ಕಾಂಗ್ರೆಸ್ ಪ್ರಣಾಳಿಕೆ : 5 ನಗರಗಳಲ್ಲಿ ಜನರ ಜೊತೆ ಸಿಎಂ ಸಂವಾದ
ಬೆಂಗಳೂರು, ಜನವರಿ 16 : ಕರ್ನಾಟಕ ಕಾಂಗ್ರೆಸ್ 2018ರ ಚುನಾವಣಾ ಪ್ರಣಾಳಿಕೆ ರಚನೆ ಮಾಡಲು ಹೊಸ ತಂತ್ರವನ್ನು ಅನುಸರಿಸಲಿದೆ. ರಾಜ್ಯದ 5 ಪ್ರಮುಖ ನಗರಗಳಲ್ಲಿ ಕಾಂಗ್ರೆಸ್ ನಾಯಕರು ಜನರ ಜೊತೆ ಸಂವಾದ ನಡೆಸಲಿದ್ದಾರೆ.
ಗುಜರಾತ್ ಚುನಾವಣೆ ಸಮಯದಲ್ಲಿ ಈ ತಂತ್ರವನ್ನು ಅನುಸರಿಸಲಾಗಿತ್ತು. ವಡೋದರಾ, ಅಹಮದಾಬಾದ್, ರಾಜ್ಕೋಟ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಜನರ ಜೊತೆ ಮಾತುಕತೆ ನಡೆಸಲಾಗಿತ್ತು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇದೇ ರೀತಿಯ ತಂತ್ರವನ್ನು ಕರ್ನಾಟಕದಲ್ಲಿಯೂ ಅನುಸರಿಸುವಂತೆ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ. ರಾಜ್ಯದ ಐದು ನಗರಗಳಲ್ಲಿ ಈ ಸಂವಾದ ಕಾರ್ಯಕ್ರಮ ನಡೆಯಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಿರಿಯ ಕಾಂಗ್ರೆಸ್ ನಾಯಕರು ಜನರ ಜೊತೆ ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪಕ್ಷದ ಪ್ರಣಾಳಿಕೆ ಹೇಗಿರಬೇಕು? ಎಂದು ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ.
ಕಾಂಗ್ರೆಸ್ ಪ್ರಣಾಳಿಕೆ ರಚನೆ ಮಾಡಲು ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದ ವರದಿ ತರಿಸಿಕೊಂಡು ಅವರು ಪ್ರಣಾಳಿಕೆಯ ಕರಡು ರಚನೆ ಮಾಡಲಿದ್ದಾರೆ.
ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಅಧಿಕಾರ ಹಿಡಿಯಲು ಈ ಸೂತ್ರ ಅನುಸರಿಸಿತ್ತು. 2013ರ ಚುನಾವಣೆಯಲ್ಲಿ ಜನರಿಂದಲೇ ಮಾಹಿತಿ ಸಂಗ್ರಹಣೆ ಮಾಡಿ, ಪ್ರಣಾಳಿಕೆಯನ್ನು ರಚನೆ ಮಾಡಿತ್ತು.












Click it and Unblock the Notifications