ಸಿದ್ದರಾಮಯ್ಯ ಯೂ ಟರ್ನ್, ಚುನಾವಣೆಗೆ ಸ್ಪರ್ಧಿಸುತ್ತೇನೆ ಅಂದ್ರು
ಬೆಂಗಳೂರು, ಫೆ.13 : '2018ರ ವಿಧಾನಸಭೆ ಚುನಾವಣೆಗೆ ನಾನು ಸ್ಪರ್ಧಿಸಲಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಹಿಂದೆ ಮುಂದಿನ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದಿಲ್ಲ' ಎಂದು ಹೇಳಿದ್ದ ಸಿಎಂ ಶುಕ್ರವಾರ ಯೂ ಟರ್ನ್ ತೆಗೆದುಕೊಂಡಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಟೀಕೆ ಮತ್ತು ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ಅವರು, ಸಾಮಾಜಿಕ ನ್ಯಾಯ ಸೇರಿದಂತೆ ಯಾವುದೇ ವಿಚಾರದ ಬಗ್ಗೆಯೂ ನಾನು ಬಿಜೆಯವರಿಂದ ಪಾಠ ಕಲಿಯಬೇಕಾಗಿಲ್ಲ ಎಂದು ತಿರುಗೇಟು ನೀಡಿದರು. [ಸಿದ್ದರಾಮಯ್ಯ ಸಕ್ರಿಯ ರಾಜಕೀಯಕ್ಕೆ ಗುಡ್ ಬೈ?]
'ನನ್ನ ಸರ್ಕಾರದಲ್ಲಿ ಸಣ್ಣ ಪುಟ್ಟ ದೋಷವಿದೆ. ಆದರೆ, ನಮ್ಮ ಸರ್ಕಾರ 5 ವರ್ಷಗಳ ಅವಧಿಯನ್ನು ಪೂರೈಸಲಿದೆ ಮತ್ತು ಐದು ವರ್ಷವೂ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಹೇಳಿದರು. ಹಾಗೆಯೇ 2018ರ ಚುನಾವಣೆಗೆ ನಾನು ಸ್ಪರ್ಧಿಸುತ್ತೇನೆ' ಎಂದರು.

ಐ ಯಾಮ್ ಎ ಕಾಂಗ್ರೆಸ್ ಮ್ಯಾನ್ : 'ನಾವು ಪ್ರಚಾರಕ್ಕಾಗಿ ಸರ್ಕಾರವನ್ನು ನಡೆಸುವುದಿಲ್ಲ. ನಮ್ಮಲ್ಲಿ ಪ್ರಚಾರ ಇಲ್ಲದಿರುವುದೇ ಕೊರತೆಯಾಗಿದೆ ಎಂದು ಹೇಳಿದ ಸಿದ್ದರಾಮಯ್ಯ ಅವರು, ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ನಾವು 165 ಭರವಸೆಗಳನ್ನು ನೀಡಿದ್ದೆವು, ಅದರಲ್ಲಿ 95 ಭರವಸೆ ಈಡೇರಿಸಿದ್ದೇವೆ. ಪ್ರಚಾರದ ಹುಚ್ಚು ಹಿಡಿಸಿಕೊಂಡು ನಾವು ಆಡಳಿತ ನಡೆಸಿಲ್ಲ' ಎಂದು ತಿಳಿಸಿದರು.
'ದಲಿತರು ಮುಖ್ಯಮಂತ್ರಿಯಾಗುವ ಅವಕಾಶವಿರುವುದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ. ಅಂತಹ ರಾಜಕೀಯ ಸಿದ್ಧಾಂತವಿರುವುದು ಸಹ ಕಾಂಗ್ರೆಸ್ ಪಕ್ಷದಲ್ಲಿ. ಬಿಜೆಪಿಯವರಿಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲ' ಎಂದು ಸಿದ್ದರಾಮಯ್ಯ ಆರೋಪಿಸಿದರು. [ದಲಿತ ನಾಯಕರು ಮುಖ್ಯಮಂತ್ರಿ : ಯಾರು, ಏನು ಹೇಳಿದರು?]
ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸಿಎಂ ಸಿದ್ದರಾಮಯ್ಯ ಅವರು, 'ನಾನು ತೀರ ಕೆಟ್ಟು ಹೋಗಿಲ್ಲ, ಲೂಟಿ ಹೊಡೆದಿಲ್ಲ. ಆದಾಗ್ಯೂ, ಇದು ನನ್ನ ಕೊನೆಯ ಚುನಾವಣೆ. ಆ ಬಳಿಕ ಯಾರು, ಎಷ್ಟೇ ಒತ್ತಡ ಹೇರಿದರೂ ಚುನಾವಣೆಗೆ ನಿಲ್ಲುವುದಿಲ್ಲ' ಎಂದು ಹೇಳಿದ್ದರು. ಆದರೆ, ಇಂದು ಯೂ ಟರ್ನ್ ತೆಗೆದುಕೊಂಡಿರುವ ಅವರು ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ.












Click it and Unblock the Notifications