01 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಶನಿವಾರಕ್ಕೆ 100 ದಿನಗಳಾಗಲಿವೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಯಡಿಯೂರಪ್ಪರ 100 ದಿನಗಳ ಸಾಧನೆ ಏನು? ಎಂದು ಹೇಳಿದ್ದಾರೆ.
ಶುಕ್ರವಾರ ಸಿದ್ದರಾಮಯ್ಯ ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ. ಪ್ರವಾಹ, ವರ್ಗಾವಣೆ ದಂಧೆ, ಆಪರೇಷನ್ ಕಮಲ ಮುಂತಾದ ವಿಚಾರಗಳನ್ನು ಟ್ವೀಟ್ಗಳಲ್ಲಿ ಪ್ರಸ್ತಾಪ ಮಾಡಿದ್ದಾರೆ. 'ಯಡಿಯೂರಪ್ಪನವರ ನೂರು ದಿನಗಳ ಸಾಧನೆ ಒಂದು ದೊಡ್ಡ ಸೊನ್ನೆ" ಎಂದು ಟೀಕಿಸಿದ್ದಾರೆ.
ಕರ್ನಾಟಕ ಸರ್ಕಾರದ ಆಯುಷ್ಯದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನವೆಂಬರ್ 2ಕ್ಕೆ ಸರ್ಕಾರ 100 ದಿನ ಪೂರೈಸಲಿದ್ದು, ಶತದಿನೋತ್ಸವ ಆಚರಿಸಲು ಸಿದ್ಧತೆಗಳು ನಡೆಯುತ್ತಿವೆ. ಡಿಸೆಂಬರ್ 5ರಂದು ನಡೆಯಲಿರುವ ಉಪ ಚುನಾವಣೆ ಸರ್ಕಾರದ ಪಾಲಿಗೆ ಮಹತ್ವದ್ದಾಗಿದೆ.
ಕೇಂದ್ರ ಸರ್ಕಾರದ ಅಸಹಕಾರ, ಸ್ವ ಪಕ್ಷದ ನಾಯಕರ ತಂತ್ರಗಳು, ಪ್ರವಾಹ, ಬರಗಾಲ, ಉಪ ಚುನಾವಣೆ ಹೀಗೆ ವಿವಿಧ ಸವಾಲುಗಳನ್ನು ಸರ್ಕಾರ 100 ದಿನದಲ್ಲಿ ಎದುರಿಸಿದೆ. ಪ್ರತಿಪಕ್ಷಗಳು ಟೀಕೆ ಮಾಡುವಂತೆ ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ.

ಸಂತ್ರಸ್ತರಿಗೆ ವ್ಯವಸ್ಥೆ ಮಾಡಿಕೊಡಿ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, "ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್ ಹಾಕಿದ್ದಾರೆ, ಶೌಚಾಲಯಗಳಿಲ್ಲ. ಅವರೆಲ್ಲ ಬಯಲಲ್ಲೇ ಶೌಚ ಮಾಡಬೇಕಾದ ಸ್ಥಿತಿ ಇದೆ. ಹಲವೆಡೆ ಶಾಲಾ ಕಟ್ಟಡ ಬಿದ್ದಿವೆ, ಮಕ್ಕಳಿಗೆ ಕುಳಿತು ಪಾಠ ಕೇಳಲು ಸರಿಯಾದ ವ್ಯವಸ್ಥೆ ಮಾಡಿಲ್ಲ. ಬೀದಿಯಲ್ಲೇ ಪಾಠ ಕೇಳುತ್ತಿದ್ದಾರೆ. ಈ ಅವ್ಯವಸ್ಥೆಗಳಿಗೆ ಮುಕ್ತಿ ಎಂದು?" ಟ್ವೀಟ್ನಲ್ಲಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

100 ದಿನಗಳಸಾಧನೆ ಸೊನ್ನೆ
ಸಿದ್ದರಾಮಯ್ಯ, "ವರ್ಗಾವಣೆಯ ದಂಧೆ, ಆಪರೇಷನ್ ಕಮಲ, ನೆರೆ ಪರಿಹಾರದಲ್ಲಿ ವೈಫಲ್ಯ- ಇವಿಷ್ಟೇ ಯಡಿಯೂರಪ್ಪನವರ ನೂರು ದಿನಗಳ ಸಾಧನೆ. ಒಂದು ದೊಡ್ಡ ಸೊನ್ನೆ" ಎಂದು ಟೀಕಿಸಿದ್ದಾರೆ.

ಯಾವುದು ಸುಳ್ಳು ಲೆಕ್ಕ ಎಂದು ಪ್ರಶ್ನೆ
"ನೆರೆಯಿಂದ 2,47,628 ಮನೆಗಳು ಬಿದ್ದಿವೆ ಎಂದು ಕೇಂದ್ರಕ್ಕೆ ಕೊಟ್ಟಿರುವ ಲೆಕ್ಕ. 92,920 ಸಾವಿರ ಮನೆಗಳಿಗೆ ಹಾನಿಯಾಗಿದೆ ಎಂದು ಜಾಹೀರಾತಿನಲ್ಲಿ ಕೊಟ್ಟಿರುವ ಲೆಕ್ಕ. ಈ ಎರಡರಲ್ಲಿ ಯಾವುದು ಸತ್ಯ?" ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ನಾನು ಸುಳ್ಳು ಹೇಳಿದ್ದೆನೆಯೇ?
"ಪ್ರವಾಹ ಬಂದು 90 ದಿನಗಳಾಗುತ್ತಿದೆ. ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಇದನ್ನು ಹೇಳಿದರೆ ನಾನು ಸುಳ್ಳು ಹೇಳ್ತೇನೆ ಎಂದು ಯಡಿಯೂರಪ್ಪ ಹೇಳುತ್ತಾರೆ. 4 ದಶಕಗಳ ಕಾಲ ರಾಜಕೀಯದಲ್ಲಿದ್ದು, ಶಾಸಕನಿಂದ ಮುಖ್ಯಮಂತ್ರಿವರೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿದ್ದೇನೆ. 13 ಬಾರಿ ಬಜೆಟ್ ಮಂಡಿಸಿದ್ದೇನೆ. ಎಲ್ಲಿಂದ ಮಾಹಿತಿ ಪಡೆಯಬೇಕೆಂದು ಗೊತ್ತಿಲ್ಲವೇ?" ಎಂದು ಸಿದ್ದರಾಮಯ್ಯ ಕೇಳಿದ್ದಾರೆ.












Click it and Unblock the Notifications